ಉಗ್ರರ ಅಟ್ಟಹಾಸವನ್ನು ಮೆಟ್ಟಿನಿಂತ ಶಾಂತಿ ಸಹಬಾಳ್ವೆಯ ರಂಜಾನ್
ಬೆಂಗಳೂರು, ಜೂನ್ 26 : ದೇವಮಾನವ ಗ್ಯಾಬ್ರಿಯೆಲ್ ಮುಂದೆ ಪ್ರಾಫೆಟ್ ಮೊಹಮ್ಮದ್ ಮೊಟ್ಟಮೊದಲ ಬಾರಿಗೆ ಕುರಾನ್ ಓದಿದ ಕುರುಹಾಗಿ ರಂಜಾನ್ ಹಬ್ಬವನ್ನು ಮಾತ್ರ ಆಚರಿಸಲಾಗುವುದಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಹತ್ತಿಕ್ಕಲು ಮಾತ್ರ ರಂಜಾನ್ ಅನ್ನು ಮುಸ್ಲಿಂರು ಆಚರಿಸುವುದಿಲ್ಲ.
ಉತ್ತರ ಕರ್ನಾಟಕದೆಲ್ಲಡೆ ರಂಜಾನ್ ಸಂಭ್ರಮ
ಇದೆಲ್ಲಕ್ಕಿಂತ ಹೊರತಾಗಿ, ಶಾಂತಿ ಸಹಬಾಳ್ವೆಗಾಗಿ ಈ ಹಬ್ಬವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಆದರೆ, ದುರಾದೃಷ್ಟವೆಂದರೆ, ರಂಜಾನ್ ತಿಂಗಳಿನಲ್ಲಿಯೇ ಅತೀಹೆಚ್ಚು ಹಿಂಸಾಕೃತ ಕೃತ್ಯಗಳನ್ನು ಇಸ್ಲಾಂ ವಿರೋಧಿಗಳು, ಮಾನವ ವಿರೋಧಿ ರಾಕ್ಷಸರು ನಡೆಸುತ್ತಿದ್ದಾರೆ ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಈ ಹಬ್ಬವನ್ನು ಈದ್-ಉಲ್-ಫಿತರ್ ಎಂದೂ ಕರೆಯುತ್ತಾರೆ. ಫಿತರ್ ಎಂದರೆ ದಾನ ಮಾಡುವುದು. ಉಪವಾಸದಷ್ಟೇ ಕಟ್ಟುನಿಟ್ಟಾಗಿ ದಾನ ಮಾಡುವುದನ್ನು ಮುಸ್ಲಿಂ ಬಾಂಧವರು ಪಾಲಿಸಬೇಕು. ನಿರ್ಗತಿಕರಿಗೆ ಶ್ರೀಮಂತರೆನಿಸಿಕೊಂಡವರು ಯಾವುದೇ ವಸ್ತುವನ್ನು ದಾನವಾಗಿ ನೀಡಬೇಕು.
ರಂಜಾನ್ ಗೆ ದಮುಲ್ನಿಂದ 50 ಸಾವಿರ ಲೀಟರ್ ಹಾಲು
ಇದನ್ನು ಮುಸ್ಲಿಂ ಸಮುದಾಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಹಲವಾರು ಮುಸ್ಲಿಂ ಕುಟುಂಬಗಳು ತಿನ್ನಲು ಕೂಡ ಗತಿಯಿಲ್ಲದ್ದರಿಂದ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಸರಿಯಾದ ಸಮಯದಲ್ಲಿ ವಿದ್ಯೆ ಪಡೆಯದಿದ್ದರಿಂದ ಅಡ್ಡದಾರಿ ಹಿಡಿಯುವ ಅವಕಾಶಗಳು ಹೇರಳವಾಗಿ ಲಭಿಸುತ್ತಿವೆ.
ಮುಸ್ಲಿಂ ಬಾಂಧವರು ಇತರ ಧರ್ಮೀಯರೊಂದಿಗೆ ಸಹಬಾಳ್ವೆಯಿಂದಲೇ ಬಾಳುತ್ತಿದ್ದಾರೆ. ಆದರೆ, ಅವರ ಮನಪರಿವರ್ತನೆ ಮಾಡಿ, ಹಣದ ಆಮಿಷ ಒಡ್ಡಿ, ವಿಧ್ವಂಸಕ ಕೃತ್ಯಕ್ಕೆ ಅವರನ್ನು ಬಳಸಿಕೊಳ್ಳುತ್ತಿರುವ ಉಗ್ರರನ್ನು ಸದೆಬಡಿಯಬೇಕಾಗಿದೆ.
ರಂಜಾನ್ ಆಚರಿಸುತ್ತಿರುವ ಜನರ ಸಂಭ್ರಮವನ್ನು ನೋಡುವುದೇ ಒಂದು ಆನಂದ. ಈದ್ ಮುಬಾರಕ್ ಹೋ ಅಂತ ತಬ್ಬಿಕೊಳ್ಳುವ ಜನರು, ಹೊಸಬಟ್ಟೆ ತೊಟ್ಟ ಮುದ್ದು ಮಕ್ಕಳು, ಸೋಗಲಾಡಿತನ ತೋರಿಸುವ ರಾಜಕಾರಣಿಗಳು... ಪಿಟಿಐನಿಂದ ಹೆಕ್ಕಲಾದ ಕೆಲ ಚಿತ್ರಗಳನ್ನು ಇಲ್ಲಿ ನೀಡಿದ್ದೇವೆ.
ಚೀನಾದಲ್ಲೂ ಸೋಮವಾರವೇ ರಂಜಾನ್
ಹಲವಾರು ರಾಷ್ಟ್ರಗಳಲ್ಲಿ ಭಾನುವಾರವೇ ರಂಜಾನ್ ಆಚರಿಸಲಾಯಿತಾದರೂ, ಚೀನಾದಲ್ಲಿ ಸೋಮವಾರ ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿದರು. ನಮಾಜಿಗೆ ಕುಳಿತ ಪುಟ್ಟ ಮಗುವೊಂದು ತನ್ನ ಹಿರಿಯರನ್ನು ಅನುಕರಿಸುತ್ತಿರುವ ದೃಶ್ಯ ಮಗುವಲ್ಲಿನ ಮುಗ್ಧತೆಯನ್ನು ತೋರಿಸುತ್ತಿದೆ.
ಮುಖದಲ್ಲಿನ ಆ ನಗು ಎಂದಿಗೂ ಹೀಗೆಯೇ ಇರಲಿ
29 ದಿನಗಳ ಕಠಿಣ ಉಪವಾಸ ವ್ರತವನ್ನು ಹಿರಿಯರು ಮಾತ್ರವಲ್ಲ ಮಕ್ಕಳು ಕೂಡ ಅಷ್ಟೇ ನಿಷ್ಠೆಯಿಂದ ಆಚರಿಸುತ್ತಾರೆ. ಮುಂಬೈನಲ್ಲಿ ಹೂವನ್ನು ನೀಡಿ ಒಬ್ಬರನ್ನೊಬ್ಬರು ತಬ್ಬಿಕೊಂಡಿರುವ ಚಿತ್ರ ನಿಜಕ್ಕೂ ಮುದ ನೀಡುತ್ತದೆ. ಮಕ್ಕಳ ಮುಖದಲ್ಲಿನ ಆ ನಗು ಎಂದಿಗೂ ಹೀಗೆಯೇ ಇರಲಿ.
ಮುಸ್ಲಿಂ ಬಾಂಧವರಿಗೆ ನಿತಿಶ್ ಶುಭಾಶಯ
ಪಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ರಂಜಾನ್ ಹಬ್ಬದಂದು ನಮಾಜ್ ಮಾಡಲು ನೆರೆದಿದ್ದ ಸಹಸ್ರಾರು ಮುಸ್ಲಿಂ ಬಾಂಧವರಿಗೆ, ಮುಸ್ಲಿಂ ಧರ್ಮಗುರುಗಳಿಗೆ ಶುಭ ಕೋರುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್.
ಮಮತಾ ದೀದಿಗೆ ಮುಸ್ಲಿಂರ ಅಭಿನಂದನೆ
ಕನ್ಯಾಶ್ರೀ ಯೋಜನೆಗಾಗಿ ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವಾ ಪ್ರಶಸ್ತಿಯನ್ನು ಪಡೆದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈದ್-ಉಲ್-ಫಿತರ್ ಹಬ್ಬದಂದು ಅಭಿನಂದಿಸಲಾಯಿತು.
ಕೈಯಲ್ಲಿ ಪ್ರೇಮದ ಸಂಕೇತವಾದ ರೋಸ್
ತಮಗೆ, ತಮ್ಮ ಬಾಂಧವರಿಗೆ ಒಳಿತಾಗಲೆಂದು ಅಲ್ಲಾಹುವನ್ನು ಪ್ರಾರ್ಥಿಸುವುದರ ಜೊತೆಗೆ ಜಗತ್ತಿನ ಶಾಂತಿಗಾಗಿ, ಶಾಂತಿ ಕದಡುತ್ತಿರುವ ದುಷ್ಟಶಕ್ತಿಗಳ ನಿರ್ನಾಮಕ್ಕಾಗಿ ಮುಸ್ಲಿಂ ಬಾಂಧವರು ಪ್ರಾರ್ಥಿಸುತ್ತಿರುವಂತಿದೆ ಮುಂಬೈನಲ್ಲಿ ಕಂಡ ಈ ದೃಶ್ಯ.
ತಕ್ಕೊಳ್ಳೋಣ ಬರ್ರೋ ಸೆಲ್ಫಿ
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ರಂಜಾನ್ ಸಂದರ್ಭದಲ್ಲಿ ಸಂಭ್ರಮಿಸುತ್ತಿರುವುದು. ನಮಾಜ್ ಗೆ ಹೋಗುವ ಮುನ್ನ ಮುಸ್ಲಿಂ ಜನರ ಗುಂಪೊಂದು ಸೆಲ್ಫಿ ತೆಗೆದುಕೊಳ್ಳುತ್ತಿದೆ.
ಸಿದ್ದರಾಮಯ್ಯನವರಿಂದ ಶುಭಾಶಯ
ಶಾಂತಿ, ಸಹಬಾಳ್ವೆ ಮತ್ತು ಸಹೋದರತ್ವದ ಸಂಕೇತವಾಗಿರುವ ರಂಜಾನ್ ಹಬ್ಬ ನಮಲ್ಲಿ ಮೌಲ್ಯ ತುಂಬುವ, ಮತ್ತಷ್ಟು ಸ್ಫೂರ್ತಿ ತುಂಬುವ ಹಬ್ಬ. ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯಗಳು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ದೇಶದ್ರೋಹಿಗಳನ್ನು ಮಟ್ಟಹಾಕುವವರು ಯಾರು?
ಒಂದೆಡೆ ಮುಸ್ಲಿಂ ಸಹೋದರ ಸಹೋದರಿಯರೆಲ್ಲರೂ ವಿಶ್ವದ ಶಾಂತಿಗಾಗಿ ಪ್ರಾರ್ಥನೆ ಮಾಡುತ್ತಿದ್ದರೆ, ಶ್ರೀನಗರದಲ್ಲಿ ಪಾಕಿಸ್ತಾನದ ಬಾವುಟ ಹಿಡಿದು ವಿಧ್ವಂಸಕ ಕೃತ್ಯಕ್ಕೆ ಇಳಿದಿರುವ ದೇಶದ್ರೋಹಿಗಳು. ಇವರನ್ನು ಮಟ್ಟ ಹಾಕುವವರು ಯಾರು?
ದುಷ್ಕೃತ್ಯ ಎಸಗುವವರಿಗೆ ಒಳ್ಳೆ ಬುದ್ಧಿ ಕೊಡಪ್ಪ ಅಲ್ಲಾ
ಅದೇ ಶ್ರೀನಗರದಲ್ಲಿ ಹಿಂಸಾಕೃತ್ಯವನ್ನು ಮೆಟ್ಟಿನಿಂತು ಮಹಿಳೆಯರು ಕೂಡ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿನ ಜನರು ನೆಮ್ಮದಿಯಾಗಿ ಜೀವನ ಮಾಡುವುದು ಎಂದು?
ನಮಾಜಿಗೆ ನೂಕುನುಗ್ಗಲು
ರಾಜಸ್ತಾನದ ಜಗತ್ ಪ್ರಸಿದ್ಧ ಅಜ್ಮೇರ್ ದರ್ಗಾದ 'ಜನ್ನತಿ ದರ್ವಾಜಾ' ಮೂಲಕ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಬಾಂಧವರ ನೂಕುನುಗ್ಗಲು.