ಜಾಕಿರ್ ನಾಯಕ್ ಗೆ ಶೀಘ್ರವೇ ಜಾಮೀನು ರಹಿತ ಬಂಧನ ವಾರೆಂಟ್?
ಸದ್ಯಕ್ಕೆ ಸೌದಿ ಅರೇಬಿಯಾದಲ್ಲಿರುವ ಜಾಕಿರ್ ನಾಯಕ್ ಗೆ ಸಂಬಂಧಿಸಿದ ಆರ್ಥಿಕ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಆಯೋಗ (ಎನ್ ಐಎ) ಕೂಡ ಈವರೆಗೆ 3 ಸಮನ್ಸ್ ಜಾರಿಗೊಳಿಸಿದೆ.
ನವದೆಹಲಿ, ಏಪ್ರಿಲ್ 11: ಇಸ್ಲಾಂ ಧರ್ಮ ಬೋಧಕ ಡಾ. ಜಾಕಿರ್ ನಾಯಕ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸುವಂತೆ ಮುಂಬೈನ ಆರ್ಥಿಕ ಅವ್ಯವಹಾರ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ (ಏಪ್ರಿಲ್ 11) ಅರ್ಜಿ ಸಲ್ಲಿಸಿದೆ.
ಸದ್ಯಕ್ಕೆ ಸೌದಿ ಅರೇಬಿಯಾದಲ್ಲಿರುವ ಜಾಕಿರ್ ನಾಯಕ್ ಗೆ ಸಂಬಂಧಿಸಿದ ಆರ್ಥಿಕ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಆಯೋಗ (ಎನ್ ಐಎ) ಕೂಡ ಈವರೆಗೆ 3 ಸಮನ್ಸ್ ಜಾರಿಗೊಳಿಸಿದೆ. ಆದರೆ, ಇದ್ಯಾವುದನ್ನೂ ಜಾಕಿರ್ ಮಾನ್ಯ ಮಾಡಿಲ್ಲ.
ಜಾಕಿರ್ ಅವರು ಸೌದಿ ಅರೇಬಿಯಾದಲ್ಲಿರುವ ಮಾಹಿತಿ ಇರುವುದರಿಂದ ಅವರ ಇ-ಮೇಲ್ ಗೂ ಸಮನ್ಸ್ ಜಾರಿಗೊಳಿಸಲಾಗಿದೆ. ಆದರೆ, ಇದ್ಯಾವುದಕ್ಕೂ ಜಾಕಿರ್ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ಮೊದಲ ಸಮನ್ಸ್ ಜಾರಿಯಾದಾಗ, ಭಾರತದಲ್ಲಿರುವ ತಮ್ಮ ವಕೀಲರ ಮೂಲಕ ಮುಂಬೈ ನ್ಯಾಯಾಲಯಕ್ಕೆ ತನ್ನದೇ ಪ್ರತ್ಯೇಕ ಸಲ್ಲಿಸಿದ್ದ ಜಾಕಿರ್, ತಾವು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ಕೋರಿದ್ದರು. ಆದರೆ, ಇದನ್ನು ಎನ್ ಐಎ ತಿರಸ್ಕರಿಸಿತ್ತು.
ಆನಂತರ, ಜಾರಿಗೊಂಡ ಸುಮಾರು ಎರಡು ಸಮನ್ಸ್ ಗಳಿಗೆ ಜಾಕಿರ್ ಉತ್ತರಿಸಿಲ್ಲ. ಇತ್ತೀಚೆಗೆ ಜಾರಿಗೊಂಡ ಮೂರನೇ ಸಮನ್ಸ್ ನಲ್ಲಿ ಏಪ್ರಿಲ್ 17ರಂದು ಮುಂಬೈನಲ್ಲಿರುವ ಎನ್ ಐಎ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ತಿಳಿಸಿತ್ತು. ಆದರೆ, ಇದಕ್ಕೂ ಜಾಕಿರ್ ಅವರಿಂದ ಉತ್ತರ ಬಂದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಾರಿ ನಿರ್ದೇಶನಾಲಯ ಜಾಕಿರ್ ವಿರುದ್ಧ ವಾರಂಟ್ ಜಾರಿಗೊಳಿಸುವಂತೆ ಕೋರ್ಟ್ ಮೊರೆ ಹೋಗಿದೆ.