"ಫಕೀರ ಸಾಯಿಬಾಬಾ ಪೂಜೆ ಮಾಡಿದ್ದಕ್ಕೆ ಬರಗಾಲ ಬಂತು"
ಹರಿದ್ವಾರ, ಏಪ್ರಿಲ್, 11: ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ಯಾಕೆ ತಲೆದೋರಿತು ಎಂಬುದಕ್ಕೆ ದ್ವಾರಕಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸೋಮವಾರ ವಿವಾದಾತ್ಮಕ ಉತ್ತರ ನೀಡಿದ್ದಾರೆ.
"ಪೂಜೆಗೆ ಅರ್ಹರಲ್ಲದ ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದೆ ಮಹಾರಾಷ್ಟ್ರಕ್ಕೆ ಬರ ಪರಿಸ್ಥಿತಿ ಬರಲು ಕಾರಣ, ಬಾಬಾಗೆ ದೇವಾಲಯ ಕಟ್ಟುವುದರಲ್ಲಿ ಅರ್ಥವಿಲ್ಲ" ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗುತ್ತಿದೆ. ಹರಿದ್ವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಂಥ ಹೇಳಿಕೆಯನ್ನು ಸ್ವಾಮೀಜಿ ನೀಡಿದ್ದಾರೆ.[ಧರ್ಮ ಸಂಸತ್ತಿನಲ್ಲಿ ಬಾಬಾ vs ಶಂಕರ ಜಟಾಪಟಿ]
ಶನಿ ಸಿಂಗಣಾಪುರ ದೇಗುಲಕ್ಕೆ ಮಹಿಳೆಯರಿಂದ ಪೂಜೆ ಬಗ್ಗೆಯೂ ಮಾತನಾಡಿದ ಸ್ವಾಮೀಜಿ, ಅತ್ಯಾಚಾರ ಹೆಚ್ಚಲು, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಲು ಇಂಥ ಘಟನಾವಳಿಗಳು ಕಾರಣವಾಗುತ್ತವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.[ಶನೈಶ್ವರನಿಗೆ ಮಹಿಳೆಯಿಂದ ಪೂಜೆ: ಪರ-ವಿರೋಧ ಚರ್ಚೆ ಆರಂಭ]
ಫಕೀರನಿಗೆ ಫೂಜೆ ಬೇಕೆ?
"ಸಾಯಿ ಬಾಬಾ ಓರ್ವ ಫಕೀರ. ಇಂಥವರನ್ನು ಪೂಜೆ ಮಾಡಿ ಅವರ ಹೆಸರಲ್ಲಿ ದೇವಾಲಯ ನಿರ್ಮಾಣ ಮಾಡಿದರೆ ಒಳಿತಾಗುತ್ತದೆಯೇ?" ಎಂದು ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.
ಸಾಯಿಬಾಬಾ ಹಿಂದೂ ದೇವರೇ ಅಲ್ಲ
ಸಾಯಿಬಾಬಾ ಹಿಂದೂ ದೇವರೇ ಅಲ್ಲ. ಅವರೊಬ್ಬ ಮುಸ್ಲಿಂ ಭಿಕ್ಷುಕ. ಇಂಥವರನ್ನು ಪೂಜೆ ಮಾಡುವುದರ ಅರ್ಥವಾದರೂ ಏನು? ದೇಶಕ್ಕೆ ಬರ ಬರದೇ ಇನ್ನೇನಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ವಿದೇಶಿ ಸಂಸ್ಥೆಗಳಿಗೆ ದುಡ್ಡು
ವಿದೇಶದ ಸಂಸ್ಥೆಗಳು ಸಾಯಿಬಾಬಾ ಹೆಸರನ್ನು ದುರುಪಯೋಗ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿವೆ. ಪವಾಡದ ಹೆಸರಿನಲ್ಲಿ ನಮ್ಮ ದೇಶದ ಜನರಿಗೆ ಮಂಕುಬೂದಿ ಎರಚುತ್ತಿವೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಅತ್ಯಾಚಾರ ಹೆಚ್ಚುತ್ತದೆ
ಶನಿ ಸಿಂಗಣಾಪುರ ದೇಗುಲಕ್ಕೆ ಮಹಿಳೆಯರಿಂದ ಪೂಜೆ ಮಾಡಿಸಿದ್ದು ಅಧೋಗತಿಯ ಸೂಚನೆ. ಅತ್ಯಾಚಾರ ಹೆಚ್ಚಲು, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಲು ಇಂಥ ಘಟನಾವಳಿಗಳೇ ಕಾರಣವಾಗುತ್ತವೆ ಎಂದು ಹೇಳಿದ್ದಾರೆ.
ಇದೇ ಮೊದಲಲ್ಲ
ಸಾಯಿಬಾಬಾ ದೇವರಲ್ಲ ಎಂದು ದ್ವಾರಕಾಪೀಠದ ಶಂಕರಾಚಾರ್ಯರು ಈ ಮೊದಲು ಹೇಳಿಕೆ ನೀಡಿದ್ದರು. ಇದಕ್ಕೆ ಅನೇಕ ಹಿಂದೂ ಧಾರ್ಮಿಕ ಮುಖಂಡರು ದನಿಗೂಡಿಸಿದ್ದು ಸಹಜವಾಗೇ ಸಾಯಿಬಾಬಾ ಭಕ್ತರನ್ನು ಕೆರಳಿಸಿದ್ದು ಸುದ್ದಿಯಾಗಿತ್ತು.
ವಿವಾದಕ್ಕೆ ನಾಂದಿ
ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಸ್ವಾಮೀಜಿ ಹೇಳಿಕೆಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಲು ಆರಂಭಿಸಿದ್ದು ದೊಡ್ಡ ವಿವಾದ ಉಂಟಾಗುವುದರಲ್ಲಿ ಯಾವ ಅನುಮಾನವಿಲ್ಲ.