ಮೋದಿ ಚಹಾಕ್ಕೆ ಚುನಾವಣಾ ಆಯೋಗ ಕೊಕ್ಕೆ
ಬಿಜೆಪಿ ಪಕ್ಷವು ಚಹಾ ಹಂಚಿಕೆ ಮಾಡುವುದರಿಂದ ಮತದಾರರನ್ನು ಸೆಳೆಯುವಂತಾಗುತ್ತದೆ. ಹಾಗಾಗಿ, ಚುನಾವಣೆ ಮುಗಿಯುವವರಿಗೂ ಪಕ್ಷವು ಚಹಾ ಹಂಚಿಕೆ ಪ್ರಲೋಭೆ ಒಡ್ಡುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಜತೆಗೆ ಉತ್ತರಪ್ರದೇಶದ ಲಕ್ಷ್ಮಿಪುರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ 'ಮೋದಿ ಚಾಯ್ ಪೆ ಚರ್ಚಾ' ಕಾರ್ಯಕ್ರಮ ಸ್ಥಳಕ್ಕೆ ತೆರಳಿದ ಪೊಲೀಸರು ಆಯೋಗದ ಸೂಚನೆಯಂತೆ ಅಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸ್ಥಳೀಯ ಆಡಳಿತಾಧಿಕಾರಿಗಳಿಂದ ಪೂರ್ವಾನುಮತಿ ತೆಗೆದುಕೊಂಡಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಏನೇ ಉಚಿತವಾಗಿ ಹಂಚಿದರೂ ಅದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಅದರಿಂದ ಮತದಾರರಿಗೆ ಪ್ರಲೋಭೆ ಒಡ್ಡಿದಂತಾಗುತ್ತದೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮೋ ಚಹಾ ಅಂಗಡಿಗಳು ಮತ್ತು ಬಿಜೆಪಿಯ ಚಾಯ್ ಪೆ ಚರ್ಚಾ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಣ ಮಾಡುವಂತೆ ಎಲ್ಲ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉತ್ತರಪ್ರದೇಶದ ಜಂಡಿ ಚುನಾವಣಾಧಿಕಾರಿ ರಮಾಕಾಂತ್ ಪಾಂಡೆ ತಿಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಕಾನೂನು ಕ್ರಮ ಜರುಗಿಸಲು ಬರುವುದಿಲ್ಲ. ಹಾಗಾಗಿ, ನಮೋ ಚಹಾ ಅಂಗಡಿಗಳ ಖರ್ಚುವೆಚ್ಚವನ್ನು ಲೆಕ್ಕ ಹಾಕಿ ಪಕ್ಷದ ಚುನಾವಣಾ ವೆಚ್ಚಪಟ್ಟಿಗೆ ಸೇರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.