ಕಲಾಂ ಓದಿದ ಶಾಲೆಯಲ್ಲಿ ಈಗ ಕರೆಂಟಿಲ್ಲ!
ಚೆನ್ನೈ, ಏಪ್ರಿಲ್ 19: ತಮ್ಮ ಸರಳತೆ ಮತ್ತು ಜ್ಞಾನದ ಕಾರಣ ದೇಶದ ಜನರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಓದಿದ ಶಾಲೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ರಾಮೇಶ್ವರಂನ ಮಂಡಪಂ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ನಲ್ಲಿ ಅಬ್ದುಲ್ ಕಲಾಂ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಈ ಕಾರಣಕ್ಕಾಗಿ ಶಾಲೆ ದೇಶದ ಗಮನ ಸೆಳೆದಿತ್ತು. ಅನೇಕ ಗಣ್ಯರು ಶಾಲೆಗೆ ಭೇಟಿ ನೀಡಿದ್ದರು. ಆದರೆ, ಈ ಶಾಲೆಯ ಆಡಳಿತ ಮಂಡಳಿ ಸುಮಾರು ಎರಡು ವರ್ಷದಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಹೀಗಾಗಿ ಶಾಲೆಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಅಲ್ಲಿನ ವಿದ್ಯುತ್ಚ್ಛಕ್ತಿ ಮಂಡಳಿ ಕಡಿತಗೊಳಿಸಿದೆ.
Tamil Nadu: Electricity connection at former President Dr APJ Abdul Kalam's alma mater 'Mandapam Panchayat union middle school' in Rameswaram cut off by electricity board after the school management did not pay electricity bill for two years. pic.twitter.com/kN036qd7E1
— ANI (@ANI) 19 April 2018
ಹಿಂದಿನಿಂದಲೂ ಶಾಲಾ ಆಡಳಿತ ಮಂಡಳಿ ತಪ್ಪದೇ ವಿದ್ಯುತ್ ಬಿಲ್ ಪಾವತಿಸುತ್ತಿತ್ತು. ಕಲಾಂ ಅವರ ನಿಧನದ ಬಳಿಕ ರಾಮೇಶ್ವರಂನಲ್ಲಿ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಿರುವ ತಮಿಳುನಾಡು ಸರ್ಕಾರ, ಈ ಶಾಲೆಯ ವಿದ್ಯುತ್ ಬಿಲ್ ಪಾವತಿಯ ಹೊಣೆಯನ್ನು ತಾನೇ ವಹಿಸಿಕೊಂಡಿತ್ತು. ಹೀಗಾಗಿ ಅಂದಿನಿಂದ ಶಾಲಾ ಆಡಳಿತ ಮಂಡಳಿ ಬಿಲ್ ಪಾವತಿ ಮಾಡಿರಲಿಲ್ಲ.
ರಾಮೇಶ್ವರಂನಲ್ಲಿ ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ
ಹೀಗೆ ಎರಡು ವರ್ಷದಿಂದ ಬಾಕಿ ಉಳಿದ ಬಿಲ್ ಮೊತ್ತು 10,000 ರೂಪಾಯಿ ದಾಟಿದೆ. ಸರ್ಕಾರದಿಂದ ಯಾವುದೇ ಹಣ ಬಾರದ ಕಾರಣ ಈಗ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಶಾಲಾ ಆಡಳಿತ ಮಂಡಳಿ ಮನವಿ ಮಾಡಿಕೊಂಡ ಬಳಿಕ ಕೇವಲ ಐದು ದಿನ ವಿದ್ಯುತ್ ಸಂಪರ್ಕ ಒದಗಿಸಲು ಮಂಡಳಿ ಒಪ್ಪಿಕೊಂಡಿದೆ. ಅಷ್ಟರೊಳಗೆ ಬಿಲ್ ಪಾವತಿಸದಿದ್ದರೆ ಮತ್ತೆ ಸಂಪರ್ಕ ಕಡಿತಗೊಳಿಸುವುದಾಗಿ ಹೇಳಿದೆ.
ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ದೇಶದ ರಾಕೆಟ್ ಮ್ಯಾನ್ಗೆ ಮಾಡಿರುವ ಅವಮಾನ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಾವು ಬಿಲ್ ಮೊತ್ತ ಪಾವತಿಸುವುದಾಗಿ ಹೇಳಿಕೊಂಡಿದ್ದಾರೆ.