ಪಿಎಫ್ ವಿಥ್ ಡ್ರಾ ನಿಯಮಕ್ಕೆ ಜುಲೈ 31ರ ತನಕ ಬ್ರೇಕ್
ನವದೆಹಲಿ, ಏಪ್ರಿಲ್ 19: ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್) ವಿಥ್ ಡ್ರಾ ನಿಯಮಗಳಿಗೆ ಜುಲೈ 31ರ ತನಕ ತಡೆ ಹಿಡಿಯಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಮಂಗಳವಾರ ಸಂಜೆ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ತೀವ್ರ ಹೋರಾಟ, ಪ್ರತಿಭಟನೆ, ಹಿಂಸಾಚಾರದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. [ಗಾರ್ಮೆಂಟ್ಸ್ ಪ್ರತಿಭಟನೆ: ಇಡೀ ದಿನದ ಅಪ್ಡೇಟ್]
ಆದರೆ, ಪಿಎಫ್ ವಿಥ್ ಡ್ರಾ ಹಿಂಪಡೆಯುವುದರಲ್ಲಿ ಮೂಡಿದ್ದ ಗೊಂದಲ ಮುಂದುವರೆದಿದ್ದು, ಸದ್ಯಕ್ಕೆ ಬೀಸುವ ದೊಣ್ಣೆ ಏಟು ತಪ್ಪಿಸಿಕೊಳ್ಳಲು ಸರ್ಕಾರ ಕಾರ್ಮಿಕರ ಕೋಪ ಶಮನಕ್ಕೆ ಮುಂದಾಗಿದೆ. ಪಿಎಫ್ ನಿಯಮಗಳ ತಿದ್ದುಪಡಿಯಲ್ಲಿನ ಉದ್ದೇಶಿತ ಬದಲಾವಣೆಗಳಿಗೆ ಮೂರು ತಿಂಗಳುಗಳ ಕಾಲ ತಡೆ ಹಿಡಿಯಲಾಗಿದೆ. [ಪಿಎಫ್ ನೀತಿ ಖಂಡನೆ, ಪ್ರತಿಭಟನೆ, ಹೊಸೂರು ರಸ್ತೆ ಟ್ರೆಂಡಿಂಗ್]
ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕರು ಮಾಸಿಕ ಕಂತುಗಳಲ್ಲಿ ಪಾವತಿಸಿದ ಪಿಎಫ್ ಹಣವನ್ನು 58 ವರ್ಷಗಳ ನಂತರ (ನಿವೃತ್ತಿ ನಂತರ) ಹಿಂಪಡೆಯಬೇಕು ಎಂದು ಹೇಳಲಾಗಿತ್ತು.
ಆದರೆ, ತೀವ್ರ ವಿರೋಧದ ನಂತರ ಆರೋಗ್ಯ, ವಸತಿ ವಿಷಯಕ್ಕಾಗಿ, ಮಕ್ಕಳ ಮದುವೆ, ವೃತ್ತಿಪರ ಕೋರ್ಸ್ ಸೇರಲು ಹಣ ಅಗತ್ಯ ಬಿದ್ದಾಗ ಬೇಕಾದರೆ ಮುಂಚಿತವಾಗಿ ಹಿಂಪಡೆಯುವ ಅವಕಾಶ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.
ಮುಂದೇನು?: ಜುಲೈ 31 ರ ತನಕ ಇಪಿಎಫ್ ಒ ಚಂದಾದಾರರಾಗಿದ್ದು ಯಾವುದೇ ಉದ್ಯೋಗದಲ್ಲಿ(2 ತಿಂಗಳುಗಳ ಕಾಲ)ಲ್ಲದವರು ಅಂತಿಮವಾದ ಸೆಟ್ಲ್ ಮೆಂಟ್ ಮಾಡಿಕೊಳ್ಳಲು ಅವಕಾಶವಿದೆ. ಹೊಸ ನಿಯಮದಲ್ಲಿ ಏನೇ ತಿದ್ದುಪಡಿಯಾದರೂ ಅದು ಆಗಸ್ಟ್ 1, 2016ರಿಂದ ಜಾರಿಗೆ ಬರಲಿದೆ. ಇಪಿಎಫ್ ಒ ಕಾರ್ಮಿಕ ಖಾತೆ ಇನ್ನೊಂದಿಷ್ಟು ಕಾಲ ಸಭೆ, ಚರ್ಚೆ ನಡೆಸಿ ಕಾರ್ಮಿಕರ 'ಭವಿಷ್ಯ' ನಿಧಿಗೆ ಹೊಸ ಭಾಷ್ಯ ಬರೆಯಲಿದ್ದಾರೆ.