ಲೋಕಸಭಾ ಚುನಾವಣೆ: ಭಾರೀ ಮಹತ್ವ ಪಡೆದ ಚುನಾವಣಾ ಆಯೋಗದ ಹೇಳಿಕೆ
ನವದೆಹಲಿ, ಆಗಸ್ಟ್ 16: ಅಸೆಂಬ್ಲಿ ಚುನಾವಣೆಯ ಜೊತೆಗೆ ಲೋಕಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಬುಧವಾರ (ಆ 15) ಮಹತ್ವದ ಹೇಳಿಕೆಯನ್ನು ನೀಡಿದೆ.
ಮುಖ್ಯ ಚುನಾವಣಾ ಆಯುಕ್ತ ಓ ಪಿ ರಾವತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾಲ್ಕು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಜೊತೆಗೆ, ಡಿಸೆಂಬರ್ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಕಾನೂನು ತಿದ್ದುಪಡಿಯಿಂದ ಮಾತ್ರ ಏಕಕಾಲದ ಚುನಾವಣೆ ಸಾಧ್ಯ: ರಾವತ್
ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದರೆ ಕಾನೂನಿಗೆ ತಿದ್ದುಪಡಿ ತರಬೇಕು. ಹೆಚ್ಚುವರಿ ಚುನಾವಣಾ ಸಿಬ್ಬಂದಿ, ಭದ್ರತೆ ಮತ್ತು ವಿವಿಪ್ಯಾಟ್ ಕೂಡ ಬೇಕಾಗುತ್ತದೆ ಎಂದು ಎರಡು ದಿನದ ಹಿಂದೆ ರಾವತ್ ಹೇಳಿದ್ದರು.
ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ಛತ್ತೀಸಗಢ ಚುನಾವಣೆಯ ಜೊತೆಗೆ, ಲೋಕಸಭಾ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದವಿದೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಓ ಪಿ ರಾವತ್ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಮಿಜೋರಾಂ ( ಡಿಸೆಂಬರ್ 15, 2018), ರಾಜಸ್ಥಾನ (ಜ 20, 2019), ಮಧ್ಯಪ್ರದೇಶ (ಜ 7, 2019) ಛತ್ತೀಸಗಢ (ಜ 5, 2019) ಅಸೆಂಬ್ಲಿಯ ಅವಧಿ ಮುಕ್ತಾಯಗೊಳ್ಳಲಿದೆ.
ಲೋಕಸಭಾ ಚುನಾವಣೆ ಜೊತೆ 11 ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ?
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ 11 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆಯೋಗಕ್ಕೆ ಪತ್ರ ಬರೆದಿದ್ದರು.