ರಾಷ್ಟ್ರಪತಿ ಹುದ್ದೆಗೆ ಹೊಸ ಹೆಸರು; ಮೋದಿ ಹೊಸ ತಂತ್ರಗಾರಿಕೆ?
ಇತ್ತೀಚಿನವರೆಗೂ ಬಿಜೆಪಿ ಕಡೆಯಿಂದ ಲಾಲ್ ಕೃಷ್ಣ ಅಡ್ವಾಣಿಯವರನ್ನು ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗುತ್ತದೆ ಎಂದೆಣಿಸಲಾಗಿತ್ತು. ಆದರೆ, ಈಗ ಅದೂ ಪಕ್ಕಕ್ಕೆ ಸರಿದಿದೆ.
ನವದೆಹಲಿ, ಏಪ್ರಿಲ್ 2: ರಾಷ್ಟ್ರಪತಿ ಹುದ್ದೆಯ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಮಟ್ಟದ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಇತ್ತೀಚಿನವರೆಗೂ ಬಿಜೆಪಿ ಕಡೆಯಿಂದ ಲಾಲ್ ಕೃಷ್ಣ ಅಡ್ವಾಣಿಯವರನ್ನು ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗುತ್ತದೆ ಎಂದೆಣಿಸಲಾಗಿತ್ತು. ಆದರೆ, ಈಗ ಅದೂ ಪಕ್ಕಕ್ಕೆ ಸರಿದಿದೆ.
ಅಡ್ವಾಣಿ ಹೆಸರು ಯಾವಾಗ ಪಕ್ಕಕ್ಕೆ ಸರಿಯಿತೋ ಆಗಿನಿಂದ ಬಿಜೆಪಿ ವಲಯದಲ್ಲಿ ಕೆಲವಾರು ಹೆಸರುಗಳು ಚಾಲ್ತಿಯಲ್ಲಿವೆ. ಆದರೆ, ತೀರಾ ಇತ್ತೀಚಿಗೆ ಬಿಜೆಪಿಯಲ್ಲಿ ನಡೆದ ವಿದ್ಯಮಾನದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ನಾಯಕ ಹಾಗೂ ಜಾರ್ಖಂಡ್ ರಾಜ್ಯದ ಹಾಲಿ ರಾಜ್ಯಪಾಲ ದ್ರೌಪದಿ ಮರ್ಮು ಅವರನ್ನು ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಚಿಂತನೆ ನಡೆಸಿದ್ದಾರೆ.
ಇದರ ಹಿಂದಿದೆ ಬಿಜೆಪಿ ಲೆಕ್ಕಾಚಾರ
ಒನ್ ಇಂಡಿಯಾಕ್ಕೆ ಬಿಜೆಪಿಯ ಆಂತರಿಕ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಮರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸುವ ಚಿಂತನೆಯ ಹಿಂದೆ ಕೆಲವಾರು ರಾಜಕೀಯ ಲೆಕ್ಕಾಚಾರಗಳಿವೆ.
ಶಾಸಕಿಯಾಗಿದ್ದಾಗಲೂ ಹೆಸರು
1997ರಲ್ಲಿ ಕೌನ್ಸಿಲರ್ ಆಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಮರ್ಮು, ಆನಂತರ ಒಡಿಶಾ ವಿಧಾನಸಭೆಗೂ ಪ್ರವೇಶ ಪಡೆದು, ಅದೊಮ್ಮೆ ವರ್ಷದ ಶ್ರೇಷ್ಠ ಶಾಸಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಶುದ್ಧಹಸ್ತರೆಂಬ ಹೆಗ್ಗಳಿಕೆ
ಮರ್ಮು, ಅವರಿಗೆ 59 ವರ್ಷ ವಯಸ್ಸು. ಬಡತನದಲ್ಲಿ ಬೆಳೆದರೂ, ಸ್ವಪ್ರಯತ್ನದಿಂದ ಮೇಲೇರಿರುವ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಅಲ್ಲದೆ, ಆಡಳಿತಾತ್ಮಕವಾಗಿ ಶುದ್ಧಹಸ್ತರೆಂಬ ಪ್ರತೀತಿಯೂ ಇದೆ.
ಬುಡಕಟ್ಟು ಜನಾಂಗದ ಮೇಲೆ ಪ್ರಭಾವ
ಇದೆಲ್ಲಕ್ಕಿಂತ ಹೆಚ್ಚಾಗಿ ಅವರು ಒಡಿಶಾದ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಅವರನ್ನು ರಾಷ್ಟ್ರಪತಿ ಹುದ್ದೆಗೆ ತಂದು ಕೂರಿಸುವುದರಿಂದ ಒಡಿಶಾದಲ್ಲಿ ಬಿಜೆಪಿಗೆ ಹೆಚ್ಚಿನ ಮೈಲೇಜ್ ಸಿಗುತ್ತದೆ.
ದೊಡ್ಡ ಹೆಗ್ಗಳಿಕೆ ಸಿಗಲಿದೆ ಬಿಜೆಪಿಗೆ
ಇದಲ್ಲದೆ, ರಾಷ್ಟ್ರಪತಿ ಹುದ್ದೆಗೆ ಹಿಂದುಳಿದ, ಬುಡಕಟ್ಟು ಜನಾಂಗದ ಮಹಿಳೆಯೊಬ್ಬರಿಗೆ ಅವಕಾಶ ಮಾಡಿಕೊಟ್ಟ ಹೆಗ್ಗಳಿಕೆಯೂ ಬಿಜೆಪಿ ಪಾಲಾಗುತ್ತದೆ.