ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ನಿಂದ ಭಾರತಕ್ಕೆ
ಬೆಂಗಳೂರು, ಫೆಬ್ರವರಿ 23: ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಪಾತಕ ಕೃತ್ಯಗಳನ್ನು ಎಸಗಿರುವ ಆರೋಪ ಹೊತ್ತುಕೊಂಡು ನಾಪತ್ತೆಯಾಗಿದ್ದ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್ ದೇಶದಲ್ಲಿ ಬಂಧಿಸಲಾಗಿದೆ. ಸೆನೆಗಲ್ ನಿಂದ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ. ಕರ್ನಾಟಕ ಪೊಲೀಸರು ಸೆನೆಗಲ್ ಗೆ ತೆರಳಿ, ಆತನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ರವಿ ಪೂಜಾರಿ ಹಸ್ತಾಂತರಕ್ಕೆ ಇದ್ದ ಕಾನೂನಿನ ತೊಡಕು ನಿವಾರಣೆಯಾಗಿರುವ ಸುದ್ದಿ ಬಂದಿದೆ. ಈ ಹಿಂದೆ ಪೂಜಾರಿ ಬಂಧನವಾದರೂ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಾಗಿರಲಿಲ್ಲ. ಹಸ್ತಾಂತರ ಕುರಿತಂತೆ ಸೆನೆಗಲ್ ಜೊತೆ ಭಾರತ ಯಾವುದೇ ಒಪ್ಪಂದ ಹೊಂದಿಲ್ಲದ ಕಾರಣ 2019 ರ ಜನವರಿ 19ರಂದು ರವಿ ಪೂಜಾರಿಯನ್ನು ಬಂಧಿಸಿದರೂ ಕಾನೂನು ತೊಡಕಿನಿಂದ ಹಸ್ತಾಂತರ ಸಾಧ್ಯವಾಗಿರಲಿಲ್ಲ. ನಂತರ ಜಾಮೀನು ಪಡೆದು ಮತ್ತೆ ಭೂಗತನಾಗಿದ್ದ ಪೂಜಾರಿಯನ್ನು ಮತ್ತೆ ಬಂಧಿಸಲಾಗಿದೆ. ಈಗ ಕಾನೂನು ತೊಡಕು ನಿವಾರಣೆಯಾಗಿದ್ದು, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡ ಸೆನೆಗಲ್ ದೇಶಕ್ಕೆ ತೆರಳಲಿದೆ.
ಭೂಗತ ಪಾತಕಿ ರವಿ ಪೂಜಾರಿ ಡಾನ್ ಆಗಿ ಬೆಳೆದದ್ದು ಹೇಗೆ?
ಕರ್ನಾಟಕದಲ್ಲಿ ರವಿ ಪೂಜಾರಿ ವಿರುದ್ಧ 49 ಕೇಸುಗಳು ದಾಖಲಾಗಿವೆ. ಇಲ್ಲಿ ತನಕ 13 ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿವೆ. ಮಂಗಳೂರಿನ ಪೊಲೀಸರು, RAW ಸಿಬ್ಬಂದಿ ಹಾಗೂ ಸೆನೆಗಲ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪೂಜಾರಿಯನ್ನು ಬಂಧಿಸಲಾಗಿದೆ.
ಪೂಜಾರಿ ಹಸ್ತಾಂತರವಾದ ಬಳಿಕ ಮೊದಲು ಮುಂಬೈಗೆ ಕರೆದೊಯ್ಯಲಾಗುತ್ತದೆ. ನಂತರ ಮಂಗಳೂರು ಅಥವಾ ನವದೆಹಲಿಗೆ ಕರೆ ತಂದು ವಿಚಾರಣೆ ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ನಿಂದ ಪರಾರಿ?
ಬುರ್ಕಿನಾ ಫಾಸೋ ನಾಗರಿಕ ಎಂದು ಹೇಳಿಕೊಂಡಿರುವ ಪೂಜಾರಿ ತನ್ನ ಹೆಸರನ್ನು ಅಂಥೋಣಿ ಫರ್ನಾಂಡೀಸ್ ಎಂದು ಬದಲಾಯಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.