ಕಟ್ಟಪ್ಪನಿಗೂ ಸ್ವಾಭಿಮಾನ ಇತ್ತು; ಉದ್ಧವ್ಗೆ ಏಕನಾಥ್ ಶಿಂಧೆ ತಿರುಗೇಟು!
ಮುಂಬೈ, ಅ. 06: ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕಟ್ಟಪ್ಪ ಆಗಿದ್ದು, ತನಗೆ ದ್ರೋಹ ಬಗೆದಿದ್ದಾರೆ ಎಂಬ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಕಠೋರ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಶಿಂಧೆ ಸ್ವಾಭಿಮಾನ ಎಂಬ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಿವಸೇನೆ ನಾಯಕತ್ವದ ವಿರುದ್ಧದ ಬಂಡಾಯವನ್ನು ಸಮರ್ಥಿಸಿಕೊಂಡಿದ್ದಾರೆ. ದಸರಾ ಸಂದರ್ಭದಲ್ಲಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಎಂಎಂಆರ್ಡಿಎ ಮೈದಾನದಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಪಕ್ಷವನ್ನು ಉಳಿಸುವ ದಂಗೆಯೇ ಹೊರತು ವಿಶ್ವಾಸಘಾತುಕತನವಲ್ಲ ಎಂದಿದ್ದಾರೆ. ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ರಾಜಕೀಯ ಪರಂಪರೆಯ ನಿಜವಾದ ವಾರಸುದಾರ ಎಂದು ಘೋಷಿಸಿಕೊಂಡಿದ್ದಾರೆ.
ಸಿಎಂ ಏಕನಾಥ್ ಶಿಂಧೆಗೆ ಬಾಳ್ ಠಾಕ್ರೆ ಪುತ್ರ ಜೈದೇವ್ ಬೆಂಬಲ
"ನನ್ನನ್ನು ಕಟ್ಟಪ್ಪ ಎಂದು ಕರೆಯುತ್ತಾರೆ, ನಾನು ನಿಮಗೆ ಹೇಳಬಯಸುತ್ತೇನೆ, ಕಟ್ಟಪ್ಪ ಕೂಡ ಸ್ವಾಭಿಮಾನ ಹೊಂದಿದ್ದರು, ನಿಮ್ಮಂತೆ ಡಬಲ್ ಸ್ಟಾಂಡರ್ಡ್ ಆಗಿರಲಿಲ್ಲ" ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಕಟ್ಟಪ್ಪ ಬಾಹುಬಲಿ ಸಿನಿಮಾದ ಒಂದು ಪಾತ್ರ.
ನಾನು ಜವಾಬ್ದಾರಿ ನೀಡಿದ ವ್ಯಕ್ತಿಗಳು ಕಟ್ಟಪ್ಪ ಆಗಿದ್ದು ಬೇಸರ!
ತಮ್ಮ ಅನಾರೋಗ್ಯವನ್ನು ಕೆಲವರು ದುರುಪಯೋಗಪಡಿಸಿಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದ್ದರು.
"ನಾನು ಆಸ್ಪತ್ರೆಗೆ ದಾಖಲಾದಾಗ, ನಾನು ರಾಜ್ಯದ ಜವಾಬ್ದಾರಿಯನ್ನು ನೀಡಿದ ವ್ಯಕ್ತಿಗಳು 'ಕಟ್ಟಪ್ಪ' ಆಗಿದ್ದು ಮಾತ್ರ ನನಗೆ ಬೇಸರ ಮತ್ತು ಕೋಪ ತರಿಸಿದೆ ಎಂದು ಹೇಳಿದರು. ಅವರು ನಮಗೆ ದ್ರೋಹ ಮಾಡಿದರು. ಅವರು ನನ್ನನ್ನು ಒಳಗೊಳಗೆ ಕತ್ತರಿಸುತ್ತಿದ್ದರು ಮತ್ತು ನಾನು ಎಂದಿಗೂ ಆಸ್ಪತ್ರೆಯಿಂದ ಹಿಂತಿರುಗುವುದಿಲ್ಲ ಎಂದು ಭಾವಿಸಿದ್ದರು" ಎಂದು ಆರೋಪಿಸಿದ್ದರು.
ಕಾಂಗ್ರೆಸ್,ಎನ್ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕ್ಷಮೆ ಕೇಳಿ!
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಠಾಕ್ರೆಯವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಬಂಡಾಯವು ದ್ರೋಹ ಅಲ್ಲ, ಆದರೆ ದಂಗೆ ಎಂದು ಸರ್ಥಿಸಿಕೊಂಡಿದ್ದಾರೆ.
ಜೊತೆಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಪಕ್ಷದ ಸಂಸ್ಥಾಪಕ ಬಾಳ ಠಾಕ್ರೆ ಅವರ ಆದರ್ಶಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ (ಎನ್ಸಿಪಿ) ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಬಾಳ ಠಾಕ್ರೆ ಅವರ ಸ್ಮಾರಕದಲ್ಲಿ ಮಂಡಿಯೂರಿ ಕುಳಿತು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
ಉದ್ಧವ್ ಠಾಕ್ರೆ ಅವರ ಕಾರ್ಯಶೈಲಿಯನ್ನು ಪ್ರಶ್ನಿಸಿದ ಶಿಂಧೆ, ಅವರು ಮುಖ್ಯಮಂತ್ರಿಯಾಗಿದ್ದಾಗ (ನವೆಂಬರ್ 2019-ಜೂನ್ 2022) ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯವಾದ ಮಂತ್ರಾಲಯಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದರು ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಶಿವಸೇನೆಯಿಂದ ಬಂದಿದ್ದರೂ, ಹಿಂದಿನ ಅವಧಿಯಲ್ಲಿ ಸರ್ಕಾರವನ್ನು ನಡೆಸಿದ್ದು ಎನ್ಸಿಪಿ ಎಂದು ಅವರು ಆರೋಪಿಸಿದ್ದಾರೆ.
ಜನರು ಶಿವಸೇನೆ ಮತ್ತು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ
ಏಕನಾಥ್ ಶಿಂಧೆ ಅವರು, "ಬಾಳಾಸಾಹೇಬ್ ಅವರು ತಮ್ಮ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ನಡೆಸುತ್ತಿದ್ದರು. ಆದರೆ, ಉದ್ಧವ್ ಠಾಕ್ರೆ ಅವರು ರಿಮೋಟ್ ಕಂಟ್ರೋಲ್ ಅನ್ನು ಎನ್ಸಿಪಿಗೆ ನೀಡಿದ್ದರು. ಜೊತೆಗೆ ಎನ್ಸಿಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು" ಎಂದು ಆರೋಪಿಸಿದ್ದಾರೆ.
"2019 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಶಿವಸೇನೆ ಮತ್ತು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಆದರೆ ಠಾಕ್ರೆ, ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಕೈಜೋಡಿಸಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಿ ಜನರಿಗೆ "ದ್ರೋಹ" ಮಾಡಿದ್ದರು. ನಾವು ಬಾಳಾಸಾಹೇಬ್ ಸೈನಿಕರು. ನೀವು ಬಾಳಾಸಾಹೇಬ್ ತತ್ವಗಳನ್ನು ಮಾರಿದ್ದೀರಿ. ಯಾರು ಅಧಿಕಾರಕ್ಕಾಗಿ ಹಿಂದುತ್ವಕ್ಕೆ ದ್ರೋಹ ಬಗೆದರೋ ನಿಜವಾದ ದೇಶದ್ರೋಹಿಗಳು" ಎಂದಿದ್ದಾರೆ.
ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಭಾಷಣದಲ್ಲಿ ಶಿಂಧೆ, "ಶಿವಸೇನೆಯನ್ನು ಉಳಿಸಲು, ಬಾಳಾಸಾಹೇಬ್, ಹಿಂದುತ್ವ ಮತ್ತು ಮಹಾರಾಷ್ಟ್ರದ ಒಳಿತಿಗಾಗಿ ನಾವು ಈ ಕ್ರಮವನ್ನು ತೆಗೆದುಕೊಂಡಿದ್ದೇವೆ " ಎಂದು ಹೇಳಿದ್ದಾರೆ.
ಶಿವಾಜಿ ಪಾಕ್್ನಲ್ಲಿ ಉದ್ಧವ್ ಬಣದ ಬೃಹತ್ ರ್ಯಾಲಿ
ಶಿಂಧೆ "ತಾನು ಮುಖ್ಯಮಂತ್ರಿಯಾಗಿ, ದಸರಾ ರ್ಯಾಲಿ ನಡೆಸಲು ಶಿವಾಜಿ ಪಾರ್ಕ್ ಮೈದಾನವನ್ನು ತಮ್ಮ ಬಣಕ್ಕೆ ಪಡೆಯಲು ಮಧ್ಯಸ್ಥಿಕೆ ವಹಿಸಬಹುದಿತ್ತು, ಆದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೆ ಮಾಡುವುದನ್ನು ತಪ್ಪಿಸಿರುವುದಾಗಿ ತಿಳಿಸಿದ್ದಾರೆ. "ನೀವು ಶಿವಾಜಿ ಪಾರ್ಕ್ ಮೈದಾನವನ್ನು ಪಡೆದಿದ್ದರೂ ಸಹ, ನಾವು ಶಿವಸೇನಾ ಪ್ರಮುಖ್ (ದಿವಂಗತ ಬಾಳ ಠಾಕ್ರೆ) ಅವರ ತತ್ವಗಳನ್ನು ಹೊಂದಿದ್ದೇವೆ" ಎಂದಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ದಾದರ್ನಲ್ಲಿರುವ ಐಕಾನಿಕ್ ಮೈದಾನವನ್ನು ದಸರಾ ಕಾರ್ಯಕ್ರಮಕ್ಕೆ ಬಳಸಲು ಮುಂಬೈ ನಾಗರಿಕ ಸಂಸ್ಥೆ ಅನುಮತಿ ನಿರಾಕರಿಸಿದ ನಂತರ ಠಾಕ್ರೆ ನೇತೃತ್ವದ ಬಣ ಕಳೆದ ತಿಂಗಳು ಶಿವಾಜಿ ಪಾರ್ಕ್ನಲ್ಲಿ ತನ್ನ ರ್ಯಾಲಿಯನ್ನು ನಡೆಸಲು ಬಾಂಬೆ ಹೈಕೋರ್ಟ್ಗೆ ಮೊರೆ ಹೋಗಿತ್ತು.
ಹೈಕೋರ್ಟ್ ಉದ್ಧವ್ ಠಾಕ್ರೆ ಬಣದ ಅರ್ಜಿ ಪುರಸ್ಕರಿಸಿ ಅವಕಾಶ ನಿಡಲು ಆದೇಶಿಸಿತ್ತು.