ಕೋವಿಡ್ ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನ ಸಂಚಾರ ಅಮಾನತು ಮಾಡಿದ ದುಬೈ
ಬೆಂಗಳೂರು, ಸೆಪ್ಟೆಂಬರ್ 18: ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಚಾರವನ್ನು 15 ದಿನಗಳ ಕಾಲ ಅಮಾನತುಗೊಳಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಕೋವಿಡ್ ಸೋಂಕಿತರೊಬ್ಬರು ಪ್ರಯಾಣಿಸಿದ್ದರಿಂದ ದುಬೈ ಈ ಕಠಿಣ ಕ್ರಮ ತೆಗೆದುಕೊಂಡಿದೆ.
ಸೆಪ್ಟೆಂಬರ್ 18ರಿಂದ ಈ ಅಮಾನತು ಪ್ರಕ್ರಿಯೆ ಜಾರಿಯಾಗಲಿದ್ದು, ಅಕ್ಟೋಬರ್ 3ರವರೆಗೂ ಮುಂದುವರಿಯಲಿದೆ. ಏರ್ ಇಂಡಿಯಾ ದುಬೈಗೆ ಕೋವಿಡ್ ಸೋಂಕಿತರನ್ನು ಕರೆದೊಯ್ದಿರುವುದು ಇದು ಎರಡನೆಯ ಬಾರಿ. ಹೀಗಾಗಿ ಸಂಚಾರ ಅಮಾನತಿನ ಜತೆಗೆ ವಿಮಾನದಲ್ಲಿ ದುಬೈಗೆ ಬಂದ ಕೊರೊನಾ ವೈರಸ್ ರೋಗಿಗಳ ಎಲ್ಲ ವೈದ್ಯಕೀಯ ಮತ್ತು ಕ್ವಾರೆಂಟೈನ್ ವೆಚ್ಚಗಳನ್ನು ಸಹ ಏರ್ ಇಂಡಿಯಾ ವಿಮಾನ ಸಂಸ್ಥೆಯೇ ಭರಿಸುವಂತೆ ದಂಡ ವಿಧಿಸಲಾಗಿದೆ.
ವಿಮಾನ ಹಾರಾಟ ನಿರ್ಬಂಧ ಸಡಿಲಿಕೆ: ಏನಿದು ಏರ್ ಟ್ರಾನ್ಸ್ಪೋರ್ಟ್ ಬಬಲ್ಸ್? ಇಲ್ಲಿದೆ ವಿವರ
ಸೆ. 18ರಿಂದ ಅನ್ವಯವಾಗುವಂತೆ ದುಬೈಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೊರೊನಾ ವೈರಸ್ ಪಾಸಿಟಿವ್ ಪರೀಕ್ಷೆಯ ವರದಿಗಳನ್ನು ಹೊಂದಿದ್ದರೂ ಇಬ್ಬರು ಸೋಂಕಿತ ಪ್ರಯಾಣಿಕರನ್ನು ಪ್ರತ್ಯೇಕ ಸಂದರ್ಭಗಳಲ್ಲಿ ಕರೆದೊಯ್ಯಲಾಗಿದೆ. ಮುಂದೆ ಓದಿ.
ಎರಡನೆಯ ಬಾರಿ ಘಟನೆ
ಪ್ರಯಾಣಿಕರೊಬ್ಬರು ಜೈಪುರದ ಲ್ಯಾಬೊರೇಟರಿ ಒಂದರಲ್ಲಿ ಕೊರೊನಾ ವೈರಸ್ ತಪಾಸಣೆಗೆ ಒಳಪಟ್ಟಿದ್ದರು. ಸೆ. 2ರಂದು ಅವರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಹೀಗಿದ್ದರೂ ಅವರನ್ನು ಏರ್ ಇಂಡಿಯಾ ವಿಮಾನ ಐಎಕ್ಸ್ 1135ನಲ್ಲಿ ಸೆ. 4ರಂದು ದುಬೈಗೆ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಹೀಗೆ ಕೋವಿಡ್ ಸೋಂಕು ಇರುವ ವ್ಯಕ್ತಿಗಳನ್ನು ಎರಡನೆಯ ಬಾರಿಗೆ ಏರ್ ಇಂಡಿಯಾ ಕರೆದೊಯ್ದಿರುವುದನ್ನು ದುಬೈ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಪ್ರಯಾಣಿಕರಿಗೆ ಅಪಾಯ
'ಸೆಪ್ಟೆಂಬರ್ 2ರಂದು ನಾವು ನೀಡಿದ ಈ ಹಿಂದಿನ ಪತ್ರದಲ್ಲಿ ತಿಳಿಸಿರುವ ಸಂಗತಿ ನಿಮಗೆ ಗೊತ್ತಿದೆ. ಕೋವಿಡ್-19 ಪಾಸಿಟಿವ್ ವರದಿ ಇರುವ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಿದ್ದೀರಿ. ಆತನಿಂದ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರಿಗೆ ಅಪಾಯ ಉಂಟಾಗಿದ್ದು, ಅವರ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗೂ ಕಾರಣವಾಗಿದೆ' ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಪ್ರಾದೇಶಿಕ ವ್ಯವಸ್ಥಾಪಕರಿಗೆ ಬರೆದ ಪತ್ರದಲ್ಲಿ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.
ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ
ನಿಯಮದ ಸ್ಪಷ್ಟ ಉಲ್ಲಂಘನೆ
ಕೊರೊನಾ ವೈರಸ್ ರೋಗಿಯನ್ನು ವಿಮಾನದಲ್ಲಿ ಹತ್ತಿಸಿಕೊಂಡು ದುಬೈ ವಿಮಾನ ನಿಲ್ದಾಣಕ್ಕೆ ಬರುವುದು ಮತ್ತು ಅಲ್ಲಿಂದ ಹೋಗುವುದು ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಮಾನ ಪ್ರಯಾಣದ ಕುರಿತಾದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅದು ತಿಳಿಸಿದೆ.
Recommended Video
ವಿವರ ನೀಡಿದರೆ ಸಂಚಾರ ಅವಕಾಶ
ಹೀಗಾಗಿ ಸೆ. 18ರ ಮಧ್ಯರಾತ್ರಿಯಿಂದ ಅ. 2ರ ಮಧ್ಯರಾತ್ರಿಯವರೆಗೆ ಜಾರಿಯಾಗುವಂತೆ 15 ದಿನಗಳ ಕಾಲ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಎಲ್ಲಾ ದುಬೈ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ದುಬೈಗೆ ವಿಮಾನ ಸಂಚಾರ ಪುನರಾರಂಭಿಸಲು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ತೆಗೆದುಕೊಳ್ಳುವ ಎಲ್ಲ ಕ್ರಮಗಳ ವಿವರವನ್ನು ನೀಡಬೇಕಿದೆ ಎಂದು ಸೂಚಿಸಿದೆ.