ಇಂದಲ್ಲಾ ನಾಳೆ ನಾವು ದಿಗ್ವಿಜಯ ಸಾಧಿಸುತ್ತೇವೆ: ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ್ದ ಅಟಲ್
ಅಜಾತಶತ್ರು, ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅಪ್ರತಿಮ ವಾಗ್ಮಿ ವಾಜಪೇಯಿ ಮತ್ತು ಪಕ್ಷದಲ್ಲಿ ಭೀಷ್ಮ ಎಂದೇ ಕರೆಯಲ್ಪಡುವ ಎಲ್ ಕೆ ಅಡ್ವಾಣಿ, ಬಿಜೆಪಿ ಇಂದು ಈ ಮಟ್ಟಿನ ಯಶಸ್ಸು ಪಡೆಯಲು ಕಾರಣರಾಗಿರುವ ಎರಡು ಆಧಾರ ಸ್ಥಂಭಗಳು.
1996ರ ಸಾರ್ವತ್ರಿಕ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಮೈತ್ರಿಕೂಟ 189 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ರಾಷ್ಟ್ರಪತಿಯವರು ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಿದ್ದ ಸಂದರ್ಭವದು. ಅದರಂತೇ, ವಾಜಪೇಯಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು
ಆ ಕಾಲದಲ್ಲಿ ಬಿಜೆಪಿ ಪಾಲಿಗೆ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಪ್ರಮೋದ್ ಮಹಾಜನ್ ಅವರಿಗೆ ಬಹುಮತ ಸಾಬೀತು ಪಡಿಸಲು ಬೇಕಾದ ಸಂಖ್ಯಾಬಲವನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಸಣ್ಣಸಣ್ಣ ಪಕ್ಷಗಳನ್ನು ವಿಶ್ವಾಸಗಳಿಸುವಲ್ಲಿ ಮಹಾಜನ್ ಬಹುತೇಕ ಯಶಸ್ವಿಯಾಗಿದ್ದರು. ಆದರೆ, ಬಹುಮತ ಸಾಬೀತು ಪಡಿಸುವ ಮುನ್ನಾದಿನ ಬಿಜೆಪಿ ಪ್ಲ್ಯಾನ್ ಎಲ್ಲಾ ಉಲ್ಟಾ ಹೊಡೆಯಿತು.
ಬಹುಜನ ಸಮಾಜ ಪಕ್ಷ ಸೇರಿದಂತೆ ಕೆಲವು ಸಣ್ಣಸಣ್ಣ ಪಕ್ಷಗಳು ವಾಜಪೇಯಿಗೆ ಬೆಂಬಲಿಸುವ ನಿರ್ಧಾರದಿಂದ ಹಿಂದಕ್ಕೆ ಸರಿದವು. ಹೀಗಾಗಿ, ಅಟಲ್ ಸರಕಾರಕ್ಕೆ ಬಹುಮತ ಸಾಬೀತು ಪಡಿಸಲು ಸಂಖ್ಯಾಬಲದ ಕೊರತೆ ಎದುರಾಯಿತು. ವಾಜಪೇಯಿ ರಾಜೀನಾಮೆ ನೀಡುವ ಮೂಲಕ, ಹದಿಮೂರು ದಿನಗಳ ಬಿಜೆಪಿ ಸರಕಾರ ಪತನಗೊಂಡಿತು.
Live Updates: ವಿಷಮಿಸಿದ ಅಟಲ್ ಆರೋಗ್ಯ, ಯಾವುದೇ ಕ್ಷಣದಲ್ಲಿ ಹೆಲ್ತ್ ಬುಲೆಟಿನ್
ರಾಜೀನಾಮೆ ನೀಡುವ ಮುನ್ನ ಅಂದರೆ ಮೇ 27, 1996ರಲ್ಲಿ ತಮ್ಮ ಸರಕಾರದ ವಿಶ್ವಾಸಮತಯಾಚನೆಯ ವೇಳೆ ಸದನವನ್ನು ಉದ್ದೇಶಿಸಿ ಮಾತನಾಡಿದ ವಾಜಪೇಯಿ, ಅಕ್ಷರಶಃ ಕಾಂಗ್ರೆಸ್ ಪಕ್ಷವನ್ನು ಬೆಂಡೆತ್ತಿದ್ದರು. ವಾಜಪೇಯಿಯವರ ಆ ಭಾಷಣ, ದೇಶದ ಅತ್ಯಂತ ಪ್ರಸಿದ್ದ ಭಾಷಣಗಳಲ್ಲೊಂದಾಯಿತು. ಅಂದಿನ ಅವರ ಭಾಷಣದ ಕೆಲವು ಪ್ರಮುಖಾಂಶಗಳು..
ಹರ್ಯಾಣ, ಕರ್ನಾಟಕದಲ್ಲೂ ನಮಗೆ ಸಮರ್ಥನೆ ಸಿಕ್ಕಿದೆ
ದೇಶದಲ್ಲಿ ನಮಗೆ ಸಂಪೂರ್ಣ ಬೆಂಬಲವಿಲ್ಲ ಎನ್ನುವ ಮಾತನ್ನು ಕೆಲವು ಸದಸ್ಯರು ಹೇಳಿದ್ದಾರೆ. ಹರ್ಯಾಣ, ಕರ್ನಾಟಕದಲ್ಲೂ ನಮಗೆ ಸಮರ್ಥನೆ ಸಿಕ್ಕಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಇನ್ನೂ ಬೆಳೆಯಬೇಕು ಎನ್ನುವ ಮಾತನ್ನು ನಾನು ಒಪ್ಪುತ್ತೇನೆ. ಆದರೆ, ಅಲ್ಲೂ ನಮ್ಮ ಸಂಘಟನೆ ಕಾರ್ಯಪ್ರವೃತ್ತವಾಗಿದೆ. ಒಂದೇ ಒಂದು ಸದಸ್ಯರು ಇರುವ ಎಷ್ಟೊಂದು ಪಕ್ಷಗಳ ಪ್ರತಿನಿಧಿಗಳಿದ್ದಾರೆ. ಅವರೆಲ್ಲಾ ನಮ್ಮ ವಿರುದ್ದ ಮತಚಲಾಯಿಸಲು ಹೊರಟಿದ್ದಾರೆ.
ಸ್ವಚ್ಛ ರಾಜಕಾರಣಿ ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು
ಇವರನ್ನೆಲ್ಲಾ ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ
ಇವರನ್ನೆಲ್ಲಾ ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆ ಮೂಲಕ ನಮ್ಮನ್ನು ಸೋಲಿಸುವ ಕೆಲಸಕ್ಕೆ ನೀವೆಲ್ಲಾ ತಯಾರಾಗಿದ್ದೀರಿ. ದೇಶದ ಅಭಿವೃದ್ದಿಗಾಗಿ ನೀವೆಲ್ಲಾ ಒಂದಾಗಿದ್ದರೆ, ಅದನ್ನು ನಾನು ಸ್ವಾಗತಿಸುತ್ತಿದ್ದೆ. ನಾವೂ ದೇಶಕ್ಕಾಗಿ ಕೆಲಸವನ್ನು ಮಾಡಿದ್ದೇವೆ. ರಾಜಕೀಯದಲ್ಲಿ ರಾತ್ರಿಬೆಳಗಾಗುವಷ್ಟರಲ್ಲಿ ನಾವು ಮೇಲೆ ಬಂದವರಲ್ಲ.. ನಲವತ್ತು ವರ್ಷಗಳ ಪರಿಶ್ರಮ ಇದರ ಹಿಂದಿದೆ. ನಮಗೆ ಇಷ್ಟು ಜನಾದೇಶ ಬಂದಿದೆಯೆಂದರೆ, ಅದರ ಹಿಂದೆ ಏನೂ ಚಮತ್ಕಾರವಿಲ್ಲ, ಅದು ನಮ್ಮ ಸಾಧನೆ.
ವಾಜಪೇಯಿ ನಿಧನ ಎಂದು ಟ್ವೀಟಿಸಿ ಪ್ರಮಾದ ಎಸಗಿದ ತ್ರಿಪುರ ರಾಜ್ಯಪಾಲ
ನಮ್ಮ ಕೊರತೆಯನ್ನು ಕಂಡು ನಿಮಗೆ ಖುಷಿಯಾಗಿರಬಹುದು
ನಮಗಿಂದು ಸಂಖ್ಯಾಬಲದ ಸಮಸ್ಯೆಯಿರಬಹುದು. ನಮ್ಮ ಕೊರತೆಯನ್ನು ಕಂಡು ನಿಮಗೆ ಖುಷಿಯಾಗಿರಬಹುದು. ಆದರೆ, ಬರೆದಿಟ್ಟುಕೊಳ್ಳಿ, ಮುಂದೊಂದು ದಿನ ದೇಶದ ಜನ ನಮ್ಮ ಪಕ್ಷವನ್ನು ಖಂಡಿತ ಆಶೀರ್ವದಿಸುತ್ತಾರೆ. ದೇಶದ ಉದ್ದಗಲಕ್ಕೂ ನಾವೂ ರಾಜ್ಯಭಾರ ಮಾಡುವ ಕಾಲ ಬಂದೇ ಬರುತ್ತದೆ. ಚುನಾವಣೆಗೋಸ್ಕರ ಹುಟ್ಟಿದ ಪಾರ್ಟಿ ನಮ್ಮದಲ್ಲ, ಬಿಜೆಪಿ ಇಂದು ಈ ಮಟ್ಟಕ್ಕೆ ಬೆಳೆಯಲು ಒಬ್ಬೊಬ್ಬ ಮುಖಂಡರ, ಕಾರ್ಯಕರ್ತರ ಪರಿಶ್ರಮವಿದೆ.
ವಾಜಪೇಯಿ ಅಸ್ತಂಗತ ಎಂದು ಟ್ವೀಟಿಸಿ, ಡಿಲೀಟ್ ಮಾಡಿದ ಯಡಿಯೂರಪ್ಪ!
ನೀವು ಕಾಂಗ್ರೆಸ್ ಮನೆಬಾಗಿಲಿಗೆ ಹೋಗಬೇಕಾಗುತ್ತದೆ
ನಮಗೆ ಬಹುಮತ ಸಿಗಬೇಕಾಗಿತ್ತು, ಸಿಗಲಿಲ್ಲ ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ನಮ್ಮನ್ನು ಅಧಿಕಾರದಿಂದ ದೂರವಿಡಲು ನೀವೆಲ್ಲಾ ಒಗ್ಗಟ್ಟಾಗಿದ್ದೀರಾ, ನೋಡುತ್ತಾ ಇರಿ.. ಹೊಸ ಸರಕಾರ ತೆಗೆದುಕೊಳ್ಳುವ ಒಂದೊಂದು ಕೆಲಸಕ್ಕೂ ನೀವು ಕಾಂಗ್ರೆಸ್ ಮನೆಬಾಗಿಲಿಗೆ ಹೋಗಬೇಕಾಗುತ್ತದೆ. ನಾವು ಸದನದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿರುತ್ತೇವೆ, ನಿಮ್ಮ ಸರಕಾರಕ್ಕೆ ನಮ್ಮ ಸಹಕಾರವಿಲ್ಲದೇ ಸಾಗಲು ಸಾಧ್ಯವಿಲ್ಲ.
ದೇಶ ನಡೆಸಲು ಒಟ್ಟಾಗಿರುವ ನಿಮಗೆ ಶುಭಕಾಮನೆಗಳು
ನೀವೆಲ್ಲಾ ಒಟ್ಟಾಗಿ ಸರಕಾರ ರಚಿಸಲು ಹೊರಟಿದ್ದೀರಾ, ಸರಕಾರ ತುಂಬಾ ದಿನ ಅಧಿಕಾರದಲ್ಲಿ ಇರುತ್ತೆ ಎನ್ನುವ ವಿಶ್ವಾಸ ನನ್ನಲಿಲ್ಲ. ದೇಶ ನಡೆಸಲು ಒಟ್ಟಾಗಿರುವ ನಿಮಗೆ ನನ್ನ ಪಕ್ಷದ ಪರವಾಗಿ ಶುಭಕಾಮನೆಗಳು, ಸಂಖ್ಯಾಬಲದ ಮುಂದೆ ನಾವು ತಲೆತಗ್ಗಿಸುತ್ತೇವೆ. ದೇಶದ ಅಭಿವೃದ್ದಿಗೆ ನಾವು ಕಂಡ ಕನಸು, ನನಸಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ. ಮಾನ್ಯ ಅಧ್ಯಕ್ಷರೇ, ನಾನು ನನ್ನ ರಾಜೀನಾಮೆ ಪತ್ರವನ್ನು ನೀಡಲು ರಾಷ್ಟ್ರಪತಿ ಬಳಿ ಹೋಗುತ್ತಿದ್ದೇನೆ.