ಹೊಸ ಸರ್ಕಾರ ರಚನೆಗೂ ಮುನ್ನವೇ ಬಿಜೆಪಿಗೆ ಆಘಾತಕಾರಿ ಸುದ್ದಿ
ನವದೆಹಲಿ, ಮೇ 25: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ-2 ಸರ್ಕಾರದಲ್ಲಿ ಈಗಿನಂತೆಯೇ ಪಾತ್ರ ನಿರ್ವಹಿಸುವುದು ಅನುಮಾನ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರು, ಮೋದಿ ಅವರ ಹೊಸ ಸರ್ಕಾರದ ಸಚಿವ ಸಂಪುಟದಿಂದ ಹೊರಗುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ದಿ ವೈರ್ ಪತ್ರಿಕೆ ವರದಿ ಮಾಡಿದೆ. ಶುಕ್ರವಾರ ನಡೆದ ಸಂಪುಟ ಸಭೆಗೆ ಅವರು ಹಾಜರಾಗಿರಲಿಲ್ಲ.
ಮೂಲಗಳ ಪ್ರಕಾರ ಜೇಟ್ಲಿ ಅವರು (66) ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರು ಯಾವುದೇ ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಲೀ, ಈಗಿರುವ ಹಣಕಾಸು ಇಲಾಖೆಯ ಹೊಣೆಗಾರಿಕೆಯನ್ನು ಮುಂದುವರಿಸುವುದಕ್ಕಾಗಲೀ ಅವರು ಬಯಸಿಲ್ಲ ಎನ್ನಲಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಅಥವಾ ಅರುಣ್ ಜೇಟ್ಲಿ ಅವರ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.
'ಅವರು ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರು ಖಂಡಿತವಾಗಿಯೂ ಹಣಕಾಸು ಸಚಿವ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೇಟ್ಲಿ ಅವರು ಯಾವ ರೀತಿಯ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಆದರೆ, ಅವರು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ಗೆ ತೆರಳುವುದು ಅಗತ್ಯವಾಗಿದೆ. ಜೂನ್ ತಿಂಗಳಿನಲ್ಲಿ ಅವರು ಲಂಡನ್ಗೆ ತೆರಳಲಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ.
ಮಗನ ಮದುವೆ ಬಳಿಕ ಲಂಡನ್ಗೆ?
ಅವರ ಅನಾರೋಗ್ಯದ ಕುರಿತು ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಲಂಡನ್ ಪ್ರವಾಸದ ಬಗ್ಗೆಯೂ ದೃಢ ಮಾಹಿತಿ ಸಿಕ್ಕಿಲ್ಲ. ಜೂನ್ ಮೊದಲ ವಾರದಲ್ಲಿ ಅವರ ಕುಟುಂಬದ ಕಾರ್ಯಕ್ರಮವೊಂದು ನಡೆಯಲಿದೆ. ಜೇಟ್ಲಿ ಅವರ ಮಗನ ಮದುವೆ ಜೂನ್ 4ರಂದು ಜರುಗಲಿದೆ. ಅವರ ಆರೋಗ್ಯ ಸ್ಥಿತಿ ವಿಷಮವಾದ ಕಾರಣದಿಂದ ಮದುವೆಯ ದಿನಾಂಕವನ್ನು ಹಿಂದಕ್ಕೆ ಹಾಕಿಕೊಳ್ಳಲಾಗಿದೆ. ಅದರ ಬಳಿಕ ಅವರು ಲಂಡನ್ಗೆ ತೆರಳಲಿದ್ದಾರೆ.
|
ಫಲಿತಾಂಶದ ದಿನ ಏಮ್ಸ್ನಲ್ಲಿದ್ದರೇ?
ದೇಶದಾದ್ಯಂತ ಚುನಾವಣೆಯ ಕಾವು ಏರಿದ್ದ ಸಂದರ್ಭದಲ್ಲಿ ಸುಮಾರು ಮೂರು ವಾರಗಳಿಂದ ಜೇಟ್ಲಿ ಅವರು ಕಚೇರಿಗೆ ಹಾಜರಾಗಿರಲಿಲ್ಲ. ಅವರನ್ನು ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು ಎಂದು ಹೇಳಲಾಗಿದೆ. ಫಲಿತಾಂಶ ಪ್ರಕಟವಾದ ದಿನವಷ್ಟೇ ಅವರು ಅಲ್ಲಿಂದ ಬಿಡುಗಡೆಯಾಗಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ.
|
ಶುಕ್ರವಾರ ಸಭೆ ನಡೆಸಿದ್ದ ಜೇಟ್ಲಿ
ಅನಾರೋಗ್ಯದ ಕುರಿತದ ಊಹಾಪೋಹಗಳ ನಡುವೆಯೇ ಜೇಟ್ಲಿ, ಶುಕ್ರವಾರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಭೆ ನಡೆಸಿದ್ದಾರೆ. ಮೋದಿ ಸರ್ಕಾರದ ಎರಡನೆಯ ಅವಧಿಯ ಮೊದಲ ಬಜೆಟ್ಗೆ ತಯಾರಿ ನಡೆಸುವ ಸಂಬಂಧ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಹೊಸ ಸರ್ಕಾರದ ರೂಪುರೇಷೆಗಳು, ಜಿಎಸ್ಟಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು, ನೇರ ತೆರಿಗೆ ಸಂಹಿತೆ, ನಾನ್ ಬ್ಯಾಂಕಿಂಗ್ ಹಣಕಾಸು ಕಂಪೆನಿಗಳ ಆರ್ಥಿಕ ಚಟುವಟಿಕೆಗಳ ಸ್ಥಿತಿ ಹಾಗೂ ಇತರೆ ಮಹತ್ವದ ಸಂಗತಿಗಳ ಕುರಿತು ಅವರು ಚರ್ಚಿಸಿದ್ದರು.
|
ಆರೋಗ್ಯವಂತರಾಗಿದ್ದಾರೆ
ಸಭೆಯಲ್ಲಿ ಪಾಲ್ಗೊಂಡಿದ್ದ ಜೇಟ್ಲಿ ಅವರು ಯಾವುದೇ ಅನಾರೋಗ್ಯಕ್ಕೆ ಒಳಗಾದಂತೆ ಕಂಡುಬರಲಿಲ್ಲ. ಅವರು ಆರೋಗ್ಯವಂತರಾಗಿ ಇದ್ದರು. 2019-20ನೇ ಸಾಲಿನ ಬಜೆಟ್ ಕಾರ್ಯಗಳನ್ನು ಈಗಲೇ ಆರಂಭಿಸುವಂತೆ ನಮಗೆ ಸೂಚಿಸಿದರು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ.