ಕುಪ್ವಾರ:ಉಗ್ರರ ವಿರುದ್ಧ ಕಾರ್ಯಾಚರಣೆ, ಯೋಧನ ಆತ್ಮಾರ್ಪಣೆ
ಶ್ರೀನಗರ, ಆಗಸ್ಟ್ 17: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನಾಪಡೆ ಹಾಗೂ ಶಸ್ತ್ರಧಾರಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧನೊಬ್ಬ ಆತ್ಮಾರ್ಪಣೆಗೈದಿದ್ದಾರೆ. ಗುಂಡಿನ ಚಕಮಕಿ ಬಳಿಕ ಇಬ್ಬರು ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಕುಪ್ವಾರ ಜಿಲ್ಲೆಯ ಕಛ್ಲು ಗ್ರಾಮದ ಕ್ರಾಲ್ಗುಂಡ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಮಾಹಿತಿಗಳು ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಸೇನಾ ಪಡೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು.
ಕಾಶ್ಮೀರ: ಉಗ್ರರ ದಾಳಿಗೆ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮ
ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಕೂಡಲೇ ಸೇನಾ ಪಡೆ ಸ್ಥಳ ಸುತ್ತುವರೆದು ಎನ್ ಕೌಂಟರ್ ನಡೆಸಲು ಆರಂಭಿಸಿತ್ತು. ಘಟನೆ ವೇಳೆ ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದರು.
ಇದೀಗ ಯೋಧರೊಬ್ಬರು ಹುತಾತ್ಮರಾಗಿದ್ದು, ಉಗ್ರರು ತಪ್ಪಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಇದೀಗ ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.