ಧಾರ್ಮಿಕ ಮತಾಂತರ ಪ್ರಕರಣ, ಉತ್ತರ ಪ್ರದೇಶ, ದೆಹಲಿಯಲ್ಲಿ ಇ.ಡಿ. ದಾಳಿ
ನವದೆಹಲಿ, ಜುಲೈ 03: ಧಾರ್ಮಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ.
ವಿದೇಶಗಳಿಂದ ಹಣ ಪಡೆದು ಶ್ರವಣ ದೋಷವುಳ್ಳ ವಿದ್ಯಾರ್ಥಿಗಳು ಹಾಗೂ ಬಡವರನ್ನು ಇಸ್ಲಾಮ್ ಗೆ ಮತಾಂತರಗೊಳಿಸುತ್ತಿದ್ದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಉತ್ತರ ಪ್ರದೇಶ, ದೆಹಲಿಗಳಲ್ಲಿ ದಾಳಿ ನಡೆಸಿದೆ.
ಎಟಿಎಸ್ ನಿಂದ ಬಂಧನಕ್ಕೊಳಗಾಗಿದ್ದ ಇಬ್ಬರು ಪುರುಷರು, ದೆಹಲಿಯ ಜಾಮಿಯಾ ನಗರದ ಇಸ್ಲಾಮಿಕ್ ದವಾಹ್ ಕೇಂದ್ರ ಎಂಬ ಸಂಘಟನೆಯನ್ನು ನಡೆಸುತ್ತಿದ್ದರು. ಈ ಸಂಘಟನೆಯ ಮೂಲಕ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ ಮತ್ತು ಇತರ ವಿದೇಶಿ ಏಜೆನ್ಸಿಗಳ ಮೂಲಕ ಆರ್ಥಿಕ ನೆರವನ್ನು ಪಡೆದು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು.
ಬಂಧಿತರನ್ನು ಮುಫ್ತಿ ಖಾಜಿ ಜಹಾಂಗೀರ್ ಆಲಂ ಕಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಎಂದು ಗುರುತಿಸಲಾಗಿದೆ.
6 ಪ್ರದೇಶಗಳಲ್ಲಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ಬೇಧಿಸಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.