ರಾವಣನ ಪ್ರತಿಕೃತಿ ಸುಡುವುದನ್ನು ನೋಡಲು ಹೋಗಿ ತಾವೇ ಬಲಿಯಾದರು
ಅಮೃತಸರ, ಅಕ್ಟೋಬರ್ 20: ಸಡಗರದ ಹಬ್ಬ ದಸರಾ ದುರಂತದ ನೋವಿನೊಂದಿಗೆ ಕೊನೆಕೊಂಡಿದೆ. ರಾತ್ರೋ ರಾತ್ರಿ ಸಂಭ್ರಮದ ಮೇಲೊಂದು ಬರಸಿಡಿಲು ಎಗರಿದೆ.
ಹೊತ್ತಿ ಉರಿಯುವ ರಾವಣನ ಪ್ರತಿಕೃತಿಯನ್ನು ನೋಡಲು ಹೋದವರರು ತಾವೇ ಸಾವಿನ ಮನೆ ಸೇರುವ ಸ್ಥಿತಿ ಬಂದಿರುವುದು ಘೋರ ದುರಂತ.
ಪಟಾಕಿ ಸದ್ದನ್ನು ಆನಂದಿಸುತ್ತಾ ನಿಂತಿದ್ದ ಜನರಿಗೆ ಯಮನ ಸ್ವರೂಪಿ ರೈಲು ಬಂದಿದ್ದೇ ಅರಿವಾಗಲಿಲ್ಲ. ಹೀಗೆ ನೂರಾರು ಜನರ ಮೇಲೆ ಹರಿದ ರೈಲು ಸುಮಾರು 62 ಮಂದಿಯನ್ನು ಬಲಿತೆಗೆದುಕೊಂಡಿತು. ಅನೇಕರು ಕೈಕಾಲುಗಳನ್ನು ಕಳೆದುಕೊಂಡು ನರಳಾಡುತ್ತಿದ್ದಾರೆ.
ಜೌರಾ ಫಾಠಕ್ನಲ್ಲಿ ಎತ್ತರ ಪ್ರದೇಶದಲ್ಲಿದ್ದ ರೈಲ್ವೆ ಹಳಿಯ ಮೇಲೆ ನಿಂತರೆ ರಾವಣನ ದಹನ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಜತೆಗೆ ಸಿಡಿಮದ್ದಿನ ಬಣ್ಣದ ಚಿತ್ತಾರದ ಅಂದವನ್ನೂ ಚೆನ್ನಾಗಿ ಸವಿಯಬಹುದಾಗಿತ್ತು. ಆಗಲೇ ಅನೇಕರು ರೈಲ್ವೆ ಹಳಿಯ ಮೇಲೆ ನಿಂತಿದ್ದರು. ಇನ್ನಷ್ಟು ಮಂದಿ ಅವರನ್ನು ಕೂಡಿಕೊಂಡರು.
ಅಮೃತಸರ ರೈಲು ದುರಂತ: ಸೆಲ್ಫಿ ಕ್ಲಿಕ್ಕಿಸುತ್ತಿದ್ದವರ ಮೇಲೆ ಹರಿದ ರೈಲು!
ಪಟಾಕಿಯ ಭಾರಿ ಸದ್ದಿನಿಂದಾಗಿ ಅಲ್ಲಿ ನಿಂತಿದ್ದವರಿಗೆ ರೈಲು ಬರುತ್ತಿರುವ ಶಬ್ಧ ಕೇಳಿಸಲೇ ಇಲ್ಲ. ಈ ಘಟನೆ ಹೇಗಾಯ್ತು, ಏನೇನಾಯ್ತು ಇಲ್ಲಿದೆ ವಿವರ.
ಮಾನವ ಚಾಲಿತ ಕ್ರಾಸಿಂಗ್
ಅಮೃತಸರದ ಧೋಬಿ ಘಾಟ್ನ ಜೌರಾ ಫಾಠಕ್ನಲ್ಲಿ ಶುಕ್ರವಾರ ಸಂಜೆ 6.45ರ ವೇಳೆಗೆ ಈ ದುರಂತ ಸಂಭವಿಸಿದೆ. ರೈಲು ಜಲಂಧರ್ನಿಂದ ಅಮೃತಸರಕ್ಕೆ ತೆರಳುತ್ತಿತ್ತು. ರೈಲ್ವೆ ಕ್ರಾಸಿಂಗ್ ಗೇಟ್ಅನ್ನು ಮುಚ್ಚಲಾಗಿತ್ತು. ಇದು ಮಾನವ ಚಾಲಿತ ಕ್ರಾಸಿಂಗ್ ಗೇಟ್ ಆಗಿತ್ತು.
ಈ ದಸರಾ ಉತ್ಸವವನ್ನು ಸ್ಥಳೀಯ ಕಾಂಗ್ರೆಸ್ ಪಾಲಿಕೆ ಸದಸ್ಯನ ಮಗ ಸೌರಭ್ ಮಿತು ಮದಾನ್ ಆಯೋಜಿಸಿದ್ದರು. ಕಳೆದ ವರ್ಷ ಈ ಸ್ಥಳದಲ್ಲಿ ದಸರಾ ಉತ್ಸವ ನಡೆದಿರಲಿಲ್ಲ.
ನಾನು ಪಲಾಯನ ಮಾಡಿಲ್ಲ: ಸಿಧು ಪತ್ನಿಯಿಂದ ಸಮಜಾಯಿಷಿ
ಎಚ್ಚರಿಕೆಯ ಸದ್ದು ಮೊಳಗಿಸಲಿಲ್ಲ
ರೈಲು ಬರುವಾಗ ಯಾವುದೇ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರಂತಕ್ಕೆ ರೈಲ್ವೆ ಆಡಳಿತವೇ ಕಾರಣ ಎಂದು ದೂರಿದ್ದಾರೆ. ಪೊಲೀಸರ ವಶದಲ್ಲಿರುವ ರೈಲು ಚಾಲಕ, ತನಗೆ ಎಲ್ಲವೂ ಸುಗಮವಾಗಿದೆ ಎಂಬ ಹಸಿರು ನಿಶಾನೆ ಸಿಕ್ಕಿತ್ತು. ಮುಂದೆ ಹಳಿಯ ಮೇಲೆ ನೂರಾರು ಜನರಿದ್ದಾರೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ಘೋರ ರೈಲು ದುರಂತಕ್ಕೆ ಕಂಬನಿ ಮಿಡಿದ ಎಚ್ ಡಿ ಕುಮಾರಸ್ವಾಮಿ
|
ದೇಹಗಳು ಛಿದ್ರ ಛಿದ್ರ
ವೇಗವಾಗಿ ತೆರಳುತ್ತಿದ್ದ ರೈಲಿನ ಕಾಲಿಗೆ ಸಿಲುಕಿ ಅನೇಕರ ದೇಹಗಳು ಛಿದ್ರಗೊಂಡಿವೆ. ಇದುವರೆಗೂ 39 ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗಿದೆ. ಉಳಿದವರ ದೇಹಗಳು ತುಂಡಾಗಿರುವುದರಿಂದ ಅವುಗಳನ್ನು ಗುರುತಿಸುವುದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸಿವಿಲ್ ಆಸ್ಪತ್ರೆ ಮತ್ತು ಗುರುನಾನಕ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ರೈಲ್ವೆ ಹಳಿ ಸಮೀಪವೇ ದಹನ
ರಾವಣನ ಪ್ರತಿಕೃತಿಯನ್ನು ರೈಲ್ವೆ ಹಳಿಯಿಂದ ಕೇವಲ 100 ಮೀಟರ್ಗೂ ಕಡಿಮೆ ಅಂತರದಲ್ಲಿ ಸುಡಲಾಗಿತ್ತು. ಪ್ರತಿಕೃತಿ ಸುಟ್ಟು ಬಿದ್ದ ಕೂಡಲೇ ಜನರು ರೈಲ್ವೆ ಹಳಿಯತ್ತ ಓಡಿದರು. ಆ ವೇಳೆಗೇ ರೈಲು ವೇಗವಾಗಿ ಬರುತ್ತಿತ್ತು ಎಂದು ಉತ್ತರ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ. ಅಪಘಾತದ ಸ್ಥಳದಲ್ಲಿ ಸುಮಾರು 300 ಮಂದಿ ಇದ್ದರು. ಕನಿಷ್ಠ 58 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ 13 ಜನರ ಪರಿಸ್ಥಿತಿ ಗಂಭೀರವಾಗಿದೆ.
|
ರೈಲ್ವೆ ಇಲಾಖೆಯಿಂದ ಲೋಪವಾಗಿಲ್ಲ
ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೊಹಾನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದುರಂತಕ್ಕೆ ರೈಲ್ವೆಯ ಲೋಪ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ರೈಲ್ವೆ ಹಳಿಯ ಸಮೀಪ ದಸರಾ ಆಚರಣೆ ನಡೆಯಲಿದೆ ಎಂದು ತಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ನವದೆಹಲಿ ಹಾಗೂ ಅಮೃತಸರದ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಸ್ಥಳದಲ್ಲಿ ಇರಲಿಲ್ಲ: ಕೌರ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಗೆ, ಮನೆಗೆ ಮರಳಿದ ಬಳಿಕ ದುರಂತ ಸಂಭವಿಸಿರುವುದು ಗೊತ್ತಾಗಿದೆ ಎಂದು ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ತಿಳಿಸಿದ್ದಾರೆ.
'ರಾವಣನನ್ನು ಸುಟ್ಟ ಬಳಿಕ ನಾನು ಮನೆಗೆ ಹಿಂದಿರುಗಿದೆ. ಬಳಿಕ ವೇಗದಿಂದ ರೈಲು ಬಂದು ಅಪಘಾತ ನಡೆದಿರುವುದು ತಿಳಿಯಿತು. ಕೂಡಲೇ ಕಮಿಷನರ್ಗೆ ಕರೆ ಮಾಡಿ ನಾನು ಮತ್ತೆ ಬರಬೇಕೇ ಎಂದು ಕೇಳಿದೆ. ಆಗ ಅವರು ಅಷ್ಟೇನೂ ದೊಡ್ಡ ಬಿಕ್ಕಟ್ಟು ಎದುರಾಗಿಲ್ಲ ಎಂದರು ಎಂದು ಕೌರ್ ತಿಳಿಸಿದ್ದಾರೆ.
|
ಮೃತರ ಕುಟುಂಬಕ್ಕೆ 5 ಲಕ್ಷ ರೂ.
ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ತೆರೆದಿರುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ 5 ಲಕ್ಷ ರೂ ನೀಡಲಿದ್ದು, ಗಾಯಾಳುಗಳ ಎಲ್ಲ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.
ಎಲ್ಲಾ ರೀತಿಯ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ರೈಲ್ವೆ ಇಲಾಖೆಯು ತಕ್ಷಣ ಪರಿಹಾರ ಮತ್ತು ಕಾರ್ಯಾಚರಣೆ ನಡೆಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಅಮೆರಿಕದಲ್ಲಿರುವ ಗೋಯಲ್ ಭಾರತಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.