ಬಿಜೆಪಿಯು ಕಾಶ್ಮೀರದಲ್ಲಿ ಸರಕಾರ ಕೆಡವಿದ ನಂತರ ಯಾರು, ಏನು ಹೇಳಿದರು?
ಜಮ್ಮು- ಕಾಶ್ಮೀರದಲ್ಲಿ ಬಿಜೆಪಿ ಹಾಗೂ ಪಿಡಿಪಿ ಮಧ್ಯದ ಮೈತ್ರಿ ಮಂಗಳವಾರ ಮುರಿದು ಬಿದ್ದಿದೆ. ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ನೀಡುವುದರ ಬಗ್ಗೆ ಬಿಜೆಪಿ ಘೋಷಿಸುತ್ತಿದ್ದಂತೆಯೇ ಅಲ್ಲಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ. ಆ ನಂತರ ನ್ಯಾಷನಲ್ ಕಾನ್ಫರೆನ್ಸ್ ಆಗಲಿ, ಕಾಂಗ್ರೆಸ್ ಆಗಲಿ ಸರಕಾರ ರಚನೆಯ ಬಗ್ಗೆ ಸಕಾರಾತ್ಮಕ ಮಾತೇ ಆಡಿಲ್ಲ.
ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚಾಯಿತು. ಹಿಂಸಾಚಾರ, ಮೂಲಭೂತವಾದ ತಾರಕಕ್ಕೇರಿತು. ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಯಾಯಿತು. ಹೀಗೆ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆಯಲು ಏನೇನೋ ಕಾರಣಗಳನ್ನು ನೀಡಿದೆ. ಆದರೆ ಇದೊಂದು ಲೆಕ್ಕಾಚಾರದ ನಡೆ ಎಂದು ವಿಶ್ಲೇಷಿಸುವವರು ಹಲವರಿದ್ದಾರೆ.
Timeline: ಬಿಜೆಪಿ -ಪಿಡಿಪಿ ಅಪವಿತ್ರ ಮೈತ್ರಿ, ಬ್ರೇಕ್ ಅಪ್
ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಸುವ ಇಂಗಿತ ಇರುವ ಪ್ರಧಾನ ಮಂತ್ರಿ ಮೋದಿ ಪಾಲಿಗೆ ಜಮ್ಮು- ಕಾಶ್ಮೀರ ಮತ್ತೊಂದು ಪ್ರಯೋಗ ಶಾಲೆ. ಪಿಡಿಪಿ- ಬಿಜೆಪಿ ಒಂದೇ ಒರೆಯಲ್ಲಿ ಇಡುವ ಕತ್ತಿ ಅಲ್ಲವೇ ಅಲ್ಲ. ಇಷ್ಟು ಕಾಲ ಜತೆಯಲ್ಲಿ ಇದ್ದುದೆ ದೊಡ್ಡ ವಿಚಾರ ಎನ್ನುತ್ತಾರೆ. ಒಟ್ಟಾರೆ ಯಾವ ಪಕ್ಷದ ಮುಖಂಡರು ಏನು ಹೇಳಿದರು ಎಂಬ ಪ್ರತಿಕ್ರಿಯೆಗಳು ಇಲ್ಲಿವೆ.
ಮೆಹಬೂಬಾ ಮುಫ್ತಿ, ಪಿಡಿಪಿ
ನನಗೆ ಇದರಿಂದ ಆಘಾತ ಏನೂ ಆಗಿಲ್ಲ. ಅಧಿಕಾರಕ್ಕಾಗಿ ನಾವು ಈ ಮೈತ್ರಿ ಮಾಡಿಕೊಂಡಿದ್ದಲ್ಲ. ಈ ದೋಸ್ತಿಯ ಹಿಂದೆ ದೊಡ್ಡ ಉದ್ದೇಶವಿತ್ತು. ಏಕಪಕ್ಷೀಯ ಕದನ ವಿರಾಮ, ಪ್ರಧಾನಿಗಳ ಪಾಕಿಸ್ತಾನ ಭೇಟಿ, ಹನ್ನೊಂದು ಸಾವಿರ ಯುವ ಜನರ ವಿರುದ್ಧದ ಪ್ರಕರಣ ಹಿಂತೆಗೆತ ಹೀಗೆ ಹಲವು ಉದ್ದೇಶಗಳು ಈಡೇರಿವೆ.
ರಾಮ್ ಮಾಧವ್, ಬಿಜೆಪಿ
ನಾವು ಜನಾದೇಶವನ್ನು ಗೌರವಿಸಬೇಕಿತ್ತು. ಒಂದು ವೇಳೆ ಆಗ ನಾವು ಸರಕಾರವನ್ನು ರಚಿಸದೆ ಹೋಗಿದ್ದರೆ ರಾಜ್ಯಪಾಲರ ಅಥವಾ ರಾಷ್ಟ್ರಪತಿಗಳ ಆಡಳಿತ ಹೇರಲಾಗುತ್ತಿತ್ತು. ಜನಾದೇಶದ ಸಲುವಾಗಿ ನಾವು ಅವರ ಜತೆಗೆ ಮೈತ್ರಿ ಮಾಡಿಕೊಂಡೆವು.
ಅಹ್ಮದ್ ಮೀರ್, ಪಿಡಿಪಿ
ಬಿಜೆಪಿ ಜತೆ ಸೇರಿ ಸರಕಾರ ನಡೆಸುವುದಕ್ಕೆ ನಮ್ಮೆಲ್ಲ ಪ್ರಯತ್ನ ಮಾಡಿದೆವು. ಇದು ಆಗಲೇಬೇಕಿತ್ತು. ನಮಗೆ ಇದು ಅಚ್ಚರಿ. ಏಕೆಂದರೆ, ಅವರ ನಿರ್ಧಾರದ ಬಗ್ಗೆ ನಮಗೆ ಯಾವುದೇ ಸೂಚನೆ ಇರಲಿಲ್ಲ.
ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್
ಯಾವುದೇ ರಾಜಕೀಯ ನಾಯಕರ ಜತೆ ಸೇರಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವೂ ಯಾರನ್ನು ಸಂಪರ್ಕಿಸಿಲ್ಲ. ಹಾಗೇ ನಮ್ಮನ್ನೂ ಯಾರೂ ಸಂಪರ್ಕಿಸಿಲ್ಲ. ಯಾವ ಪಕ್ಷಕ್ಕೂ ಜನಾದೇಶ ಇಲ್ಲವಾದ್ದರಿಂದ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರಬೇಕು ಎಂದು ಕೇಳಿಕೊಂಡಿದ್ದೀನಿ. ರಾಜ್ಯದಲ್ಲಿ ಶೀಘ್ರವಾಗಿ ಸಹಜ ಸ್ಥಿತಿ ತರಲು ಪ್ರಯತ್ನ ಮಾಡಲಾಗುವುದು.
ಗುಲಾಂ ನಬಿ ಆಜಾದ್, ಕಾಂಗ್ರೆಸ್
ಏನಾಯಿತೋ ಅದು ಒಳ್ಳೆಯದಕ್ಕೇ. ಜಮ್ಮು-ಕಾಶ್ಮೀರದ ಜನರು ನಿರಾಳ ಆಗಬಹುದು. ಅವರು (ಬಿಜೆಪಿ) ಕಾಶ್ಮೀರವನ್ನು ಹಾಳು ಮಾಡಿದರು. ಈಗ ಉರುಳಿಸಿದ್ದಾರೆ. ಈ ಮೂರು ವರ್ಷದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸೇನಾ ಯೋಧರು ಹಾಗೂ ನಾಗರಿಕರು ಮೃತ ಪಟ್ಟಿದ್ದಾರೆ. ಈಗ ಪಿಡಿಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸಲ್ಲ.
ಉದ್ಧವ ಠಾಕ್ರೆ, ಶಿವಸೇನಾ
ಜಮ್ಮು-ಕಾಶ್ಮೀರದಲ್ಲಿ ಬೆಂಬಲ ವಾಪಸ್ ತೆಗೆದುಕೊಳ್ಳಬೇಕು ಎಂದು ತಿಳಿಯುವುದಕ್ಕೆ ಮೂರೂವರೆ ವರ್ಷ ಸಮಯ, ಆರುನೂರು ಸೈನಿಕರ ಪ್ರಾಣತ್ಯಾಗ ನೀಡಬೇಕಾಯಿತು. ಆ ಸರಕಾರ ಹೇಗೆ ಕಾರ್ಯ ನಿರ್ವಹಿಸುತ್ತದೆ ಅಂತ ಗೊತ್ತಿದ ಮೇಲೆ ಇಷ್ಟು ದೀರ್ಘ ಕಾಲ ಅವರನ್ನು ಹೇಗೆ ಬೆಂಬಲಿಸಿದಿರಿ?
ಸಂಜಯ್ ರಾವತ್, ಶಿವಸೇನಾ
ಈ ಮೈತ್ರಿ ರಾಷ್ಟ್ರ ವಿರೋಧಿ ಹಾಗೂ ಅಸಹಜ. ನಮ್ಮ ಪಕ್ಷದ ಮುಖ್ಯಸ್ಥರು ಹೇಳಿದ್ದರು: ಈ ಮೈತ್ರಿ ಕೆಲಸ ಮಾಡುವುದಿಲ್ಲ. ಒಂದು ವೇಳೆ ಈ ಮೈತ್ರಿಯನ್ನು ಮುಂದುವರಿಸಿದ್ದರೆ ಲೋಕಸಭೆ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿತ್ತು.
ಸೀತಾರಾಂ ಯೆಚೂರಿ, ಸಿಪಿಎಂ
ಇಂಥ ಮೈತ್ರಿ ಆಗಬಾರದು. ಈ ಎರಡು ಪಕ್ಷಗಳ ಮಧ್ಯೆ ಸಾಮ್ಯತೆ ಇಲ್ಲ. ಅಧಿಕಾರದಲ್ಲಿ ಇರುವ ಸಲುವಾಗಿ ಒಟ್ಟಾಗಿ ತೆಗೆದುಕೊಂಡ ಅವಕಾಶವಾದಿ ನಡೆ ಅದು.
ಅರವಿಂದ್ ಕೇಜ್ರಿವಾಲ್
ಅದನ್ನು ಹಾಳು ಮಾಡಿದ ನಂತರ, ಕಾಶ್ಮೀರದಲ್ಲಿ ಬಿಜೆಪಿ ಕೆಡವಿದೆ. ಅಪನಗದೀಕರಣದಿಂದ ಕಾಶ್ಮೀರದಲ್ಲಿ ಭಯೋತ್ಪಾದಕರ ಬೆನ್ನು ಮೂಳೆ ಮುರಿಯಲಾಯಿತು ಎಂದು ಬಿಜೆಪಿ ಹೇಳಿರಲಿಲ್ಲವೆ? ಆ ನಂತರ ಏನಾಯಿತು?