ಒಡಿಶಾ: ಎಲ್ಲೋದ್ರು ದಕ್ಷ ಅಧಿಕಾರಿ ಇಬ್ರಾಹಿಂ ಷರೀಫ್!?
ಇಂಡಿಯನ್ ಬ್ಯುರೋ ಆಫ್ ಮೈನ್ಸ್ ಸಂಸ್ಥೆಯಲ್ಲಿ (IBM) ಸಹಾಯಕ ಗಣಿ ನಿಯಂತ್ರಕರಾಗಿ ಆಯಕಟ್ಟಿನ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 34 ವರ್ಷದ ಇಬ್ರಾಹಿಂ ಷರೀಫ್ ಅವರು ದಿಢೀರನೆ ನಾಪತ್ತೆಯಾಗಿರುವುದು ಸಂಡೂರಿನಲ್ಲಿರುವ ಅವರ ಕುಟುಂಬವನ್ನು ಆತಂಕಕ್ಕೆ ನೂಕಿದೆ. ಇಬ್ರಾಹಿಂ ಅವರ ಸಹೋದರರು ಭುವನೇಶ್ವರಕ್ಕೆ ತೆರಳಿ, ಹುಟುಕಾಟದಲ್ಲಿ ತೊಡಗಿದ್ದಾರೆ. ಆದರೆ ಏನೂ ಪ್ರಗತಿ ಕಂಡುಬಂದಿಲ್ಲ. (ಸೋಲಿಲ್ಲದ ಸೋಲಿಗ ಕೆಎಎಸ್ ಆದ ಕಥೆ! )
ಈ ಮಧ್ಯೆ, 'ಕರ್ನಾಟಕದ ದಕ್ಷ ಅಧಿಕಾರಿಯೊಬ್ಬರು ನಾಪತ್ತೆಯಾಗಿರುವ ಪ್ರಕರಣ' ರಾಜ್ಯದ ಗೃಹ ಸಚಿವ ಟಿಜೆ ಜಾರ್ಜ್ ಅವರ ಗಮನಕ್ಕೆ ತಡವಾಗಿ ಬಂದಿದೆ. ಈ ಬಗ್ಗೆ ಸೋಮವಾರ ಬೆಳಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಜಾರ್ಜ್ ಅವರು ಇಬ್ರಾಹಿಂ ನಾಪತ್ತೆಯಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಕಾರ್ಯದರ್ಶಿಗೆ ಆದೇಶ ನೀಡುವುದಾಗಿ ಹೇಳಿದ್ದಾರೆ.
ನವೆಂಬರ್ 25ರಂದು Indian Bureau of Mines (IBM) ಕಚೇರಿಗೆ ಹೋಗುವುದಾಗಿ ಹೇಳಿ ಭುವನೇಶ್ವರದ ಕನನ ವಿಹಾರ್ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ಷರೀಫ್ ತೆರಳಿದ್ದರು. ಅದಾದ ನಂತರ ಅವರು ಕಚೇರಿಗೆ ಹೋಗಿಲ್ಲ. ಆದರೆ ಅವರ ಬೈಕ್ ಮಾತ್ರ ಸಿಕ್ಕಿದೆ. ( KAS ಮಹಾಂತೇಶ್ ಹತ್ಯೆ: ಇಬ್ಬರ ಬಂಧನ )
ಸಂಡೂರು ತಾಲೂಕಿನ ಯಶವಂತನಗರದ ಗಿಡ್ಡುಸಾಬ್ ಹಾಗೂ ಬೇಗಂ ದಂಪತಿಯ ಎರಡನೇ ಮಗ ಷರೀಫ್. ಬಕ್ರೀದ್ ಹಬ್ಬಕ್ಕೆ ಪತ್ನಿ ಸಲ್ಮಾ ಅವರ ಜತೆಗೂಡಿ ಷರೀಫ್ ಊರಿಗೆ ಬಂದಾಗ ಮನೆಯಲ್ಲಿ ಸಂಭ್ರಮ ಹೆಚ್ಚಾಗಿತ್ತು. ಆದರೆ ಇದೀಗ ಅವರ ಅಪಹರಣದಿಂದ ಅವರ ಯಶವಂತನಗರದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಪಿಯುಸಿವರೆಗೂ ಸಂಡೂರಿನಲ್ಲಿಯೇ ಓದಿಕೊಂಡು, ಮುಂದೆ ಕೋಲಾರದಲ್ಲಿ ಡಿಪ್ಲೊಮಾ ಇನ್ ಮೈನಿಂಗ್ ಮಾಡಿದ್ದರು ಷರೀಫ್. ಅದಾದ ನಂತರ ಕಷ್ಟಪಟ್ಟು ಅದೇ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಸಹ ಪಡೆದಿದ್ದರು. ಮೊದಲು ಸಂಡೂರಿನಲ್ಲಿ ಸ್ಥಳೀಯ ಕಂಪನಿಗೆ ಸೇರಿಕೊಂಡು ವೃತ್ತಿ ಜೀವನ ಆರಂಭಿಸಿದ್ದರು.
ಮುಂದೆ, ವಿದ್ಯಾಭ್ಯಾಸಕ್ಕೆ ತಕ್ಕಂತೆ ಗೋವಾದಲ್ಲಿ ಕೆಲಸ ಸಿಕ್ಕಿದ್ದರಿಂದ, ಅಲ್ಲಿ 4 ತಿಂಗಳ ಕಾಲ ಅಲ್ಲಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ 2011ರಲ್ಲಿ, ಒಡಿಶಾದ ಭುವನೇಶ್ವರದ IBMನಲ್ಲಿ ಅಸಿಸ್ಟೆಂಟ್ ಕಂಟ್ರೋಲರ್ ಆಗಿ ಅಕ್ರಮ ವ್ಯವಹಾರ ನಡೆಸುತ್ತಿದ್ದ 45ಕ್ಕೂ ಹೆಚ್ಚು ಗಣಿ ಕಂಪನಿಗಳನ್ನು ಮಚ್ಚಿಸಿದ್ದರು.
'ಷರೀಫ್ ಸೆಪ್ಟೆಂಬರಿನಲ್ಲಿ ಖೇನ್ಜೋಹರ ಜಿಲ್ಲೆಯ ಬರ್ಬಿಲ್ ಎಂಬ ಪ್ರದೇಶದಲ್ಲಿ ಕೆಲವು ಗಣಿ ಪ್ರದೇಶಗಳನ್ನು ಪರಿಶೀಲಿಸಿದ್ದರು. ಅಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದರು. ಪರಿಶೀಲನಾ ವರದಿಯನ್ನು ಗಣಿ ಕಂಪನಿಗಳ ಪರವಾಗಿ ನೀಡುವಂತೆಯೂ ಒತ್ತಡವಿತ್ತು. ಇದಕ್ಕೆ ಅವರು ಒಪ್ಪಿರಲಿಲ್ಲ. ಇದರಿಂದ ಅವರು ಒತ್ತಡದಲ್ಲಿರುವಂತೆ ಕಾಣುತ್ತಿದ್ದರು' ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.