ಕೊರೊನಾ ನಿಯಮ ಪಾಲನೆ ರಾಜ್ಯಗಳ ಹೊಣೆ; ಚುನಾವಣಾ ಆಯೋಗ
ನವದೆಹಲಿ, ಏಪ್ರಿಲ್ 28: ದೇಶದಲ್ಲಿ ಕೊರೊನಾ ಎರಡನೇ ಅಲೆ ಇಷ್ಟು ಆತಂಕಕಾರಿ ಮಟ್ಟದಲ್ಲಿ ಹರಡಲು ಚುನಾವಣಾ ಆಯೋಗವೇ ಕಾರಣ. ಚುನಾವಣಾ ಮತದಾನ ಸಮಯದಲ್ಲಿ ಆಯೋಗ ಕೊರೊನಾ ಮಾರ್ಗಸೂಚಿಗಳ ಪಾಲನೆಯಲ್ಲಿ ಸೋತಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿಕೆ ನೀಡಿದ ಬೆನ್ನಲ್ಲೇ, ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ.
ಕೊರೊನಾ ವಿರುದ್ಧ ಹೋರಾಡಲು ಕಾನೂನು ನಿಬಂಧನೆಗಳನ್ನು ಜಾರಿಗೊಳಿಸುವುದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜವಾಬ್ದಾರಿ ಎಂದು ಹೇಳಿದೆ.
ದೇಶದಲ್ಲಿ ಕೊರೊನಾ ಏರಿಕೆಗೆ ಚುನಾವಣಾ ಆಯೋಗವೇ ಕಾರಣ ಎಂದ ಮದ್ರಾಸ್ ಹೈಕೋರ್ಟ್
ಚುನಾವಣಾ ಪ್ರಚಾರ ಹಾಗೂ ಮತದಾನದ ಸಮಯದಲ್ಲಿ ಕೊರೊನಾ ಸೋಂಕಿನ ಹರಡುವಿಕೆ ತಡೆಗಟ್ಟಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆಗಳನ್ನು ಜಾರಿಗೊಳಿಸುವಂತೆ ರಾಜ್ಯ ಹಾಗೂ ಜಿಲ್ಲಾಡಳಿತಗಳಿಗೆ ನಿರಂತರವಾಗಿ ನಿರ್ದೇಶನ ನೀಡಿರುವುದಾಗಿ ಆಯೋಗ ಪ್ರತಿಪಾದಿಸಿದೆ.
ಹೈಕೋರ್ಟ್ನ ಎಲ್ಲಾ ನಿರ್ದೇಶನಗಳನ್ನು ಆಯೋಗ ಪಾಲಿಸಿದೆ ಎಂದು ಹೇಳಿದ್ದು, ಮುಂದಿನ ವಿಚಾರಣೆ ಸಮಯದಲ್ಲಿ, ನ್ಯಾಯಯುತ, ಸುರಕ್ಷಿತ ಚುನಾವಣೆ ನಡೆಸಲು ಆಯೋಗ ಕೈಗೊಂಡಿದ್ದ ಎಲ್ಲಾ ಕ್ರಮಗಳ ಬಗ್ಗೆ ವಿವರಿಸುವುದಾಗಿ ತಿಳಿಸಿದೆ. ತಮ್ಮ ವಿರುದ್ಧ ನ್ಯಾಯಪೀಠ ನಡೆಸಿದ ಮೌಖಿಕ ಅವಲೋಕನಗಳನ್ನು ಚುನಾವಣಾ ಆಯೋಗ ಉಲ್ಲೇಖಿಸಿದೆ.
ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆದಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ಸುರಕ್ಷಿತ ಮತ ಎಣಿಕೆಯನ್ನು ಖಚಿತಪಡಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿ, ಇದೇ ರೀತಿಯ ಅರ್ಜಿಗಳನ್ನು ಈಗಾಗಲೇ ಹಲವರು ಸಲ್ಲಿಸಿದ್ದಾರೆ ಹಾಗೂ ಅವರಿಗೆ ಪ್ರತಿಕ್ರಿಯೆ ನೀಡಲಾಗಿದೆ ಎಂದು ತಿಳಿಸಿದೆ.
ಕೊರೊನಾ ನಿಯಮ ಪಾಲನೆ ಕ್ರಮಗಳನ್ನು ಜಾರಿಗೊಳಿಸುವುದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೊಣೆ ಎಂದು ಪುನರುಚ್ಚರಿಸಿರುವ ಆಯೋಗ, ಈ ಕ್ರಮಗಳು ಲಾಕ್ಡೌನ್, ಸಾರ್ವಜನಿಕ ಕೂಟಗಳ ಮೇಲಿನ ನಿರ್ಬಂಧವನ್ನು ಒಳಗೊಂಡಿದೆ ಎಂದು ತಿಳಿಸಿದೆ. ಚುನಾವಣಾ ಸಮಯದಲ್ಲಿ ಸಾರ್ವಜನಿಕರು ಸೇರುವುದರ ಮೇಲೆ ರಾಜ್ಯಗಳು ಯಾವುದೇ ನಿರ್ಬಂಧ ಹೇರಿಲ್ಲ ಎಂದಿದೆ.
ಮೇ 2ರಂದು ಮತ ಎಣಿಕೆ ನಡೆಸುವಾಗ ಕೊರೊನಾ ತಡೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಾರಿಗೆ ಸಚಿವ, ಎಐಎಡಿಎಂಕೆ ಅಭ್ಯರ್ಥಿ ಎಂ.ಆರ್. ವಿಜಯಭಾಸ್ಕರ್ ಸಲ್ಲಿಸಿದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಪೀಠ, ದೇಶದಲ್ಲಿ ಕೊರೊನಾ ಎರಡನೇ ಅಲೆ ನಡುವೆಯೂ ಪಂಚರಾಜ್ಯಗಳಲ್ಲಿ ಚುನಾವಣಾ ಸಮಾವೇಶ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಇದೇ ಕೊರೊನಾ ಹರಡಲು ಬಹು ಮುಖ್ಯ ಕಾರಣ ಎಂದು ತರಾಟೆಗೆ ತೆಗೆದುಕೊಂಡಿತ್ತು.
ಈ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿಕೊಳ್ಳಬಹುದು ಎಂದು ಕಟುವಾಗಿ ಟೀಕಿಸಿತ್ತು.