ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಜಾ ಬಗ್ಗೆ ಪುದುಚೇರಿ ಸಿಎಂ ಮಾತು?
ಪುದುಚೇರಿ, ಫೆಬ್ರವರಿ.16: ನಮ್ಮ ಒತ್ತಡದಿಂದಾಗಿಯೇ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ಭಾರತೀಯ ಸರ್ಕಾರವು ವಜಾಗೊಳಿಸಿದೆ ಎಂದು ಮುಖ್ಯಮಂತ್ರಿ ವಿ. ನಾರಾಯಣಸಾಮಿ ತಿಳಿಸಿದ್ದಾರೆ.
ಕಿರಣ್ ಬೇಡಿ ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮವು ಪುದುಚೇರಿ ಜನರ ಪಾಲಿಗೆ ದಿಗ್ವಿಜಯವಾಗಿದೆ. ಅವರು ತಮ್ಮ ಅಧಿಕಾರದಿಂದಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದರು ಎಂದು ಸಿಎಂ ನಾರಾಯಣಸಾಮಿ ಆರೋಪಿಸಿದ್ದಾರೆ.
ಪುದುಚೇರಿ ಸರ್ಕಾರದ ಬಿಕ್ಕಟ್ಟಿನ ನಡುವೆ ರಾಜ್ಯಪಾಲೆ ಕಿರಣ್ ಬೇಡಿ ವಜಾ!
ಪುದುಚೇರಿಯಲ್ಲಿ ಸರ್ಕಾರದ ಬಿಕ್ಕಟ್ಟಿನ ನಡುವೆ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪುದುಚೇರಿ ಲೆಫ್ಟನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದರು. ತೆಲಂಗಾಣ ರಾಜ್ಯಪಾಲ ಡಾ. ತಮಿಳುಸಾಯಿ ಸುಂದರ್ ರಾಜನ್ ಅವರಿಗೆ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಡಾ.ಕಿರಣ್ ಬೇಡಿಯವರ ಅಧಿಕಾರವನ್ನು ತಡೆ ಹಿಡಿಯುವ ಬಗ್ಗೆ ನಿರ್ದೇಶನ ನೀಡಲಾಗಿದೆ. ಪುದುಚೇರಿಯ ಕಾರ್ಯಗಳನ್ನು ನೋಡಿಕೊಳ್ಳುವುದಕ್ಕಾಗಿ ರಾಜ್ಯಪಾಲ ಡಾ. ತಮಿಳುಸಾಯಿ ಸುಂದರ್ ರಾಜನ್ ಅವರನ್ನು ನೇಮಿಸಲಾಗಿದೆ.
ಪುದುಚೇರಿಯಲ್ಲಿ ಸರ್ಕಾರ ಪತನ ಭೀತಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರು ಮತ್ತು ನಾಲ್ವರು ಶಾಸಕರು ರಾಜೀನಾಮೆ ಸಲ್ಲಿಸಿದ ನಂತರವೂ ಮುಖ್ಯಮಂತ್ರಿ ನಾರಾಯಣಸ್ವಾಮಿಯವರು ಅಧಿಕಾರವನ್ನು ಆಸ್ವಾದಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಒಟ್ಟು 28 ಶಾಸಕರಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 14 ಶಾಸಕರ ಬೆಂಬಲವಿದ್ದು, ವಿರೋಧ ಪಕ್ಷದಲ್ಲಿಯೂ ಬಿಜೆಪಿಯ ಮೂವರು ನಾಮನಿರ್ದೇಶಕ ಸದಸ್ಯರು ಸೇರಿದಂತೆ 14 ಮಂದಿ ಸದಸ್ಯರ ಬೆಂಬಲವಿದೆ. ಈ ಹಿನ್ನೆಲೆ ಅಲ್ಪಮತಕ್ಕೆ ಕುಸಿದ ಸರ್ಕಾರದ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸಲಿ ಎಂದು ವಿರೋಧ ಪಕ್ಷದ ನಾಯಕ ರಂಗಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸದಸ್ಯ ಬಲದ ಲೆಕ್ಕಾಚಾರ:
ಕಾಂಗ್ರೆಸ್ ಶಾಸಕ ನೀಡಿದ ರಾಜೀನಾಮೆಯಿಂದ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. ಸರ್ಕಾರವು ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿದೆ. 30 ಶಾಸಕ ಸ್ಥಾನ ಬಲವಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 11, ಡಿಎಂಕೆ 3 ಮತ್ತು ಒಬ್ಬ ಪಕ್ಷೇತರ ಶಾಸಕನ ಬೆಂಬಲದಿಂದ ಸರ್ಕಾರ ರಚಿಸಲಾಗಿತ್ತು. ವಿರೋಧ ಪಕ್ಷವಾಗಿ ಎನ್ ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4 ಮತ್ತು ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರಿದ್ದು, 14 ಸದಸ್ಯ ಬಲವನ್ನು ಹೊಂದಿದೆ.