'ಇಂಗ್ಲಿಷ್ ಮನಸ್ಥಿತಿಯ' ರೋಗ, ಉಪರಾಷ್ಟ್ರಪತಿ ಹೇಳಿದ ಮಾತೃಭಾಷೆ ಹಿರಿಮೆ
'ಇಂಗ್ಲಿಷ್ ಮನಸ್ಥಿತಿ' ರೋಗವೇ ಹೊರತು ಆ ಭಾಷೆಯಲ್ಲ. ಭಾರತದ ಶ್ರೀಮಂತ ಪರಂಪರೆ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ 'ಹಿಂದಿ ದಿವಸ್' ಕಾರ್ಯಕ್ರಮದಲ್ಲಿ ನಾಯ್ಡು ಆಡಿದ್ದರು ಎನ್ನಲಾದ ಮಾತೊಂದು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
"ಬ್ರಿಟಿಷರು ಬಿಟ್ಟುಹೋದ ಇಂಗ್ಲಿಷ್ ಭಾಷೆ ಒಂದು ರೋಗ" ಎಂದು ವೆಂಕಯ್ಯ ನಾಯ್ಡು ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಅದಕ್ಕೆ ಸಮಜಾಯಿಷಿ ನೀಡಿದ ಅವರು, ಮಾತೃ ಭಾಷೆಯ ರಕ್ಷಣೆ ಹಾಗೂ ಪ್ರೋತ್ಸಾಹದ ಬಗ್ಗೆ ಮಾತನಾಡುತ್ತಿದ್ದೆ. ಆಗ ಇಂಗ್ಲಿಷ್ ಒಂದು ರೋಗ ಅಂತ ನಾನು ಹೇಳಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಬಂದಿತ್ತು. ಆದರೆ ಹಾಗೆ ಹೇಳಿರಲಿಲ್ಲ ಎಂದರು.
ಹಿಂದಿ-ಅಮೆರಿಕದಲ್ಲಿ ಅತೀ ಹೆಚ್ಚು ಬಳಸುವ ಭಾರತೀಯ ಭಾಷೆ
ಇಂಗ್ಲಿಷ್ ಎಂಬುದು ರೋಗವಲ್ಲ. ಆದರೆ ಬ್ರಿಟಿಷರು ಬಿಟ್ಟುಹೋದ ಇಂಗ್ಲಿಷ್ ಮನಸ್ಥಿತಿ ಒಂದು ರೋಗ ಎಂದು ನಾಯ್ಡು ಹೇಳಿದರು. ಗೋವಾದ ಪಣಜಿಯಲ್ಲಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
"ಬ್ರಿಟಿಷರು ದೇಶ ಬಿಟ್ಟೇನೋ ಹೋದರು. ಆದರೆ ನಮ್ಮಲ್ಲೊಂದು ಕೀಳರಿಮೆ ಸೃಷ್ಟಿಸಿದರು. ಬ್ರಿಟಿಷರು, ವಿದೇಶೀಯರು ಮಹಾನ್. ನಾವು ಏನೇನೂ ಅಲ್ಲ ಎಂಬ ಆಲೋಚನೆ ನಮ್ಮಲ್ಲಿ ಬಿತ್ತಿದರು. ಆ ಮನಸ್ಥಿತಿಯಿಂದ ನಾವು ಆಚೆ ಬರಬೇಕು. ನಮ್ಮ ಸಂಸ್ಕೃತಿ, ಗತ ವೈಭವ ಹಾಗೂ ಮಹಾನ್ ನಾಯಕರ ಬಗ್ಗೆ ಹೆಮ್ಮೆ ಪಡಬೇಕು" ಎಂದರು.
ವೀರಪುತ್ರರ ನಾಡು ಈಸೂರಿನ ಇತಿಹಾಸ ನಿಮಗೆಷ್ಟು ಗೊತ್ತು?
ಭಾರತವು ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ. ಆದರೆ ಹೊರಗಿನವರಿಂದ ಹಾಳಾಗಿದೆ. ಹೊರಗಿನವರು ನಮ್ಮನ್ನು ಆಳಿದರು ಹಾಗೂ ನಾಶ ಮಾಡಿದರು. ಆರ್ಥಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ನಮ್ಮನ್ನು ನಾಶ ಮಾಡಿದರು. ಕೆಲವರು ಆ ಕಾಯಿಲೆಯಿಂದ ನರಳುತ್ತಲೇ ಇದ್ದಾರೆ. ಭಾರತೀಯರು ಮತ್ತೆ ತಮ್ಮ ಬೇರಿಗೆ, ಮೂಲಕ್ಕೆ ಹಿಂತಿರುಗಬೇಕಿದೆ ಎಂದರು.
ಭಾರತದಲ್ಲಿ 19,500ಕ್ಕೂ ಅಧಿಕ ಆಡುಭಾಷೆಗಳು : ಗಣತಿ ವರದಿ
ಬ್ರಿಟಿಷರ ಕಾಲದ ಪದ್ಧತಿ, ಆಚರಣೆಗಳನ್ನು ಬಿಡಿ. ಅದಕ್ಕಾಗಿ ಬೇಕಾದ ಪ್ರಯತ್ನಗಳನ್ನು ರಾಜ್ಯಸಭಾದಲ್ಲಿ ನಾನು ಮಾಡಿದೆ. ಕುಟುಂಬಗಳ ಮಧ್ಯೆ ಮಾತೃಭಾಷೆಯಲ್ಲೇ ಮಾತನಾಡುವುದು ಚೆಂದ. ನಮಗೆ ಸುಂದರವಾದ ಭಾಷೆಗಳಿವೆ. ಅವುಗಳನ್ನು ನಾವು ಗೌರವಿಸಬೇಕು. ಇಂಗ್ಲಿಷ್ ಸೇರಿದಂತೆ ಯಾವುದೇ ವಿದೇಶಿ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ನಮ್ಮ ಚರ್ಚೆ ಹಾಗೂ ಸಂವಾದ ಮಾತೃ ಭಾಷೆಯಲ್ಲೇ ಆಗಬೇಕು ಎಂದರು.
ಕೊಂಕಣಿ (ಗೋವಾದಲ್ಲಿ ಮಾತನಾಡುವ ಪ್ರಮುಖ ಭಾಷೆ) ಸೇರಿದಂತೆ ಭಾರತದಲ್ಲಿ ಆಡುವ ಇಪ್ಪತ್ತೆರಡು ಭಾಷೆಗಳನ್ನು ರಾಜ್ಯಸಭಾದಲ್ಲಿ ಬಳಸುವ ಅವಕಾಶ ನೀಡಿದೆ ಎಂದು ಇದೇ ಸಂದರ್ಭದಲ್ಲಿ ವೆಂಕಯ್ಯ ನಾಯ್ಡು ಹೇಳಿದರು.