ಎನ್ರಿಕಾ ಲೆಕ್ಸಿ ಪ್ರಕರಣ: ಮೀನುಗಾರರ ಕುಟುಂಬಕ್ಕೆ 10 ಕೋಟಿ ಪರಿಹಾರ ನೀಡಿದ ಇಟಲಿ
ನವದೆಹಲಿ, ಜೂನ್ 11: ಮೀನುಗಾರರ ಕುಟುಂಬಕ್ಕೆ 10 ಕೋಟಿ ರೂ. ಪರಿಹಾರ ನೀಡುವುದಾಗಿ ಇಟಲಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇಟಲಿಯ ನೌಕಾಪಡೆಯ ಇಬ್ಬರು ನಾವಿಕರು ಮಾಸ್ಸಿಮಿಲಾನೊ ಲ್ಯಾಟೊರೆ ಹಾಗೂ ಸಾಲ್ವಟೋರ್ ಗಿರೋನ್ ವಿರುದ್ಧ ಭಾರತದಲ್ಲಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಆದೇಶಗಳನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
ರಿಪಬ್ಲಿಕ್ ಆಫ್ ಇಟಲಿ ಪರಿಹಾರದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಜಮಾ ಮಾಡಿದೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಇಟಲಿ ನಾವಿಕರಿಂದ ಮೀನುಗಾರರ ಹತ್ಯೆ: ಪ್ರಕರಣ ಅಂತ್ಯಗೊಳಿಸಲು ಮುಂದಾದ ಕೇಂದ್ರ
ಕೇರಳ ಕರಾವಳಿಯ ಬಳಿ 2012 ರ ಸಮುದ್ರದಲ್ಲಿ ಗುಂಡು ಹಾರಿಸಿದ ಘಟನೆಯಲ್ಲಿ ಇಬ್ಬರು ಭಾರತೀಯ ಮೀನುಗಾರರು ಮೃತಪಟ್ಟಿದ್ದರು. ಮಂಗಳವಾರ ಆದೇಶಗಳನ್ನು ಹೊರಡಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
2012 ರ ಸಂತ್ರಸ್ತರಿಗೆ ಇಟಲಿ ನೀಡಿರುವ 10 ಕೋಟಿ ರೂಪಾಯಿಗಳ ಪರಿಹಾರವನ್ನು ಸ್ವೀಕರಿಸಿದ ನಂತರ, ಇಟಾಲಿಯನ್ ನೌಕಾಪಡೆಗಳ ಇಬ್ಬರು ನಾವಿಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಅಂತ್ಯಗೊಳಿಸಲು ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೇರಳ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಗಡಿಯಲ್ಲಿ ಗುಂಡಿನ ದಾಳಿ ಘಟನೆ ನಡೆದಿತ್ತು.ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಕೇಂದ್ರ ಸರ್ಕಾರ ಅದೇ ಮೊತ್ತವನ್ನು ಸುಪ್ರೀಂ ಕೋರ್ಟ್ಗೆ ಜಮಾ ಮಾಡಿದೆ.
ನ್ಯಾಯಮಂಡಳಿಯ ಪ್ರಕಾರ, ಕ್ರಿಮಿನಲ್ ಮೊಕದ್ದಮೆಗೆ ನ್ಯಾಯವ್ಯಾಪ್ತಿ ಇಟಲಿಯೊಂದಿಗಿದೆ ಮತ್ತು ಭಾರತದೊಂದಿಗಿಲ್ಲ ಎಂದು ಸಾಲಿಸಿಟ್ ಜನರಲ್ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ವಿಚಾರಣೆಯ ಸಮಯದಲ್ಲಿ, ನ್ಯಾಯಪೀಠವು ಪರಿಹಾರವನ್ನು ಹೇಗೆ ಹಂಚುವುದು ಮತ್ತು ವಿತರಿಸುವುದು ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿತು.
ರಿಪಬ್ಲಿಕ್ ಆಫ್ ಇಟಲಿ ಪರ ಹಾಜರಾದ ಹಿರಿಯ ವಕೀಲ ಸೊಹೈಲ್ ದತ್ತಾ, ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ಪ್ರಕಾರ ಇಬ್ಬರು ಇಟಾಲಿಯನ್ ನಾವಿಕರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವ ಆದೇಶವನ್ನು ಅಂಗೀಕರಿಸುವಂತೆ ನ್ಯಾಯಪೀಠವನ್ನು ಕೋರಿದರು.
ಘಟನೆ ಹಿನ್ನೆಲೆ: 2012ರ ಫೆಬ್ರವರಿಯಲ್ಲಿ ಇಟಲಿಯ ತೈಲ ಟ್ಯಾಂಕರ್ ಎಂವಿ ಎನ್ರಿಕಾ ಲೆಕ್ಸಿಯಲ್ಲಿ ಬಂದಿದ್ದ ಇಟಲಿಯ ನಾವಿಕರಾದ ಸಾಲ್ವಟೊರ್ ಗಿರೊನ್ ಮತ್ತು ಮಾಸ್ಸಿಮಿಲಿಯಾನೊ ಲಾಟೊರ್ರೆ, ಭಾರತದ ಪ್ರತ್ಯೇಕ ಆರ್ಥಿಕ ವಲಯದಲ್ಲಿ (ಇಇಝೆಡ್) ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ್ದರು.
ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು. ಸಾಲ್ವೊಟೊರ್ ಗಿರೋನ್ 2014ರ ಆಗಸ್ಟ್ 31ರಂದು ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಿ ಇಟಲಿಗೆ ತೆರಳಲು ಅವಕಾಶ ನೀಡಲಾಗಿತ್ತು.
ಇಟಲಿಯಲ್ಲಿ ಅವರು ಹೃದಯ ಚಿಕಿತ್ಸೆಗೆ ಕೂಡ ಒಳಗಾಗಿದ್ದರು. 2016ರ ಮೇ 26ರಂದು ಮಾಸ್ಸಿಮಿಲಿಯಾನೊ ಲಾಟೊರ್ರೆಗೆ ಜಾಮೀನು ನೀಡಿದ್ದ ನ್ಯಾಯಾಲಯ, ಅವರನ್ನೂ ಇಟಲಿಗೆ ಮರಳಲು ಅವಕಾಶ ನೀಡಿತ್ತು.