ಕೇಜ್ರಿವಾಲ್ಗೆ 364 ರು. ಡಿಡಿ ಬಂದದ್ದಾದರೂ ಯಾಕೆ?
ನವದೆಹಲಿ, ಫೆಬ್ರವರಿ 04: ಈ ಅರವಿಂದ್ ಕೇಜ್ರಿವಾಲ್ ಏನೂ ಮಾಡಿದರೂ ಸುದ್ದಿ, ಏನು ಮಾಡದಿದ್ದರೂ ಸುದ್ದಿ. ಇದೀಗ ದೆಹಲಿ ಮುಖ್ಯಮಂತ್ರಿಗೆ ಬಂದ ಡಿಡಿ ಒಂದು ಸುದ್ದಿ ಮಾಡುತ್ತಿದೆ.
ದಯವಿಟ್ಟು ಭಾರತದ ಮಾನ ಹರಾಜು ಹಾಕಬೇಡಿ ಎಂದು ಬೇಡಿಕೊಂಡಿರುವ ವಿಶಾಖಪಟ್ಟಣದ ಇಂಜಿನಿಯರ್ ಒಬ್ಬರು ಅರವಿಂದ್ ಕೇಜ್ರಿವಾಲ್ ಗೆ ಶೂ ಖರೀದಿಸಲು 364 ರೂಪಾಯಿ ಡಿಡಿ ಕಳುಹಿಸಿದ್ದಾರೆ.
ಗಣರಾಜ್ಯೋತ್ಸವ ದಿನ ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚಪ್ಪಲಿ ಧರಿಸಿ ಆಗಮಿಸಿದ್ದು ವಿಶಾಖಪಟ್ಟಣದ ಮೆಕ್ಯಾನಿಕಲ್ ಎಂಜಿನೀಯರ್ ಸುಮಿತ್ ಅಗರ್ವಾಲ್ ಅವರಿಗೆ ಸಿಟ್ಟಿಗೆ ಕಾರಣವಾಗಿದೆ. ರು. 364 ಹಣವನ್ನು ಡಿಡಿ ಕಳುಹಿಸಿರುವ ಸುಮಿತ್ ಅಗರ್ವಾಲ್ ಮತ್ತೊಮ್ಮೆ ದೇಶವನ್ನು ಮುಜುಗರಕ್ಕೀಡು ಮಾಡಬಾರದೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಂಜಿನಿಯರ್ ಮಾತೇನು?
ರಾಷ್ಟ್ರಪತಿ ಭವನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಪಾಲ್ಗೊಂಡಿದ್ದರು. ಈ ವೇಳೆ ಏರ್ಪಡಿಸಿದ್ದ ಔತಣಕೂಟದಲ್ಲಿ ಕೇಜ್ರಿವಾಲ್ ಚಪ್ಪಲಿ ಹಾಕಿಕೊಂಡಿದ್ದರು. ಅವರು ಆಮ್ ಆದ್ಮಿ ಪಕ್ಷದ ಪ್ರತಿಭಟನೆಯಲ್ಲಾದರೆ ಯಾವುದನ್ನು ತೊಡಬಹುದಿತ್ತು. ಆದರೆ ಇಲ್ಲಿ ದೇಶದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಭಾರತದ ಮಾನ ಹರಾಜು
ದೇಶದ ಗಣ್ಯರ ಎದುರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಶೂ ಧರಿಸಿ ತೆರಳಬಹುದಿತ್ತು. ಆದರೆ ಚಪ್ಪಲಿ ಧರಿಸಿ ದೇಶದ ಮಾನವನ್ನೇ ಹರಾಜು ಹಾಕಿದ್ದಾರೆ ಎನ್ನುವುದು ಇಂಜಿನಿಯರ್ ಮಾಡುವ ಗಂಭೀರ ಆರೋಪ.
ಪರ-ವಿರೋಧ
ಇಂಜಿನಿಯರ್ ಮಾಹಿತಿಯನ್ನು ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪರ-ವಿರೋಧದ ಅಭಿಪ್ರಾಯವೂ ವ್ಯಕ್ತವಾಗಿದೆ. ಶೂ ಧರಿಸಿದ ಮಾತ್ರಕ್ಕೆ ಶಿಸ್ತೆ? ಮಹತ್ಮರು ಶೂ ಧರಿಸಿದ್ದರೆ ಎಂಬ ಪ್ರಶ್ನೆಗಳು ವ್ಯಕ್ತವಾಗಿದೆ.
364 ರು. ಡಿಡಿ
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 364 ರು. ಡಿಡಿ ಯನ್ನು ತೆಗೆಯಲಾಗಿದೆ. ನಾನೊಬ್ಬ ಉದ್ಯಮಿ ಎಂದು ಹೇಳಿಕೊಂಡಿರುವ ಸುಮಿತ್ ಯಾಕಾಗಿ ಹಣ ಕಳಿಸುತ್ತಿದ್ದೇನೆ ಎಂಬುದನ್ನು ವಿವರವಾಗಿ ಬರೆದಿದ್ದಾರೆ.