Breaking: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಇಡಿ ನೋಟಿಸ್
ನವದೆಹಲಿ, ಏಪ್ರಿಲ್ 11: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೋಮವಾರ ನೋಟಿಸ್ ಜಾರಿಗೊಳಿಸಿದ್ದಾರೆ.
ಕಳೆದ 1937ರ ನವೆಂಬರ್ 20ರಂದು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಯು ಬಹಾದ್ದೂರ್ ಶಾ ಜಫರ್ ಮಾರ್ಗ್, ನವದೆಹಲಿ ನೊಂದಾಣಿ ವಿಳಾಸ ಮತ್ತು 5 ಲಕ್ಷ ರೂಪಾಯಿ ಬಂಡವಾಳದ ಮೂಲಕ ಅಸ್ತಿತ್ವಕ್ಕೆ ಬಂದಿತ್ತು. ಈ ಸಂಸ್ಥೆಗೆ ಜವಾಹರ್ ಲಾಲ್ ನೆಹರೂ ಮಾರ್ಗದರ್ಶಿ ಹಾಗೂ ಮುಖ್ಯಸ್ಥರಾಗಿದ್ದರು. ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಈ ಸಂಸ್ಥೆಯ ಷೇರನ್ನು ಹೊಂದಿದ್ದರು, ಇದರ ಜೊತೆಗೆ ನೂರು ರೂಪಾಯಿ ಮುಖಬೆಲೆಯ 2,000 ಮತ್ತು 10 ರೂಪಾಯಿ ಮುಖಬೆಲೆಯ 30,000 ಇಕ್ವಿಟಿ ಷೇರನ್ನು ಇವರಿಗೆಲ್ಲಾ ಹಂಚಲಾಗಿತ್ತು.
ಈ ಕಂಪೆನಿ 1938ರ ಸೆಪ್ಟೆಂಬರ್ 9ರಂದು ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಲಖನೌದಲ್ಲಿ ಇಂಗ್ಲಿಷ್ ಆವೃತ್ತಿ 'ನ್ಯಾಷನಲ್ ಹೆರಾಲ್ಡ್' ಎನ್ನುವ ಹೆಸರಿನ ಮೂಲಕ ಪತ್ರಿಕೆಯನ್ನು ಆರಂಭಿಸಲಾಗಿತ್ತು. ಬಳಿಕ ಹಿಂದಿ ಆವೃತ್ತಿ ನವಜೀವನ್ ಮತ್ತು ಉರ್ದು ಆವೃತ್ತಿ ಕ್ವಾಮಿ ಆವಾಜ್ ಎನ್ನುವ ಪತ್ರಿಕೆಗಳನ್ನೂ ಆರಂಭಿಸಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಅಂದಿನ ಪ್ರಧಾನಿ ನೆಹರೂ, ಸಂಸ್ಥೆಗೆ ನವದೆಹಲಿ, ಲಕ್ನೋ, ಭೋಪಾಲ್, ಮುಂಬೈ, ಇಂದೋರ್ ಸೇರಿದಂತೆ ಹಲವಡೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅವ್ಯವಹಾರದ ಆರೋಪ:
ದೇಶದಲ್ಲಿ ತದನಂತರ ಪ್ರಕಟಗೊಂಡ ಇತರ ಪತ್ರಿಕೆಗಳಿಗೆ ಪೈಪೋಟಿ ನೀಡುವುದುಕ್ಕೆ ಸಾಧ್ಯವಾಗದೇ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗದೇ ತೀವ್ರ ವೈಫಲ್ಯವನ್ನು ಅನುಭವಿಸಿತು. ಇದರ ಪರಿಣಾಮವಾಗಿ ಜಾಹೀರಾತು ಆದಾಯದ ಕೊರತೆ ಸೃಷ್ಟಿಯಾಯಿತು. ಕಳೆದ 2008ರಲ್ಲಿ ಮೂರೂ ಆವೃತ್ತಿಯ ಪ್ರಕಟಣೆ ಸ್ಥಗಿತಗೊಳಿಸುತ್ತಿರುವುದಾಗಿ ಪತ್ರಿಕೆ ಘೋಷಿಸಿತು. 29.09.2010ರ ವೇಳೆಗೆ ಷೇರು ಹೋಲ್ಡರುಗಳ ಸಂಖ್ಯೆ 1057ಕ್ಕೆ ಇಳಿದಿತ್ತು. ಆ ಸಮಯದಲ್ಲಿ ಸಂಸ್ಥೆಯು 90.25 ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು.
ನ್ಯಾಷನಲ್ ಹೆರಾಲ್ಡ್ ಮತ್ತು ಕಾಂಗ್ರೆಸ್ ನಡುವಿನ ನಂಟು:
ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ವೈಐಎಲ್ 90.25 ಕೋಟಿ ರೂಪಾಯಿ ಬಡ್ಡಿರಹಿತ ಸಾಲವನ್ನು ನೀಡಿತ್ತು. ಇದರಲ್ಲಿ ಎಐಸಿಸಿ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿ ನೇರವಾಗಿ ವರ್ಗಾವಣೆಯಾಗಿತ್ತು ಎಂಬ ಆರೋಪವಿದೆ. ಅಲ್ಲದೇ, ಹೆರಾಲ್ಡ್ ಒಡೆತನದಲ್ಲಿದ್ದ 'ಹೆರಾಲ್ಡ್ ಹೌಸ್' ನವೀಕರಣಕ್ಕೆ ಒಂದು ಕೋಟಿ ರೂಪಾಯಿ ನೀಡಿತ್ತು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ವಿರುದ್ಧ ಸುಬ್ರಮಣ್ಯನ್ ಸ್ವಾಮಿ ಆರೋಪ:
2012ರಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭಾರೀ ಪ್ರಮಾಣದ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಮಣ್ಯನ್ ಸ್ವಾಮಿ ದೂರು ದಾಖಲಿಸಿದ್ದರು. ಆದಾಯ ತೆರಿಗೆ ಕಾನೂನು 1961 ಪ್ರಕಾರ, ರಾಜಕೀಯ ಪಕ್ಷವೊಂದು ಮೂರನೇ ಕಂಪನಿಗೆ ಸಾಲ ಕೊಡುವಂತಿಲ್ಲ. „ ಎಜೆಎಲ್ ಮತ್ತು ವೈಎಎಲ್ ಮಧ್ಯೆ ಹಣದ ಅವ್ಯವಹಾರ ನಡೆದಿದೆ. ಎಜೆಎಲ್ ದೆಹಲಿ, ಮುಂಬೈ ಮುಂತಾದ ಕಡೆಗಳಲ್ಲಿ ಆಸ್ತಿಯನ್ನು ಹೊಂದಿದ್ದು ದೆಹಲಿಯ ಆಯಕಟ್ಟಿನ ಪ್ರದೇಶಗಳಲ್ಲಿ ಕಟ್ಟಡವನ್ನೂ ಹೊಂದಿದೆ. ಇದರ ಇಂದಿನ ಮಾರುಕಟ್ಟೆ ಬೆಲೆ ಎರಡು ಸಾವಿರ ಕೋಟಿ ರೂಪಾಯಿಗೂ ಅಧಿಕ ಎಂದು ಸುಬ್ರಮಣ್ಯನ್ ಸ್ವಾಮಿ ವಾದಿಸಿದ್ದಾರೆ.