ಚೀನಾದಲ್ಲಿ ಅಜಿತ್ ದೋವಲ್, ಧೋಕ್ಲಾಂ ಸಮಸ್ಯೆಯತ್ತ ಎಲ್ಲರ ಚಿತ್ತ
ಬೀಜಿಂಗ್, ಜುಲೈ 27: ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಚೀನಾದಲ್ಲಿದ್ದಾರೆ. ಬ್ರಿಕ್ಸ್ ದೇಶಗಳ ಎನ್ಎಸ್ಎ ಮಟ್ಟದ ಮಾತುಕತೆಗಾಗಿ ಚೀನಾಕ್ಕೆ ದೋವಲ್ ತೆರಳಿದ್ದು ಭೇಟಿ ವೇಳೆ ಚೀನಾದ ಭದ್ರತಾ ಸಲಹೆಗಾರರ ಜತೆ ಸಿಕ್ಕಿಂ ಗಡಿ ವಿವಾದದ ಬಗ್ಗೆ ಚರ್ಚಿಸಲಿದ್ದಾರೆ.
ಧೋಕ್ಲಾಂ ಸಮಸ್ಯೆಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ದೋವಲ್ ಪ್ರಸ್ತಾಪಿಸುವ ಸಾಧ್ಯತೆ ಇದೆ. "ಮೊದಲಿಗೆ ದೋವಲ್ ಎರಡೂ ದೇಶಗಳ ಮಧ್ಯೆ ಮಾತುಕತೆಗೆ ಹಾದಿ ಸುಗಮಗೊಳಿಸಲಿದ್ದಾರೆ. ನಂತರ ಪ್ರಧಾನ ಮಂತ್ರಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಇಚ್ಛಿಸಿದ್ದಾರೆ ಎಂಬುದನ್ನು ದೋವಲ್ ಚೀನಾದ ಗಮನಕ್ಕೆ ತರಲಿದ್ದಾರೆ," ಎಂದು ಮಾಜಿ ರಾ ಅಧಿಕಾರಿ ಅಮರ್ ಭೂಷಣ್ 'ಒನ್ಇಂಡಿಯಾ'ಕ್ಕೆ ತಿಳಿಸಿದ್ದಾರೆ.
ಇದಾದ ನಂತರ ರಾಜಕೀಯ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಭವಿಷ್ಯದ ಸಂಬಂಧಗಳ ಬಗ್ಗೆ ಚರ್ಚಿಸಲಿದ್ದಾರೆ. ದೋಕ್ಲಾಂನಂಥ ಸಣ್ಣ ವಿಷಯಕ್ಕೆ ಎರಡೂ ದೇಶಗಳು ಕಿತ್ತಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದನ್ನು ಭಾರತ ಮತ್ತು ಚೀನಾ ಎರಡೂ ದೇಶಗಳು ಅರಿತುಕೊಂಡಿವೆ.
ಈಗಾಗಲೇ ಒಪ್ಪಂದಕ್ಕೂ ಮೊದಲು ಭಾರತ ದೋಕ್ಲಾಂ ನಿಂದ ಸೇನಾಪಡೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಚೀನಾ ಷರತ್ತು ಮುಂದಿಟ್ಟಿದೆ. ಆದರೆ ಇದಕ್ಕೆ ದೋವಲ್ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ ಇದೆ. ಚೀನಾದ ಸೈನಿಕರ ಜಾಗದಲ್ಲಿ ಭೂತಾನ್ ಸೈನಿಕರನ್ನು ನೇಮಿಸಿದರೆ ಮಾತ್ರ ಭಾರತ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಇನ್ನು ಚಳಿಗಾಲ ಬರುತ್ತಿದ್ದಂತೆ ಸಮಸ್ಯೆ ತನ್ನಿಂದ ತಾನಾಗೇ ಪರಿಹಾರವಾಗಲಿದೆ ಎನ್ನುತ್ತಾರೆ ಅಮರ್ ಭೂಷಣ್. ಚೀನಾದ ಸೈನಿಕರಿಗೆ ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಇರಲು ಸಾಧ್ಯವಿಲ್ಲ ಎಂಬುದು ಇದಕ್ಕೆ ಅವರು ನೀಡುವ ಕಾರಣ.