ಬಹಿರ್ದೆಸೆ ಮುಕ್ತ ಭಾರತ : ಮೋದಿ ಸರಕಾರದ ರಿಪೋರ್ಟ್ ಕಾರ್ಡ್
ಮಹಾತ್ಮಾ ಗಾಂಧಿ ಜನುಮದಿನದಂದು ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದಾಗ, ದೇಶದಲ್ಲಿನ ಪ್ರತಿಯೊಬ್ಬರೂ ಶೌಚಾಲಯ ಬಳಸುವಂತಾಗಬೇಕು ಮತ್ತು ಬಹಿರ್ದೆಸೆಗೆ ಕಡಿವಾಣ ಬೀಳಬೇಕು ಎಂಬ ಉದ್ದೇಶ ಹೊಂದಿದ್ದರು.
ಪ್ರಧಾನಿಯಾದ ನಂತರ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಮಹಾತ್ಮಾ ಗಾಂಧೀಜಿಯವರ 150ನೆಯ ಹುಟ್ಟುಹಬ್ಬವಾಗಿರುವ 2019ರಲ್ಲಿ 'ಸ್ವಚ್ಛ ಭಾರತ'ದ ಕನಸು ಸಂಪೂರ್ಣವಾಗಿ ನನಸಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದರು.
2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನ ಆರಂಭವಾದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹತ್ತರಲ್ಲಿ (ಶೇ.41.9) ನಾಲ್ವರಿಗೆ ಮಾತ್ರ ಶೌಚಾಲಯ ಬಳಸುವ ಸವಲತ್ತು ಇತ್ತು. ಸರ್ವರಿಗೂ ಶೌಚಾಲಯ ಭಾಗ್ಯ ಲಭಿಸಬೇಕೆನ್ನುವ ಉದ್ದೇಶದಿಂದ ಮುಂದಿನ 5 ವರ್ಷಗಳಲ್ಲಿ 10 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮಹತ್ ಕಾರ್ಯಕ್ಕೆ ಮೋದಿ ಸರಕಾರ ಮುಂದಾಗಿದೆ.
ವೈಯಕ್ತಿಕ ಗೌರವ ಕಾಪಾಡುವುದು ಮಾತ್ರವಲ್ಲ, ಪ್ರತಿಯೊಬ್ಬರಿಗೂ ಶೌಚಾಲಯದ ಬಳಕೆಯ ಅವಕಾಶ ಸಿಗುವಂತಾಗಬೇಕು ಎನ್ನುವುದಕ್ಕೆ ಹಲವಾರು ಕಾರಣಗಳೂ ಇವೆ. ಮೊದಲನೆಯದಾಗಿ, ಬಹಿರ್ದೆಸೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಈ ಕಾರಣದಿಂದಾಗಿ ಭೇದಿ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.
ಎರಡನೆಯದಾಗಿ, ದೇಶ ಪೌಷ್ಟಿಕಾಂಶ ಕೊರತೆ ಕಾಡುತ್ತಿರುವುದು ಕೂಡ ಬಹಿರ್ದೆಸೆಯ ಕಾರಣದಿಂದಲೇ. ಮೂರನೆಯ ಕಾರಣವೇನೆಂದರೆ, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣವಾಗಿಲ್ಲದ ಕಾರಣ (ಹೆಣ್ಣು) ಮಕ್ಕಳು ಶಾಲೆಯ ಮೆಟ್ಟಿಲೇರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಾಲ್ಕನೆಯದಾಗಿ, ಶೌಚಾಲಯದ ಕೊರತೆಯಿಂದಾಗಿ ಮಹಿಳೆಯರಿಗೆ ಭದ್ರತೆ ಸಿಗುತ್ತಿಲ್ಲ. ಬಹಿರ್ದೆಸೆಗೆಂದು ರಾತ್ರಿ ಹೊರಹೋಗಿದ್ದಾಗ ಅತ್ಯಾಚಾರಕ್ಕೀಡಾಗುತ್ತಿದ್ದಾರೆ.
ಯುಪಿಎಗಿಂತ ಎನ್ಡಿಎ ಹೆಚ್ಚು ಶೌಚಾಲಯ ನಿರ್ಮಿಸಿದೆ
ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದಾಗಿ, ಹತ್ತರಲ್ಲಿ ಆರು ಗ್ರಾಮಸ್ಥರಿಗೆ ಶೌಚಾಲಯದ ಭಾಗ್ಯ ಲಭಿಸಿದೆ. ಮೂರು ವರ್ಷಗಳಲ್ಲಿ ಶೇ.20ರಷ್ಟು ಹೆಚ್ಚು ಜನರಿಗೆ ಶೌಚಾಲಯಗಳು ಸೌಭಾಗ್ಯ ದಕ್ಕಿದೆ. ನಿಜಕ್ಕೂ ಇದು ದೊಡ್ಡ ಸಾಧನೆಯೆ. ಸರಕಾರದ ಸಹಾಯದಿಂದ ಇಡೀ ದೇಶದಾದ್ಯಂತ ಶೌಚಾಲಯಗಳನ್ನು ನಿರ್ಮಿಸಿದ್ದರಿಂದ ಈ ಸವಲತ್ತು ಜನರಿಗೆ ಲಭಿಸಿದೆ.
2014ರ ಅಕ್ಟೋಬರ್ ರಿಂದ ಈಚೆಗೆ 4 ಕೋಟಿ ಶೌಚೌಲಯಗಳನ್ನು ಮೋದಿ ಸರಕಾರದ ಸಹಕಾರದಿಂದ ಭಾರತದಲ್ಲಿ ನಿರ್ಮಿಸಲಾಗಿದೆ. 2012-13 ಮತ್ತು 2013-14ರಲ್ಲಿ ವರ್ಷಕ್ಕೆ ಕೇವಲ 50 ಲಕ್ಷಕ್ಕೂ ಕಡಿಮೆ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಇದು ಸ್ವಚ್ಛ ಭಾರತ ಅಭಿಯಾನದಿಂದಾಗಿ ಪ್ರತಿವರ್ಷ ಹೆಚ್ಚಾಗಿದೆ. 2016-17ರಲ್ಲಿ 2 ಕೋಟಿಗೂ ಹೆಚ್ಚು ಟಾಯ್ಲೆಟ್ಟುಗಳು ನಿರ್ಮಾಣವಾಗಿವೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯೂ ಬಹಿರ್ದೆಸೆಗೆ ಅವಕಾಶ ಇರಬಾರದು ಎಂಬ ಸುತ್ತೋಲೆಯನ್ನು ಹೊರಡಿಸಲಾಗಿದೆ. ಪ್ರಸ್ತುತ 1.93 ಲಕ್ಷ ಗ್ರಾಮಗಳು ತಾವು ಬಹಿರ್ದೆಸೆ ಮುಕ್ತ ಹಳ್ಳಿಗಳಾಗಿವೆ ಎಂದು ಘೋಷಿಸಿಕೊಂಡಿವೆ. ಆದರೆ, ದೌರ್ಭಾಗ್ಯವೆಂದರೆ, ಇವುಗಳಲ್ಲಿ ಅರ್ಧದಷ್ಟು ಮಾತ್ರ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿವೆ.
ಹಳ್ಳಿಗಳಲ್ಲಿ ಸಾರ್ವಜನಿಕರ ಶೌಚಾಲಯಗಳನ್ನು ನಿರ್ಮಿಸುವುದು ಮಾತ್ರವಲ್ಲ, ಅವನ್ನು ಬಳಸುವಂತೆ ಜನರನ್ನು ಪ್ರೇರೇಪಿಸುವುದು ಕೂಡ ಮುಖ್ಯವಾಗುತ್ತದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ಜನರು ಬಳಸದಂತಾಗುತ್ತವೆ. ಇದರಿಂದಾಗಿ ಜನರು ಮರಳಿ ಬಯಲಿನಲ್ಲಿಯೇ ವಿಸರ್ಜನೆಗೆ ತೆರಳುತ್ತಿದ್ದಾರೆ. ಇದಕ್ಕೆ ಪರಿಹಾರವೆಂದರೆ, ಹೆಚ್ಚು ಶೌಚಾಲಯಗಳು ನಿರ್ಮಾಣವಾಗಬೇಕು, ಸ್ವಚ್ಛವಾಗಿರಬೇಕು ಮತ್ತು ಜನರೂ ದಿನನಿತ್ಯ ಬಳಸುವಂತಾಗಬೇಕು.
ಮೋದಿ ಸರಕಾರ ಆರಂಭಿಸಿರುವ ಈ ಮಹತ್ವಾಕಾಂಕ್ಷಿ ಅಭಿಯಾನದ ಯಶಸ್ಸು ಜನರ ಕೈಯಲ್ಲಿದೆ. ಅವರು ತಮ್ಮ ಮನೋಧರ್ಮವನ್ನು ಬದಲಿಸಿಕೊಳ್ಳಬೇಕು. ಹೆಚ್ಚೆಚ್ಚು ಶೌಚಾಲಯವನ್ನು ಬಳಸಬೇಕು. ನಿರ್ವಹಣೆ ಅತ್ಯುತ್ತಮವಾಗಿರಬೇಕು. ಆಗ ಮಾತ್ರ ನರೇಂದ್ರ ಮೋದಿ ಅವರು ಕಂಡಿರುವ 'ಬಹಿರ್ದೆಸೆ ಮುಕ್ತ ಭಾರತ'ದ ಕನಸು ನನಸಾಗಲು ಸಾಧ್ಯ.
(ಪ್ರಣವ್ ಗುಪ್ತಾ ಅವರು ಸ್ವತಂತ್ರ ಸಂಶೋದಕರು. ನಿತಿನ್ ಮೆಹ್ತಾ ಅವರು ರಣ್ನೀತಿ ಕನ್ಸಲ್ಟಿಂಗ್ ಮತ್ತು ಸಂಶೋಧನೆ ಸಂಸ್ಥೆಯಲ್ಲಿ ಮ್ಯಾನೇಜಿಂಗ್ ಪಾರ್ಟನರ್ ಆಗಿದ್ದಾರೆ.)