ಸಿದ್ದಗಂಗಾ ಶ್ರೀಗಳಿಗೆ ಎಂಡೋಸ್ಕೋಪಿ ನಡೆಸಿದ ವೈದ್ಯರು
ಎಂಡೋಸ್ಕೋಪಿ ಮುಗಿದ ನಂತರ ಸ್ವಾಮೀಜಿಯವರ ಆರೋಗ್ಯ ಸ್ಥಿರವಾಗಿದ್ದು, ನಿಧಾನವಾಗಿ ಚೇತರಿಕೆ ಕಾಣಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರು, ಮೇ 12: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದಗಂಗಾ ಶ್ರೀಗಳಿಗೆ ಕೆಂಗೇರಿ ಆಸ್ಪತ್ರೆಯಲ್ಲಿ ವೈದ್ಯರು ಎಂಡೋಸ್ಕಪಿ ನಡೆಸಿದ್ದಾರೆ.
ಈ ಮೂಲಕ ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಎಂಡೋಸ್ಕೋಪಿ ಮುಗಿದ ನಂತರ ಸ್ವಾಮೀಜಿಯವರ ಆರೋಗ್ಯ ಸ್ಥಿರವಾಗಿದ್ದು, ನಿಧಾನವಾಗಿ ಚೇತರಿಕೆ ಕಾಣಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಣ್ಯರ ಭೇಟಿ: ಚಿಕಿತ್ಸೆಗೊಳಪಟ್ಟಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಶುಕ್ರವಾರ ರಾತ್ರಿ ಭೇಟಿ ಮಾಡಿದರು.
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ''ಶ್ರೀಗಳು ವಯೋಸಹಜ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಅವರು ಹಸನ್ಮುಖಿಯಾಗಿದ್ದಾರೆ. ನನ್ನೊಂದಿಗೆ ಹಾಗೂ ದೇವೇಗೌಡರೊಂದಿಗೆ ನಗುತ್ತಲೇ ಮಾತನಾಡಿದರು'' ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ''ಶ್ರೀಗಳ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆಯಾಗುತ್ತಿದೆ. ಇನ್ನೊಂದು ವಾರ ಯಾರೂ ಶ್ರೀಗಳನ್ನು ಭೇಟಿ ಮಾಡಬಾರದು'' ಎಂದು ಅಭಿಪ್ರಾಯಪಟ್ಟರು.