ಆನೆಗಳ ಸಾವಿಗೆ ಅಂಕುಶ: ರೈಲ್ವೆ ಇಲಾಖೆಯ 'ದುಂಬಿ ಯೋಜನೆ' ಯಶಸ್ವಿ
ನವದೆಹಲಿ, ಸೆಪ್ಟೆಂಬರ್ 11: ವೇಗವಾಗಿ ಚಲಿಸುವ ರೈಲಿಗೆ ಡಿಕ್ಕಿಯಾಗಿ ಆನೆಗಳು ಸಾಯುವುದನ್ನು ತಪ್ಪಿಸಲು ಆರಂಭಿಸಿದ್ದ 'ದುಂಬಿ ಯೋಜನೆ' ('ಪ್ಲ್ಯಾನ್ ಬೀ') ಯಶಸ್ವಿಯಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲು-ಆನೆ ಅಪಘಾತಗಳನ್ನು ನಿಯಂತ್ರಿಸಲು 2017ರ ನವೆಂಬರ್ನಲ್ಲಿ 'ದುಂಬಿ ಯೋಜನೆ'ಯನ್ನು ಜಾರಿಗೆ ತರಲಾಗಿತ್ತು.
ಗಜರಾಜನಿಗೆ ಭಾರತದ ಪಾರಂಪರಿಕ ಪ್ರಾಣಿ ಸ್ಥಾನ
ಹಳಿದಾಟುವ ಆನೆಗಳಿಗೆ ವೇಗವಾಗಿ ಬರುವ ರೈಲುಗಳು ಡಿಕ್ಕಿ ಹೊಡೆದು ಅವು ಮೃತಪಡುವ ಘಟನೆಗಳು ಸಾಕಷ್ಟು ವರದಿಯಾಗಿದ್ದವು. ಹೀಗಾಗಿ ಅದನ್ನು ತಡೆಯಲು ಪ್ಲ್ಯಾನ್ ಬೀ ಯನ್ನು ಅಳವಡಿಸಲಾಗಿತ್ತು.
ಏನಿದು ದುಂಬಿ ಯೋಜನೆ?
ದುಂಬಿಗಳನ್ನು ಆನೆಗಳ ನೈಸರ್ಗಿಕ ಶತ್ರುಗಳು ಎಂದೇ ಕರೆಯಲಾಗಿದೆ. ದುಂಬಿಗಳು ಇರುವಲ್ಲಿ ಆನೆಗಳು ಓಡಾಡುವುದು ವಿರಳ. ಹೀಗಾಗಿ ಆನೆಗಳು ಸಾಮಾನ್ಯವಾಗಿ ಹಳಿ ದಾಟುವ ಪ್ರದೇಶಗಳಲ್ಲಿ ದುಂಬಿಗಳು ಹಾರಾಡುವಂತೆ ಸದ್ದು ಮಾಡುವ 2 ಸಾವಿರ ರೂ. ವೆಚ್ಚದ ಉಪಕರಣಗಳನ್ನು ಅಳವಡಿಸುವುದು ಈ ಯೋಜನೆಯ ಉದ್ದೇಶ. ಈ ಸದ್ದು ಹಳಿಯಿಂದ 600 ಮೀಟರ್ ದೂರದವರೆಗೂ ಆನೆಗಳಿಗೆ ಕೇಳಿಸುವಂತೆ ಮಾಡಲಾಗಿತ್ತು. ಇದರಿಂದ ಆನೆಗಳು ಅದರತ್ತ ಸುಳಿಯುತ್ತಿರಲಿಲ್ಲ.
|
ಪ್ರಾಯೋಗಿಕ ಯೋಜನೆ ಯಶಸ್ವಿ
ಮುಖ್ಯವಾಗಿ ಈಶಾನ್ಯ ಭಾರತದಲ್ಲಿ ಆನೆಗಳು ರೈಲು ಅಪಘಾತದಲ್ಲಿ ಮೃತಪಡುವ ಪ್ರಮಾಣ ಹೆಚ್ಚಿದೆ. ಹೀಗಾಗಿ ಅಸ್ಸಾಂನ ತೇಜ್ಪುರ್ದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು.
ಮೊದಲ ಉಪಕರಣದ ಪರೀಕ್ಷೆ ವಿಫಲವಾಗಿತ್ತು. ಅಪಘಾತದಲ್ಲಿ ಒಂದು ಆನೆ ಮೃತಪಟ್ಟಿತ್ತು. ಆದರೆ, ಅಸ್ಸಾಂನ ರಂಗಪರ ಸಮೀಪದ ಫಲ್ಬರಿ ಟೀ ಎಸ್ಟೇಟ್ನಲ್ಲಿ ಅಳವಡಿಸಿದ ಎರಡನೆಯ ಪರೀಕ್ಷಾರ್ಥ ಉಪಕರಣ ಮತ್ತು ಅರಣ್ಯ ಅಧಿಕಾರಿಗಳ ಎದುರು ನಡೆಸಿದ ಮೂರನೇ ಉಪಕರಣದ ಪರೀಕ್ಷೆಗಳು ಯಶಸ್ವಿಯಾಗಿದ್ದವು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಆನೆಗಳ ದಿನಚರಿ ಹೇಗಿದೆ ನೋಡಿ...
ಭಾರತದಲ್ಲಿ ಆನೆಗಳ ಸಾವು ಅತ್ಯಧಿಕ
ವನ್ಯಜೀವಿ ತಜ್ಞರ ಪ್ರಕಾರ, ರೈಲು ಅಪಘಾತದಲ್ಲಿ ಆನೆಗಳು ಅತ್ಯಧಿಕ ಪ್ರಮಾಣದಲ್ಲಿ ಮೃತಪಡುವ ಘಟನೆಗಳು ನಡೆಯುತ್ತಿರುವುದು ಭಾರತದಲ್ಲಿ. 1987-2010ರ ಅವಧಿಯಲ್ಲಿ ಈ ರೀತಿಯ ಆನೆಗಳ ಸಾವಿನ ಪ್ರಕರಣ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. 23 ವರ್ಷದ ಅವಧಿಯಲ್ಲಿ 150 ಆನೆಗಳು ಹಳಿ ದಾಟುವ ಸಂದರ್ಭದಲ್ಲಿ ರೈಲು ಡಿಕ್ಕಿಯಾಗಿ ಅಸುನೀಗಿದ್ದವು. ಆದರೆ, 2009-2017ರ ಅವಧಿಯಲ್ಲಿ ಅಂದರೆ ಕೇವಲ 8 ವರ್ಷಗಳಲ್ಲಿ 120 ಆನೆಗಳು ಬಲಿಯಾಗಿವೆ.
2014-2016ರ ಅವಧಿಯಲ್ಲಿ 35 ಆನೆಗಳು ಹಳಿ ದಾಟುವ ವೇಳೆ ಅಪಘಾತಕ್ಕೆ ಸಿಲುಕಿ ಸತ್ತಿದ್ದರೆ, 2017ರಲ್ಲಿ 5 ಆನೆಗಳು ಸಾವಿಗೀಡಾಗಿದ್ದವು. ಆದರೆ, ಅದನ್ನು ತಡೆಯಲು ರೈಲ್ವೆ ಇಲಾಖೆ ಯಾವುದೇ ಯೋಜನೆ ರೂಪಿಸಿರಲ್ಲ.
ಒಂದೇ ಅಪಘಾತದಲ್ಲಿ ನಾಲ್ಕು ಸಾವು
ಈ ವರ್ಷದ ಏಪ್ರಿಲ್ನಲ್ಲಿ ಒಡಿಶಾದ ಝಾರ್ಸುಗಿಡಾ ಜಿಲ್ಲೆಯ ತೆಲಿದಿಹಿ ಗ್ರಾಮದಲ್ಲಿ ಡಬಲ್ ಕ್ರಾಸಿಂಗ್ ರೈಲು ಹಳಿ ದಾಟುವ ಸಂದರ್ಭದಲ್ಲಿ ಹೌರಾ- ಮುಂಬೈ ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿಯಾಗಿ ಎಲ್ಲ ನಾಲ್ಕು ಆನೆಗಳೂ ಸ್ಥಳದಲ್ಲಿಯೇ ಮೃತಪಟ್ಟಿದ್ದವು.
ಹೆಚ್ಚುತ್ತಿರುವ ಜನಸಂಖ್ಯೆ, ಆವಾಸ ಸ್ಥಾನಕ್ಕೆ ಅಡ್ಡಿ, ವೇಗದ ಟ್ರೈನ್ಗಳ ಸಂಚಾರ ಹೆಚ್ಚಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ.
ಮಾರುಕಟ್ಟೆಗೆ ಬರಲಿದೆ ಆನೆ ಲದ್ದಿಯಿಂದ ತಯಾರಾದ ಕಾಗದ!
ಭಾರತದಲ್ಲಿ ಹೆಚ್ಚು ಆನೆಗಳು
ಈಶಾನ್ಯ ಏಷ್ಯಾ ಪ್ರದೇಶದುದ್ದಕ್ಕೂ ಹೆಚ್ಚಿರುವ ಏಷ್ಯನ್ ಆನೆಗಳ ಪ್ರಭೇದದಲ್ಲಿ ಭಾರತದಲ್ಲಿ ಶೇ 55ರಷ್ಟು ಆನೆಗಳಿವೆ. 1980ರಲ್ಲಿ ದೇಶದಲ್ಲಿ ಕಾಡಾನೆಗಳ ಸಂಖ್ಯೆ 15,627ಕ್ಕೆ ಏರಿತ್ತು. 2017ರ ಗಜಗಣತಿ ಪ್ರಕಾರ 27,312 ಕಾಡಾನೆಗಳು ಭಾರತದಲ್ಲಿವೆ. ಆನೆಯನ್ನು ಭಾರತದ ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು 2010ರಲ್ಲಿ ಭಾರತ ಸರ್ಕಾರ ಘೋಷಿಸಿದೆ.