ಅಂಡಮಾನಿನಲ್ಲಿ ಕೊಲೆಯಾದ ಅಮೆರಿಕದವನ ಡೈರಿಯಲ್ಲಿತ್ತು ಸಾವಿನ ಸೂಚನೆ!
ಪೋರ್ಟ್ ಬ್ಲೇರ್, ನವೆಂಬರ್ 22: "ಈ ಸಾಹಸದ ಪ್ರವಾಸವನ್ನುನೋಡಿ ನನಗೆಲ್ಲೋ ಹುಚ್ಚು ಎಂದು ನಿಮಗನ್ನಿಸಬಹುದು, ಆದರೆ ನನಗೆ ಇದು ಸಾಕಷ್ಟು ಬೆಲೆಬಾಳುವಂಥದ್ದು ಎನ್ನಿಸುತ್ತದೆ. ಅಕಸ್ಮಾತ್ ನನನ್ನು ಯಾರಾದರೂ ಸಾಯಿಸಿದರೆ ದಯವಿಟ್ಟು ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ..."
ಇದು ಅಂಡಮಾನಿನ ಸೆಂಟಿನಿಲೀಸ್ ಬುಡಕಟ್ಟು ಜನಾಂಗದವರಿಂದ ಹತ್ಯೆಗೊಳಗಾದ ಅಮೆರಿಕದ ಜಾನ್ ಅಲೆನ್ ಚೌ, ತನ್ನ ಡೈರಿಯಲ್ಲಿ ಬರೆದಿದ್ದ ಕೊನೆಯ ಸಾಲು!
ಅಂಡಮಾನ್-ನಿಕೋಬಾರ್ ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ, ಶವಕ್ಕಾಗಿ ಶೋಧ
ಚೌ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಜನ ಮೀನುಗಾರರನ್ನು ಬಂಧಿಸಲಾಗಿದೆ. ಆದರೆ ಚೌ ಸಾವು ಹಲವು ನಿಗೂಢ ವಿಷಯಗಳನ್ನು ಕೆದಕುವಂತೆ ಮಾಡಿದೆ. ಚೌ ಅಂದು ತೆರಳಿದ್ದು ಅಂಡಮಾನಿನ ನಿಷೇಧಿತ ಸ್ಥಳಕ್ಕೆ! ಚೌ ಅಲ್ಲಿಗೆ ತೆರಳಲು ಅನುಮತಿ ಸಿಕ್ಕಿದ್ದು ಹೇಗೆ? ಕ್ರೈಸ್ತ ಮಿಶನರಿಯಾಗಿದ್ದ ಚೌ ತನ್ನೊಂದಿಗೆ ಬೈಬಲ್ ಅನ್ನು ಹಿಡಿದಿದ್ದರು. ಸೆಂಟಿನಿಲೀಸ್ ಬುಡಕಟ್ಟು ಜನರ ಮತಾಂತರಕ್ಕೆ ಅವರು ಪ್ರಯತ್ನಿಸಿದ್ದರೆ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಎದ್ದಿವೆ.
ಡೈರಿಯಲ್ಲಿತ್ತೇ ಸಾವಿನ ಸೂಚನೆ?
ತನ್ನ ಪ್ರವಾಸದ ಅನುಭವಗಳ ಬಗ್ಗೆ ಡೈರಿಯಲ್ಲಿ ಬರೆದಿಡುತ್ತಿದ್ದ ಚೌ, ಅಂದು ಕೊನೆಯ ಬಾರಿ ಎಂಬಂತೆ ಡೈರಿ ಬರೆದಿದ್ದರು. ಮರುದಿನ ಸೆಂಟಿನೆಲ್ ದ್ವೀಪಕ್ಕೆ ಹೊರಟಿದ್ದ ಅವರು, 'ಈ ಸಾಹಸದ ಪ್ರವಾಸವನ್ನುನೋಡಿ ನನಗೆಲ್ಲೋ ಹುಚ್ಚು ಎಂದು ನಿಮಗನ್ನಿಸಬಹುದು, ಆದರೆ ನನಗೆ ಇದು ಸಾಕಷ್ಟು ಬೆಲೆಬಾಳುವಂಥದ್ದು ಎನ್ನಿಸುತ್ತದೆ. ಅಕಸ್ಮಾತ್ ನನನ್ನು ಯಾರಾದರೂ ಸಾಯಿಸಿದರೆ ದಯವಿಟ್ಟು ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ" ಎಂದು ಡೈರಿಯಲ್ಲಿ ಬರೆದಿದ್ದರು. ಅದರರ್ಥ ತಮ್ಮ ಸಾವಿನ ಸೂಚನೆ ಚೌ ಅವರಿಗೆ ಮೊದಲೇ ಸಿಕ್ಕಿತ್ತಾ?
ಈ ಮಗುವಿಗೂ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತಾ?
ನಿಷೇಧಿತ ಉತ್ತರ ಸೆಂಟಿನೆಲ್ ದ್ವೀಪ!
ಸೆಂಟಿನಿಲೀಸ್ ಬುಡಕಟ್ಟು ಜನರನ್ನು ಹೊಂದಿರುವ ಸೆಂಟಿನೆಲ್ ದ್ವೀಪ ಅತ್ಯಂತ ಅಪಾಯಕಾರಿ ಸ್ಥಳ ಎಂಬ ಕಾರಣಕ್ಕೆ ಅಲ್ಲಿಗೆ ಜನರ ಪ್ರವೇಶವನ್ನು ಅಂಡಮಾನ್ ಸರ್ಕಾರ ನಿಷೇಧಿಸಿತ್ತು. ಸೆಂಟಿನಿಲೀಸ್ ಬುಡಕಟ್ಟು ಜನರು ಆ ದ್ವೀಪಕ್ಕೆ ಯಾರೇ ಬಂದರು ಅವರನ್ನು ಬಾಣದಿಂದ ಹೊಡೆದು ಸಾಯಿಸುತ್ತಿದ್ದರು. ಚೌ ಅವರು ಈ ದ್ವೀಪಕ್ಕೆ ತೆರಳಬೇಕು ಎಂದು ಮೀನುಗಾರರನ್ನು ಪಟ್ಟುಹಿಡಿದಿದ್ದರು. ಆದರೆ ಮೀನುಗಾರರು ಒಪ್ಪದಿದ್ದಾಗ ಅವರಿಗೆ ಹಣ ನೀಡಿ ಅಲ್ಲಿಗೆ ತಮ್ಮನ್ನು ಕರೆದೊಯ್ಯಲು ಹೇಳಿದ್ದರು. ಅದರಂತೆಯೇ ಆತನನ್ನು ದ್ವೀಪಕ್ಕೆ ಕರೆದೊಯ್ಯಲಾಗಿತ್ತು. ಆದರೆ ಬುಡಕಟ್ಟು ಜನರು ಆತನ್ನು ಹೊಡೆದು ಕೊಂದರು.
ಅಂಡಮಾನ್ ನಲ್ಲಿ ಅಮೆರಿಕನ್ ನನ್ನು ಕೊಂದ ನಿಗೂಢ ಬುಡಕಟ್ಟು ಸೆಂಟಿನಿಲೀಸ್
ಕ್ರೈಸ್ತ ಧರ್ಮದ ಪ್ರಚಾರ?
ಅಷ್ಟಕ್ಕೂ ಅತ್ಯಂತ ಅಪಾಯಕಾರಿ ಸ್ಥಳ ಎಂಬುದು ಗೊತ್ತಿದ್ದರೂ ಚೌ ಅಲ್ಲಿಗೆ ತೆರಳಿದ್ದೇಕೆ? 'ಜಗತ್ತಿನ ಮೂಲೆ ಮೂಲೆಗೂ ಜೀಸಸ್ ನ ತತ್ವಗಳನ್ನು ತಿಳಿಸಬೇಕು' ಎಂದು ಚೌ ಆಗಾಗ ಹೇಳುತ್ತಿದ್ದರು. ಅಂತೆಯೇ ತಮ್ಮ ಪ್ರವಾಸದ ಸಮಯದಲ್ಲಿ ಒಂದಷ್ಟು ಬೈಬಲ್ ಅನ್ನೂ ಇಟ್ಟುಕೊಳ್ಳುತ್ತಿದ್ದರು. ಅಂಡಮಾನಿನ ಆ ನಿಗೂಢ ದ್ವೀಪಕ್ಕೆ ತೆರಳುವಾಗಲೂ ಕ್ರೈಸ್ತ ಧರ್ಮದ ಪ್ರಚಾರದ ಉದ್ದೇಶದಿಂದಲೇ ಚೌ ಅಲ್ಲಿಗೆ ತೆರಳಿದ್ದರೆ ಎಂಬ ಅನುಮಾನ ಈಗ ವ್ಯಕ್ತವಾಗಿದೆ.
|
ಚೌ ಸಾವಿಗೆ ಆತನೇ ಕಾರಣ ಎಂದ ಕುಟುಂಬ
ಚೌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ದುಃಖತಪ್ತವಾದ ಆತನ ಕುಟುಂಬ, 'ಆತ ಜೀವನದ ಪ್ರತಿಕ್ಷಣವನ್ನೂ ಸಂಭ್ರಮಿಸುತ್ತಿದ್ದ, ಜಗತ್ತಿನ ಪ್ರತಿ ಜೀವಿಯನ್ನೂ ಗೌರವಿಸುತ್ತಿದ್ದ. ಆತನ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಕಣ್ಣೀರಿಟ್ಟಿದೆ. ಹಾಗೆಯೇ, ಚೌನ ಸಾಹಸದ ಮನಸ್ಥಿತಿಯೇ ಆತನಿಗೆ ಇಷ್ಟು ಬೇಗ ಸಾವನ್ನು ತಂದಿಟ್ಟಿದೆ. ಆತನ ಸಾವಿಗೆ ಆತನೇ ಕಾರಣ. ಅದಕ್ಕಾಗಿ ಮತ್ತ್ಯಾರನ್ನೂ ದೂರಬೇಡಿ, ಬಂಧಿಸಿರುವವರನ್ನು ಬಿಡುಗಡೆ ಮಾಡಿ, ಅವನನ್ನು ಹತ್ಯೆ ಮಾಡಿದವರನ್ನು ನಾವು ಕ್ಷಮಿಸಿದ್ದೇವೆ" ಎಂದು ಈ ಕುಟುಂಬ ಹೇಳಿದೆ.