ಶೇಮ್ ! ಲಾಲೂ ಪ್ರಸಾದ್ ಪಾದ ತೊಳೆದ ಪೊಲೀಸ್ ಅಧಿಕಾರಿ
ರಾಂಘಡ್ (ಜಾರ್ಖಂಡ್), ಡಿ 19: ಭದ್ರತಾ ಅಧಿಕಾರಿಗಳನ್ನು ಕೀಳು ಮಟ್ಟದಲ್ಲಿ ಕಾಣುವ RJD ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪರಿಪಾಠ ಮುಂದುವರಿದಿದೆ. ಡಿಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರು ಲಾಲೂ ಪಾದ ತೊಳೆದು ಕೃತಾರ್ಥರಾಗಿದ್ದಾರೆ.
ಮೇವು ಹಗರಣದಲ್ಲಿ ಬಂಧಿತನಾಗಿ ಎಪ್ಪತ್ತು ದಿನದ ನಂತರ ಜೈಲಿನಿಂದ ಹೊರಬಂದ ಲಾಲೂ ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಬಿರ್ಸಾ ಮುಂಡಾ ಜೈಲಿನಿಂದ ಪಾಟ್ನಾಗೆ ರಸ್ತೆ ಮೂಲಕವೇ ತೆರಳುತ್ತಿದ್ದರು. (ಮೇವು ಹಗರಣ: ಲಾಲೂ ಯಾದವ್ ಗೆ ಜಾಮೀನು)
ದಾರಿ ಮಧ್ಯೆ, ಜಾರ್ಖಂಡ್ ರಾಜ್ಯದ ರಾಂಘಡ್ ಜಿಲ್ಲೆಯಲ್ಲಿರುವ ಚಿನ್ನಮಸ್ತ ಹನುಮಾನ್ ದೇವಾಲಯಕ್ಕೆ ಪೂಜೆ ಸಲ್ಲಿಸಲು ಲಾಲೂ ಪ್ರಸಾದ್ ಯಾದವ್ ತೆರಳಿದರು. ದೇವಾಲಯ ಪ್ರವೇಶಕ್ಕೆ ಮುನ್ನ ಲಾಲೂ, ಡಿಎಸ್ಪಿ ಅಶೋಕ್ ಕುಮಾರ್ ಅವರಿಗೆ ತನ್ನ ಪಾದ ತೊಳೆಯುವಂತೆ ಆದೇಶ ನೀಡಿದರು.
ಲಾಲೂ ಆದೇಶ ಶಿರಸಾ ಪಾಲಿಸಿದ ಪೊಲೀಸ್ ಅಧಿಕಾರಿ ನೀರಿನಿಂದ ಲಾಲೂ ಪಾದ ತೊಳೆದು ಅವರ ಪಾದರಕ್ಷೆಯನ್ನು ತಾನೇ ಎತ್ತಿಕೊಂಡು ಪಕ್ಕದಲ್ಲಿ ಇಟ್ಟರು. ಡಿಎಸ್ಪಿ ಲಾಲೂ ಪಾದಪೂಜೆ ಮಾಡಿದ footage ಮಾಧ್ಯಮದಲ್ಲಿ ಬಿತ್ತರವಾಗಿದೆ. (ಲಾಲೂ ಪಾದ ತೊಳೆದ ವಿಡಿಯೋ)
ಲಾಲೂ ಪಾದ ತೊಳೆದಿದ್ದನ್ನು ಸಮರ್ಥಿಸಿಕೊಂಡ ಪೊಲೀಸ್ ಅಧಿಕಾರಿ ರಮೇಶ್ ಕುಮಾರ್, ನಾನು ಮತ್ತು ಲಾಲೂ ಒಂದೇ ಊರಿನವರು. ಅವರು ನನ್ನ ಬಾಲ್ಯದ ಸ್ನೇಹಿತ. ಪಾದ ತೊಳೆಯಲು ಅವರಿಗೆ ನೀರು ಬೇಕಿತ್ತು. ಅದಕ್ಕೆ ನಾನೇ ಅವರ ಕಾಲಿಗೆ ನೀರು ಹಾಕಿದೆ ಎಂದು ಧನ್ಯತಾ ಭಾವದಿಂದ ನುಡಿಯುತ್ತಾರೆ.
ಸಮವಸ್ತ್ರ ಧರಿಸಿ ರಾಜಕಾರಣಿಯೊಬ್ಬರ ಪಾದ ತೊಳೆಯುವ ದುರ್ಗತಿ ಈ ಪೊಲೀಸ್ ಅಧಿಕಾರಿಗೆ ಯಾಕೆ ಬಂತೋ? ಡೆಪ್ಯುಟಿ ಸುಪರಿಡೆಂಟ್ ಆಫ್ ಪೊಲೀಸ್ ಎನ್ನುವ ಉನ್ನತ ಹುದ್ದೆಯಲ್ಲಿರುವ ಇವರ ಈ ನಡುವಳಿಕೆಯಿಂದ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಲಾಲೂ ಚೇಲಾಗಳು ಅಲ್ಲೇ ಇದ್ದರೂ, ಅವರು ಯಾರೂ ಅವರ ಪಾದ ತೊಳೆಯಲು ಮುಂದಾಗಲಿಲ್ಲ. ಹಾಗಿದ್ದಾಗ ಕರ್ತವ್ಯ ನಿರತ ಈ ಪೊಲೀಸ್ ಅಧಿಕಾರಿಗೆ ಅವರ ಪಾದ ತೊಳೆಯುವ ಅದೇನು ದುರ್ಗತಿ ಬಂದಿತ್ತೋ? ಅಥವಾ ಚಂಚಾಗಿರಿಯೋ. ಒಟ್ಟಿನಲ್ಲಿ ನಾಚಿಕೆಗೇಡು!