ಅಕ್ರಮ ಹಣ ವರ್ಗಾವಣೆ: ಜಾರ್ಖಂಡ್ ಐಎಎಸ್ ಅಧಿಕಾರಿ ಪೂಜಾ ಬಂಧನ
ರಾಂಚಿ, ಮೇ 11: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪೂಜಾ ಸಿಂಘಾಲ್ ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರದಂದು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಲವು ಗಂಟೆಗಳ ಕಾಲ ವಿಚಾರಣೆಯನ್ನು ಪೂಜೆ ಎದುರಿಸಿದ್ದರು.
ಈ ಪ್ರಕರಣದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರನ್ನು ಮೇ 7 ರಂದು ಬಂಧಿಸಲಾಗಿತ್ತು. ಸದ್ಯ ಸುಮನ್ ಮೇ 11 ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ದಾಳಿಯಲ್ಲಿ ಸಂಸ್ಥೆ ಆವರಣದಲ್ಲಿದ್ದ 17 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಐಎಎಸ್ ಅಧಿಕಾರಿ ಮತ್ತು ಅವರ ಪತಿಯೊಂದಿಗೆ ಸುಮನ್ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.
ಅಕ್ರಮ ಗಣಿಗಾರಿಕೆ: ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮನೆ ಮೇಲೆ ಇಡಿ ದಾಳಿ
2000 ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ವೇಳೆಯಲ್ಲಿ ಆಕೆ ನೀಡಿದ ಉತ್ತರ ಸಮಂಜಸವಾಗಿಲ್ಲ ಕಾರಣ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಹೇಳಿದೆ.
ಪೂಜಾರನ್ನು ವಶಕ್ಕೆ ಪಡೆದ ತನಿಖಾ ಸಂಸ್ಥೆಯು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ಅವಧಿ ಕಸ್ಟಡಿಗೆ ಕೋರಲಾಗಿದೆ. ಎರಡನೇ ದಿನದ ವಿಚಾರಣೆಗಾಗಿ ಅವರು ಬೆಳಗ್ಗೆ 10:40 ರ ಸುಮಾರಿಗೆ ರಾಂಚಿಯ ಹಿನೂ ಪ್ರದೇಶದಲ್ಲಿರುವ ತನಿಖಾ ಸಂಸ್ಥೆಯ ಪ್ರಾದೇಶಿಕ ಕಚೇರಿಗೆ ಆಗಮಿಸಿದ್ದರು. ಸಿಂಘಾಲ್ ಮಂಗಳವಾರ ಸುಮಾರು 9 ಗಂಟೆಗಳ ಕಾಲ ಇಡಿ ಕಚೇರಿಯಲ್ಲಿದ್ದು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಜಾರ್ಖಂಡ್ ಕೇಡರ್ನ ಹಿರಿಯ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನಿಕಟವರ್ತಿಯಾಗಿದ್ದಾರೆ.
ಪೂಜಾ ಸಿಂಘಾಲ್ ಪ್ರಸ್ತುತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಮತ್ತು ಜಾರ್ಖಂಡ್ ಸ್ಟೇಟ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (JSMDC)ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಜಾರ್ಖಂಡ್ ಹೈಕೋರ್ಟ್ ವಕೀಲ ರಾಜೀವ್ ಅವರು ಕಳೆದ 2022ರ ಫೆಬ್ರವರಿ ಇಡಿಯಲ್ಲಿ ಪೂಜಾ ಸಿಂಘಾಲ್ ವಿರುದ್ಧ ದೂರು ದಾಖಲಿಸಿದ್ದರು.