ಯುಪಿಎ ಅವಧಿಯಲ್ಲಿ ಅನೇಕ ಸರ್ಜಿಕಲ್ ಸ್ಟ್ರೈಕ್ಸ್ ನಡೆದಿದ್ದವು: ಮನಮೋಹನ್ ಸಿಂಗ್
ನವದೆಹಲಿ, ಮೇ 2: ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಎರಡು ಅವಧಿಗಳಲ್ಲಿ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ದಾಳಿಗಳು ನಡೆದಿದ್ದವು ಎಂದು ಕಾಂಗ್ರೆಸ್ನ ಕೆಲವು ನಾಯಕರು ಹೇಳಿಕೊಂಡಿದ್ದರು.
ಪಠಾಣ್ಕೋಟ್ ದಾಳಿಯ ಬಳಿಕ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತದ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪುಲ್ವಾಮಾ ದಾಳಿಯ ಬಳಿಕವೂ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ನಾಶಮಾಡಿತ್ತು. ಇದರಿಂದ ಎನ್ಡಿಎ ಸರ್ಕಾರದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಆಡಳಿತಾರೂಢ ಬಿಜೆಪಿ ಕೂಡ ಇದು ತನ್ನ ಸಾಧನೆ ಎಂದು ಬಿಂಬಿಸಿಕೊಂಡಿದೆ.
ಪಾಕ್ ನ F 16 ಯುದ್ಧ ವಿಮಾನ ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ಬಿಡುಗಡೆ
ಈ ನಡುವೆ ಯುಪಿಎ ಸರ್ಕಾರದ ಎರಡೂ ಅವಧಿಗಳಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೌನ ಮುರಿದಿದ್ದಾರೆ.
ಸೇನಾ ಕಾರ್ಯಾಚರಣೆಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಡೆ ನಾಚಿಕೆಗೇಡು ಮತ್ತು ಒಪ್ಪುವಂಥದ್ದಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಅನೇಕ ಬಾರಿ ಸರ್ಜಿಕಲ್ ಸ್ಟ್ರೈಕ್ಗಳು ನಡೆದಿದ್ದವು ಎಂದು ಅವರು 'ಹಿಂದೂಸ್ತಾನ್ ಟೈಮ್ಸ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆವು
ಪ್ರತಿ ಬೆದರಿಕೆಗೂ ಸೂಕ್ತ ಕಾರ್ಯಾಚರಣೆ ನಡೆಸಲು ನಮ್ಮ ಸಶಸ್ತ್ರ ಸೇನಾಪಡೆಗಳಿಗೆ ಯಾವಾಗಲೂ ಮುಕ್ತ ಸ್ವಾತಂತ್ರ್ಯ ನೀಡಲಾಗುತ್ತಿತ್ತು. ನಮ್ಮ ಅವಧಿಯಲ್ಲಿಯೂ ಅನೇಕ ಬಾರಿ ಸರ್ಜಿಕಲ್ ದಾಳಿಗಳು ನಡೆದಿದ್ದವು. ನಮ್ಮ ಪಾಲಿಗೆ ಸೇನಾ ಕಾರ್ಯಾಚರಣೆಗಳು ಕಾರ್ಯತಂತ್ರ ನಿರೋಧಕ ಮತ್ತು ಭಾರತ ವಿರೋಧಿ ಪಡೆಗಳಿಗೆ ಕಠಿಣ ಪ್ರತಿಕ್ರಿಯೆ ನೀಡುವುದಾಗಿತ್ತೇ ವಿನಾ, ಮತ ಗಳಿಕೆಯ ವಿಚಾರವಾಗಿರಲಿಲ್ಲ. ಕಳೆದ 70 ವರ್ಷಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರವೊಂದು ನಮ್ಮ ಸೇನಾ ಪಡೆಗಳ ಸಾಧನೆಯ ಹಿಂದೆ ಅಡಗಬೇಕಾಗಿರಲಿಲ್ಲ. ನಮ್ಮ ಪಡೆಗಳನ್ನು ರಾಜಕೀಯಗೊಳಿಸುವುದು ಅವಮಾನಕರ ಮತ್ತು ಒಪ್ಪಲಾಗದು.
ಸೇನೆಯ ನೈತಿಕತೆ ಕುಗ್ಗಿಸಿದ ಮೋದಿ
ಪಠಾಣ್ಕೋಟ್ ವಾಯುನೆಲೆಯಲ್ಲಿ ನಡೆದ ದಾಳಿಯ ತನಿಖೆಗೆ ಐಎಸ್ಐಅನ್ನು ಆಹ್ವಾನಿಸಿದ್ದು ಮೋದಿ ಸರ್ಕಾರ ಎಸಗಿದ ಅತ್ಯಂತ ದೊಡ್ಡ ಕಾರ್ಯತಂತ್ರ ಅಪರಾಧ. ಅವರು ನಮ್ಮ ಸೇನಾಪಡೆಗಳ ನೈತಿಕತೆಯನ್ನು ಕುಗ್ಗಿಸಿದರು. ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅವಕಾಶವಾದಿ ಬಿಜೆಪಿ-ಪಿಡಿಪಿ ಸರ್ಕಾರದಿಂದಾಗಿ ಆಂತರಿಕ ಭದ್ರತಾ ಸನ್ನಿವೇಶ ವೇಗವಾಗಿ ಕುಸಿತ ಕಂಡಿದೆ.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು: ಗೆಹ್ಲೋಟ್
ಮುಂಬೈ ದಾಳಿಗೆ ಸರಿಯಾದ ಪ್ರತಿಕ್ರಿಯೆ
26/11ರ ಮುಂಬೈ ದಾಳಿಯ ಬಳಿಕ ನಾವು ಕಠಿಣವಾಗಿ ಪಾಕಿಸ್ತಾನಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂಬ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ವಿಭಿನ್ನ ಭೂ-ರಾಜಕೀಯ ಸನ್ನಿವೇಶಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ಇರಬೇಕಾಗುತ್ತದೆ. ಉಗ್ರರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಜಾಗತಿಕ ಸಮುದಾಯವನ್ನು ಒಪ್ಪಿಸುವುದರ ಜತೆಗೆ ಪಾಕಿಸ್ತಾನವು ಒಂದು ಭಯೋತ್ಪಾದನಾ ಕೇಂದ್ರ ಎಂದು ರಾಜತಾಂತ್ರಿಕವಾಗಿ ಬಿಂಬಿಸಲು ಮತ್ತು ಅದನ್ನು ಪ್ರತ್ಯೇಕಗೊಳಿಸುವುದು ನಮ್ಮ ಪ್ರಯತ್ನವಾಗಿತ್ತು. ಅದರಲ್ಲಿ ನಾವು ಯಶಸ್ವಿಯೂ ಆಗಿದ್ದೆವು. ಮುಂಬೈ ದಾಳಿ ನಡೆದು 14 ದಿನಗಳ ಒಳಗಾಗಿ ಚೀನಾವು ಹಫೀಜ್ ಸಯೀದ್ನನ್ನು ಜಾಗತಿಕ ಉಗ್ರ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದೆವು. ಡೇವಿಡ್ ಹೆಡ್ಲಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ 35 ವರ್ಷ ಶಿಕ್ಷೆ ವಿಧಿಸಲಾಯಿತು.
ಉಗ್ರರನ್ನು ಬಂಧಿಸಿದ್ದೆವು
ಲಷ್ಕರ್ ಎ ತಯ್ಬಾ ಸಂಘಟನೆ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಯೋತ್ಪಾದನಾ ವಿರೋಧಿ ಸಹಕಾರ ನಡೆಸಿದ್ದೆವು. ಸೌದಿ ಅರೇಬಿಯಾ, ಚೀನಾದಂತಹ ದೇಶಗಳೂ ಈ ಮಹಾನ್ ಒಪ್ಪಂದಕ್ಕೆ ಸಹಕಾರ ನೀಡಿದ್ದವು. ಅನೇಕ ಉಗ್ರರನ್ನು ಬಂಧಿಸಿ ಭಾರತಕ್ಕೆ ಗಡಿಪಾರು ಮಾಡಲಾಯಿತು. ಶೇಕ್ ಅಬ್ದುಲ್ ಖ್ವಾಜಾನನ್ನು ಕೊಲಂಬೋದಲ್ಲಿ ಬಂಧಿಸಿ ಹೈದರಾಬಾದ್ಗೆ ಕರೆತರಲಾಯಿತು. ಜೈಬುದ್ದೀನ್ ಅನ್ಸಾರಿಯನ್ನು ಸೌದಿಯಿಂದ ಗಡಿಪಾರು ಮಾಡಲಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಏರ್ ಸ್ಟ್ರೈಕ್ ಸುಳ್ಳು ಎಂದ ಸಂಸ್ಥೆಗೆ ವಾಯುಸೇನೆಯಿಂದ ಮಂಗಳಾರತಿ
ಪರಮಾಣು ಸಾಮರ್ಥ್ಯ ವೃದ್ಧಿಗೆ ನೆಹರೂ ತಳಹದಿ
ನಮ್ಮ ಅಣ್ವಸ್ತ್ರ ಸಾಮರ್ಥ್ಯವು ನಮ್ಮ ಶಕ್ತಿ ಮತ್ತು ಭದ್ರತೆಯ ಸಂಪತ್ತು. ಪಂಡಿತ್ ನೆಹರೂ ಅವರು ನಮ್ಮ ಅಣ್ವಸ್ತ್ರ ಸಾಮರ್ಥ್ಯಕ್ಕೆ ಬುನಾದಿ ಹಾಕಿದರು. 1974ರಲ್ಲಿ ಇಂದಿರಾ ಗಾಂಧಿ ನಮ್ಮ ಮೊದಲ ಪರಮಾಣು ಪರೀಕ್ಷೆಯನ್ನು ಪೋಖ್ರಾನ್ನಲ್ಲಿ ನಡೆಸಿದರು. ಅಲ್ಲಿಂದ ಪ್ರತಿ ಕಾಂಗ್ರೆಸ್ ಸರ್ಕಾರವೂ ನಮ್ಮ ನಾಗತಿಕ ಮತ್ತು ಸೇನಾ ಪರಮಾಣು ಯೋಜನೆಯನ್ನು ಬಲಪಡಿಸುತ್ತಾ ಮತ್ತು ಆಧುನೀಕರಣಗೊಳಿಸುತ್ತಲೇ ಬಂದಿವೆ. ಇದರ ಫಲಿತಾಂಶವಾಗಿ 13 ದಿನಗಳ ವಾಜಪೇಯಿ ಸರ್ಕಾರ ಅಣ್ವಸ್ತ್ರ ಪರೀಕ್ಷೆ ನಡೆಸಲು ಸಾಧ್ಯವಾಯಿತು.
ರಾಷ್ಟ್ರೀಯ ಭದ್ರತೆಯಲ್ಲಿ ಮೋದಿ ವಿಫಲ
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಒಂದರಲ್ಲಿಯೇ ಭಯೋತ್ಪಾದನಾ ದಾಳಿಗಳು ಶೇ 176ರಷ್ಟು ಹೆಚ್ಚಾಗಿದೆ. ಪಾಕಿಸ್ತಾನದ ಕದನವಿರಾಮ ಉಲ್ಲಂಘನೆ ಶೇ 1,000ರಷ್ಟು ಅಧಿಕವಾಗಿದೆ. ನಮ್ಮ ಭದ್ರತಾ ನೆಲೆಗಳ ಮೇಲೆ 17 ಪ್ರಮುಖ ದಾಳಿಗಳಾಗಿವೆ. ಜಿಡಿಪಿಯ ರಕ್ಷಣಾ ವೆಚ್ಚವು ಕಳೆದ 57 ವರ್ಷಗಳಲ್ಲಿಯೇ ಅತ್ಯಂತ ಕಡಿಮೆಯಾಗಿದೆ. ಇದು ಈ ಸರ್ಕಾರದ ಸಾಧನೆ ಮತ್ತು ಆದ್ಯತೆಗಳನ್ನು ಹೇಳುತ್ತದೆಯೇ?