ರೈಲಿನಿಂದ ಮರಿಯನ್ನು ರಕ್ಷಿಸಿ ಪ್ರಾಣ ತೆತ್ತ ತಾಯಾನೆ: ಹೃದಯಸ್ಪರ್ಶಿ ಘಟನೆ
ನವದೆಹಲಿ, ಮಾರ್ಚ್ 11: ಪಶ್ಚಿಮ ಬಂಗಾಳದಲ್ಲಿ ರೈಲಿಗೆ ಸಿಲುಕಿ ಆನೆಗಳು ಸಾವನ್ನಪ್ಪುವ ಘಟನೆಗಳು ನಿರಂತರವಾಗಿ ವರದಿಯಾಗುತ್ತಿರುತ್ತವೆ. ಪ್ರತಿ ವರ್ಷವೂ ಹತ್ತಾರು ಆನೆಗಳು ರೈಲು ಅಪಘಾತಕ್ಕೆ ಬಲಿಯಾಗುತ್ತಿವೆ. ಮುಖ್ಯವಾಗಿ ಉತ್ತರ ಬಂಗಾಳದಲ್ಲಿ ಆನೆ ಕಾರಿಡಾರ್ ನಡುವೆ ರೈಲ್ವೆ ಹಳಿ ಹಾದುಹೋಗಿರುವುದು ಇದಕ್ಕೆ ಕಾರಣ.
ಜೀವಶಾಸ್ತ್ರ ತಜ್ಞೆ ನೇಹಾ ಸಿನ್ಹಾ ಅವರು ಉತ್ತರ ಬಂಗಾಳದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತನ್ನ ಮರಿ ಜೀವ ಉಳಿಸಿ ತಾನು ರೈಲಿನ ಹೊಡೆತಕ್ಕೆ ಬಲಿಯಾದ ತಾಯಿ ಆನೆಯ ಈ ಕಥೆ ಎಂತಹವರ ಮನವನ್ನೂ ಕಲಕುವಂತಿದೆ. ಈ ಕತೆ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಭಾವುಕರಾಗಿದ್ದಾರೆ.
ವೈರಲ್ ವಿಡಿಯೋ; ಆದೇಶ ಪಾಲಿಸದ ಆನೆಗೆ ಮನಬಂದಂತೆ ಥಳಿಸಿದ ಮಾವುತರು
ಉತ್ತರ ಬಂಗಾಳದಲ್ಲಿ ಅವಿಜಾನ್ ಸಹಾ ಎಂಬುವವರು ತೆಗೆದ ಫೋಟೊವೊಂದನ್ನು ನೇಹಾ ಸಿನ್ಹಾ ಹಂಚಿಕೊಂಡಿದ್ದಾರೆ. ಅದರಲ್ಲಿ ಗಂಗಾ ಎಂಬ ಹೆಸರಿನ ಆನೆ ಹಾಗೂ ಅದರ ಮರಿಯ ಕಪ್ಪು ಬಿಳುಪಿನ ಚಿತ್ರವಿದೆ.
ಸಿಕ್ಕಿಕೊಂಡ ಮರಿಯಾನೆ
ಈ ಭಾಗದಲ್ಲಿ ಆನೆಗಳ ಹಿಂಡು ಹೊಲಗಳಿಗೆ ದಾಳಿ ಇಡುವುದು ಸಾಮಾನ್ಯ. ಹಾಗೆಯೇ ಗಂಗಾ ಹಾಗೂ ಅದರ ತಂಡ ಹೊಲಕ್ಕೆ ತೆರಳಿದ್ದವು. ಆದರೆ ಈ ಗುಂಪನ್ನು ಜನರು ಬೆದರಿಸಿ ಓಡಿಸಿಕೊಂಡು ಬಂದರು. ಅವರಿಂದ ತಪ್ಪಿಸಿಕೊಳ್ಳಲು ಆನೆಗಳು ಓಡುವಾಗ ರೈಲ್ವೆ ಹಳಿಯನ್ನು ದಾಟಿದ್ದವು. ಆದರೆ ಪುಟ್ಟ ಮರಿಯಾನೆ ಮಾತ್ರ ರೈಲ್ವೆ ಹಳಿ ದಾಟಲಾಗದೆ ಸಿಲುಕಿಕೊಂಡಿತ್ತು.
ಭಯಾನಕ ವಿಡಿಯೋ: ಸುಡುವ ಟೈರ್ ಎಸೆದ ತಮಿಳುನಾಡು ರೆಸಾರ್ಟ್ ಕಾರ್ಮಿಕರು: ಆನೆ ಸಾವು
|
ಮರಿಯ ರಕ್ಷಣೆ
ಗಂಗಾ ತನ್ನ ಮರಿಯನ್ನು ರಕ್ಷಿಸಲು ಕೂಡಲೇ ರೈಲ್ವೆ ಹಳಿಯತ್ತ ಧಾವಿಸಿತು. ಅತ್ತ ಹಳಿ ಮೇಲೆ ವೇಗವಾಗಿ ರೈಲು ಧಾವಿಸಿ ಬರುತ್ತಿತ್ತು. ಅಪಾಯ ಅರಿತ ಗಂಗಾ, ಕಣ್ಣು ಮಿಟುಕಿಸುವ ಸಮಯದಲ್ಲಿ ತನ್ನ ಮರಿಯನ್ನು ಹಳಿಯಿಂದ ಹೊರಗೆ ತಳ್ಳಿ ಕಾಪಾಡಿತು. ಆದರೆ ರಭಸದಿಂದ ಬಂದ ರೈಲು ಗಂಗಾಳಿಗೆ ಅಪ್ಪಳಿಸಿತ್ತು. ಮಗುವನ್ನು ರಕ್ಷಿಸಿದ ಗಂಗಾ ಒದ್ದಾಡಿ ಪ್ರಾಣಬಿಟ್ಟಳು.
ಕುಟುಂಬಕ್ಕಾಗಿ ಪ್ರಾಣ ಬಿಡುವುದು ನಾವಲ್ಲ
'ಇದು ಗಂಗಾ ಆನೆ. ಉತ್ತರ ಬಂಗಾಳದಲ್ಲಿ ಅವಿಜಾನ್ ಸಹಾ ತೆಗೆದ ಫೋಟೊ ಇದು. ಹೊಲದಿಂದ ಬೆನ್ನಟ್ಟಿಸಿ ಬಂದ ಬಳಿಕ ಆಕೆಯ ತಂಡ ರೈಲ್ವೆ ಮಾರ್ಗದ ಎದುರು ಬಂದಿತು. ಆನೆಗಳು ಅದನ್ನು ದಾಟಿದವು. ಆದರೆ ಈ ಮರಿಗೆ ಸಾಧ್ಯವಾಗಲಿಲ್ಲ. ನುಗ್ಗಿ ಬರುತ್ತಿದ್ದ ರೈಲಿನಿಂದ ಆತನನ್ನು ಉಳಿಸುವ ಪ್ರಯತ್ನದಲ್ಲಿ ಗಂಗಾ ಜೀವ ಕೊಟ್ಟಳು. ನಾವು ಕುಟುಂಬಕ್ಕಾಗಿ ಪ್ರಾಣ ಬಿಡುತ್ತೇವೆ ಎಂದು ಹೇಳಿಕೊಳ್ಳುತ್ತೇವೆ.ಆದರೆ ವಾಸ್ತವವಾಗಿ ಆನೆಗಳು ಅದನ್ನು ಮಾಡುತ್ತವೆ' ಎಂದು ನೇಹಾ ಹೃದಯಸ್ಪರ್ಶಿಯಾಗಿ ಬರೆದಿದ್ದಾರೆ.
'ವೈಲ್ಡ್ ಆಂಡ್ ವಿಲ್ಫುಲ್' ಕೃತಿ
ಈ ಘಟನೆ ಯಾವಾಗ ನಡೆದಿದ್ದು ಎಂದು ನೇಹಾ ಮಾಹಿತಿ ನೀಡಿಲ್ಲ. ಆದರೆ ತಾವು ಬರೆದ 'ವೈಲ್ಡ್ ಆಂಡ್ ವಿಲ್ಫುಲ್' ಎಂಬ ಪುಸ್ತಕದಲ್ಲಿ ಈ ಘಟನೆಯ ವಿವರವಿದೆ ಎಂದು ತಿಳಿಸಿದ್ದಾರೆ. ತಾವು ಕೇಳಿದ ಅತ್ಯತ ಹೃದಯ ವಿದ್ರಾವಕ ಘಟನೆಗಳಲ್ಲಿ ಇದೂ ಒಂದು ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿ ವರ್ಷವೂ ರೈಲು ಡಿಕ್ಕಿಯಾಗಿ ಆನೆಗಳು ಸಾಯುವ ಪ್ರಕರಣಗಳು ವರದಿಯಾಗುತ್ತಿವೆ.