ಈದ್ ಮುಬಾರಕ್ : ಮುಸ್ಲಿಂರಿಗೆ ಮೋದಿ, ಪ್ರಣಬ್ ಶುಭಾಶಯ
ನವದೆಹಲಿ, ಜುಲೈ 18 : ಮಸ್ತ್ ಮಸ್ತಾಗಿ ಇಸ್ತ್ರಿ ಮಾಡಿದಂತಹ ಬಿಳಿ ಜುಬ್ಬಾ, ಅಷ್ಟೇ ನೀಟಾಗಿ ಇಟ್ಟುಕೊಂಡತಹ ಕಾಲಿನ ಮೀನಖಂಡವನ್ನು ನಿಲುಕದಂಥ ಪ್ಯಾಂಟು, ತಲೆಯ ಮೇಲೊಂದು ಉಲ್ಲನ್ ಅಥವಾ ರಂಗುರಂಗಿನ ಟೋಪಿ, ಮೈತುಂಬ ಭರ್ಜರಿ ಅತ್ತರು ಹಾಕಿಕೊಂಡಿರುವ ಮುಸ್ಲಿಂ ಬಾಂಧವರು ಒಬ್ಬರನ್ನೊಬ್ಬರು ತಬ್ಬಿಕೊಂಡು ಶುಭಾಶಯ ಹೇಳುತ್ತಿದ್ದಾರೆ.
ದೇಶದ ಎಲ್ಲೆಲ್ಲಿಯೂ ಮಂದಿರ, ಮಸೀದಿ, ಈದ್ಗಾ ಮೈದಾನಗಳಲ್ಲಿ, ಬೀದಿಬೀದಿಗಳಲ್ಲಿ, ರಸ್ತೆ ರಸ್ತೆಗಳಲ್ಲಿ ಇದೇ ದೃಶ್ಯ. ಶಾಂತಿ, ಸಹನೆ, ತ್ಯಾಗ, ಸಹೋದರತ್ವ ಬಾಂಧವ್ಯ ಸಾರುವ ರಂಜಾನ್ ಹಬ್ಬವನ್ನು ದೇಶದೆಲ್ಲೆಡೆ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಮಸೀದಿಗಳ ಮುಂದೆ ಭಾರೀ ಟ್ರಾಫಿಕ್ ಜಾಮ್. ಹೆಲ್ಮೆಟ್ ಹಾಕದೆ ಗಾಡಿ ಓಡಿಸುತ್ತಿದ್ದರೂ ಪೊಲೀಸಪ್ಪ ಇಂದು ಯಾರನ್ನೂ ಕೇಳುವುದಿಲ್ಲ.
ಬೆಳ್ಳಂಬೆಳಿಗ್ಗೆ ಸ್ನಾನ ನಮಾಜುಗಳನ್ನು ಮುಗಿಸಿದ ಗಂಡಸರು ತಮ್ಮ ಮಕ್ಕಳನ್ನು ಕರೆದುಕೊಂಡು, ಮನೆಯಿಂದ ಹೊರಬಿದ್ದು ಒಬ್ಬರನ್ನೊಬ್ಬರು ತಬ್ಬಿಕೊಂಡು ಶುಭಾಶಯ ಕೋರುತ್ತಿದ್ದರೆ, ಮಿರಿಮಿರಿ ಮಿಂಚುವ ಸೀರೆ, ಚೂಡಿದಾರ್ ತೊಟ್ಟ ಹೆಂಗಸರು ಮನೆಯಲ್ಲಿಯೇ ಮಟನ್ ಬಿರಿಯಾನ್, ಶೀರ್ ಖುರ್ಮಾ ಸೇರಿದಂತೆ ಪುಷ್ಕಳವಾದ ಊಟದ ತಯಾರಿ ನಡೆಸಿರುತ್ತಾರೆ.
ಒಂದು ತಿಂಗಳ ಅತ್ಯಂತ ಶ್ರದ್ಧೆಯ ಉಪವಾಸ ವ್ರತ(ರೋಜಾ)ಕ್ಕೆ ತೆರೆಬಿದ್ದಿದೆ. ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತವಾಗುವ ಮೊದಲು ಹನಿ ನೀರು ಕೂಡ ಹೊಟ್ಟೆಗಿಳಿಸದಂತಹ ಕಠಿಣ ವ್ರತ ನಿಜಕ್ಕೂ ಅಚ್ಚರಿ ಮೂಡುವಂಥದ್ದು. ಶುಕ್ರವಾರ ರಾತ್ರಿ ಚಂದ್ರ ದರುಶನವಾಗುತ್ತಿದ್ದಂತೆ ಶನಿವಾರ ರಂಜಾನ್ ಆಚರಣೆಗೆ ದೆಹಲಿಯ ಶಾಹಿ ಇಮಾಮ್ ಹಸಿರು ನಿಶಾನೆ ತೋರಿದ್ದಾರೆ. [ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ ಹೀಗಿರುತ್ತದೆ]
ಗಣ್ಯರಿಂದ ಶುಭಾಶಯ
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಪ್ರಮುಖ ರಾಜಕಾರಣಿಗಳೇನಕರು ಮುಸ್ಲಿಂ ಬಂಧುಗಳು ಶಾಂತಿ, ಸಹನೆ, ನೆಮ್ಮದಿಯಿಂದ ಹಬ್ಬ ಆಚರಿಸಲಿ, ಸಮಾಜದಲ್ಲಿ ಭ್ರಾತೃತ್ವ ಮತ್ತು ಸಹಬಾಳ್ವೆಯ ಮೌಲ್ಯ ಬಿತ್ತಲಿ ಎಂದು ಶುಭಾಶಯ ಕೋರಿದ್ದಾರೆ.
|
ಈದ್ ಮುಬಾರಕ್ ಹೋ ಅಂದ ನರೇಂದ್ರ ಮೋದಿ
ಈ ಹಬ್ಬ ದೇಶದ ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ ಮತ್ತು ಎಲ್ಲರಿಗೂ ಸಮೃದ್ಧಿ ಮತ್ತು ಉತ್ತಮ ಆರೋಗ್ಯ ದೊರೆಯಲಿ ಎಂದು ಹಾರೈಸಿದ್ದಾರೆ.
|
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂದೇಶ
ರಂಜಾನ್ ಹಬ್ಬ ಸಹಬಾಳ್ವೆ, ಸಹೋದರತ್ವದಲ್ಲಿ ನಂಬಿಕೆಯುಳ್ಳ ಎಲ್ಲ ಮತ, ಧರ್ಮಗಳ ಜನರನ್ನು ಒಗ್ಗೂಡಿಸಲಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂದೇಶ ಸಾರಿದ್ದಾರೆ.
|
ಚಿತ್ರನಟ ವರುಣ್ ಧವನ್ ಶುಭಾಶಯ
ಎಲ್ಲರಿಗೂ ಈದ್ ಮುಬಾರಕ್. ವಿಶ್ವದೆಲ್ಲೆಡೆ ಇಂದು ಪ್ರೀತಿ ಪ್ರೇಮದ ಸ್ಪರ್ಶ ಕಂಡು ತುಂಬಾ ಸಂತೋಷವಾಗುತ್ತಿದೆ. ದೇವರು ಎಲ್ಲರಿಗೂ ಒಳ್ಳೆದು ಮಾಡಲಿ.