ಮಹಾನ್ ಮೇಧಾವಿ ಸರ್ ಎಂವಿಗೆ ಜೈಹೋ ಎಂದ ಟ್ವಿಟ್ಟಿಗರು
ನವದೆಹಲಿ, ಸೆಪ್ಟೆಂಬರ್ 15: ತಮ್ಮ ಅದ್ಭುತ ಬುದ್ಧಿಮತ್ತೆಗೆ ಹೆಸರಾದ, ದೇಶದ ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸಿದ, ಪ್ರಾಮಾಣಿಕತೆಯ ಪ್ರತಿರೂಪವೆಂಬಂತಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ(15.9.1861 - 12.4.1962) ಅವರ ಜನ್ಮದಿನವನ್ನು ಭಾರತದಾದ್ಯಂತ ರಾಷ್ಟ್ರೀಯ ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ.
ಸ್ವತಃ ಇಂಜಿನಿಯರ್ ಆಗಿ ಹತ್ತು ಹಲವು ಅಭಿವೃದ್ಧಿ ನಕ್ಷೆಗಳನ್ನು ಹಾಕಿಕೊಟ್ಟು, ನವಕರ್ನಾಟಕ, ನವ ಭಾರತ ನಿರ್ಮಾಣಕ್ಕೆ ಬುನಾದಿ ಹಾಕಿಕೊಟ್ಟ ವಿಶ್ವೇಶ್ವರಯ್ಯ ಅವರು ಕನ್ನಡದವರು ಎಂಬುದು ನಮ್ಮ ಹೆಮ್ಮೆ.
ಅಭಿಜಾತ ಅಭಿಯಂತ ಸರ್ ಎಮ್ ವಿಶ್ವೇಶ್ವರಯ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸೆಪ್ಟೆಂಬರ್ 15, 1861 ರಲ್ಲಿ ಜನಿಸಿದ ವಿಶ್ವೇಶ್ವರಯ್ಯ ಅವರ ಪೂರ್ವಜನರೆಲ್ಲ ಆಂಧ್ರ ಪ್ರದೇಶದ ಪ್ರಕಾಸಂ ಜಿಲ್ಲೆಯ 'ಮೋಕ್ಷಗುಂಡಂ' ಎಂಬ ಹಳ್ಳಿಯವರು. ಅದಕ್ಕೆಂದೇ ವಿಶ್ವೇಶ್ವರಯ್ಯ ಹೆಸರಿನೊಂದಿಗೆ ಅವರ ಮೂಲ ಹಳ್ಳಿಯ ಹೆಸರೂ ಸೇರಿಕೊಂಡು ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದೇ ಪ್ರಸಿದ್ಧರಾದರು.
ತಂದೆ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಮತ್ತು ತಾಯಿ ವೆಂಕಟಲಕ್ಷ್ಮಿ. ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲೇ ಮುಗಿಸಿದ ಸರ್ ಎಂ. ವಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ, ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು.
ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯದಲ್ಲೇ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ವಿಶ್ವೇಶ್ವರಯ್ಯ ಅವರು 1912 ರಿಂದ 1918 ರವರೆಗೆ ಮೈಸೂರಿನ ದಿವಾನರಾಗಿ ಕೈಗೊಂಡ ಸೇವೆ ಅನನ್ಯವಾದುದು.
ಅಸೀಮತೆಯ ಅಮಿತಾಬರಯ್ಯ ಈ ನಮ್ಮ ಸರ್ ಎಂ. ವಿಶ್ವೇಶ್ವರಯ್ಯ
ಮೈಸೂರು ಸೋಪ್ ಫ್ಯಾಕ್ಟರಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೃಷ್ಣರಾಜ ಸಾಗರ ಅಣೆಕಟ್ಟು ಸೇರಿದಂತೆ ಕರ್ನಾಟಕದ ಅಸಂಖ್ಯ ಜನರಿಗೆ ಉಪಯೋಗವಾಗಿರುವ ಇಂಥ ಹತ್ತು ಹಲವಾರು ಕೆಲಸಗಳ ಹಿಂದೆ ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಕೆಲಸ ಮಾಡಿದೆ.
ಸ್ವಂತ ಉಪಯೋಗಕ್ಕಾಗಿ ಸರ್ಕಾರದ ನಯಾಪೈಸೆಯನ್ನೂ ಕಣ್ಣಿಂದ ನೋಡುವುದಕ್ಕೂ ಹೋಗದ, ನಿಷ್ಠೆಗೆ ಅನ್ವರ್ಥ ಎಂಬಂತಿದ್ದ ಸರ್ ಎಂವಿ ಅವರಿಗೆ, ಅವರ ಫಲಾಪೇಕ್ಷೆ ಇಲ್ಲದ ಸೇವೆಗೆ ನಮ್ಮ ನಮನಗಳು. ಸರ್ ಎಂವಿ ಅವರ ಅನನ್ಯ ಬುದ್ಧಿಮತ್ತೆ, ಅಸ್ಖಲಿತ ಮಾತು, ಅವಿರತ ದುಡಿಮೆ, ಅನಿರ್ವಚನೀಯ ವ್ಯಕ್ತಿತ್ವಕ್ಕೆ ನಮಸ್ಕರಿಸಿ, ಇಂಜಿನಿಯರ್ ದಿನಕ್ಕೆ ಶುಭಕೋರೋಣ.
ಇಂಜಿನಿಯರ್ ದಿನದ ನಿಮಿತ್ತ, ವಿಶ್ವೇಶ್ವರಯ್ಯ ಅವರನ್ನು ನೆನಪಿಸಿಕೊಂಡ ಗಣ್ಯರ ಟ್ವೀಟ್ ಇಲ್ಲಿದೆ.
|
ಅಭಿಯಂತರರ ದಿನಾಚರಣೆ
ಶ್ರೀ ಎಂ ವಿಶ್ವೇಶ್ವರಯ್ಯನವರ ನೆನಪಿನಲ್ಲಿ ಆಚರಿಸಲಾಗುವ ಅಭಿಯಂತರರ ದಿನಾಚರಣೆಯಂದು ನಾಡಿನ ಅಭಿವೃದ್ಧಿಗೆ ಎಂಜಿನಿಯರ್ ಗಳ ಸೇವೆಯನ್ನು ಸ್ಮರಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಅಮಿತ್ ಶಾ
ಪೂಜನೀಯ ಸ್ಥಾನದಲ್ಲಿರುವ ಇಂಜಿನಿಯರ್ ಗಳಲ್ಲೊಬ್ಬರಾದ ಭಾರತ ರತ್ನ ಎಂ. ವಿಶ್ವೇಶ್ವರಯ್ಯ ಅವರಿಗೆ ನಮನಗಳು. ನನ್ನೆಲ್ಲ ಇಂಜಿನಿಯರ್ ಸ್ನೇಹಿತರಿಗೂ ಇಂಜಿನಿಯರ್ ದಿನದ ಶುಭಾಶಯಗಳು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
|
ಭಾರತದ ನಿಜವಾದ ನಿರ್ಮಾತೃರು!
ಸಂಕೀರ್ಣವಾದ ಸಂಸ್ಕರಣಾಗಾರಗಳಿಂದ ಹಿಡಿದು ಆಧುನಿಕ ಬುಲೆಟ್ ಟ್ರೈನ್ ವರೆಗೂ ಭಾರತದ ನಿಜವಾದ ನಿರ್ಮಾತೃರು ಇಂಜಿನಿಯರ್ ಗಳು. ಈ ದಿನ ಮಹಾನ್ ಇಂಜಿನಿಯರ್ ಎಂ. ವಿಶ್ವೇಶ್ವರಯ್ಯ ಅವರನ್ನು ಸ್ಮರಿಸೋಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
|
ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ
ದೇಶ ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲ ಇಂಜಿನಿಯರ್ ಗಳಿಗೂ ಇಂಜಿನಿಯರ್ ದಿನದ ಶುಭಾಶಯಗಳು ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.
|
ನಮ್ಮ ನಮನ
ಚಿಂತಕ, ಇಂಜಿನಿಯರ್, ವಿದ್ವಾಂಸ ಸರ್ ಎಂ. ವಿಶ್ವೇಶ್ವರಯ್ಯನವರ ಸ್ಮರಣೆಗಾಗಿ ಇಂಜಿನಿಯರ್ ದಿನ ಆಚರಿಸಲಾಗುತ್ತದೆ. ಅವರಿಗೆ ನಮ್ಮ ನಮನಗಳು ಎಂದು ಬಾಕ್ಸರ್ ವಿಜೇಂದ್ರ್ ಸಿಂಗ್ ಟ್ವೀಟ್ ಮಾಡಿದ್ದಾರೆ.