ಶಂಕರ್ ನಿರ್ದೇಶನದ 'ಮಾಲ್ಗುಡಿ ಡೇಸ್' ಶೀಘ್ರದಲ್ಲೇ ಮತ್ತೆ ಕಿರುತೆರೆಗೆ
90ರ ದಶಕವು ಭಾರತೀಯ ಟೆಲಿವಿಷನ್ ರಂಗದಲ್ಲಿ ಭಾರೀ ಕ್ರಾಂತಿಯಾದ ವರ್ಷ; ಆಗಿನ ರಾಮಾಯಣ, ಮಹಾಭಾರತ ಹಾಗೂ ಇನ್ನಿತರ ಪ್ರಮುಖ ಧಾರಾವಾಹಿಗಳ ಜನಪ್ರಿಯತೆ ದೇಶಾದ್ಯಂತ ಟಿವಿ ಮಾರುಕಟ್ಟೆಯನ್ನೂ ಹೆಚ್ಚಿಸಿದ್ದು ಸುಳ್ಳಲ್ಲ.
90ರ ದಶಕದಲ್ಲಿ ಮನೆ ಮಾತಾಗಿದ್ದ ತನ್ನ ಐದು ಪ್ರಮುಖ ಧಾರಾವಾಹಿಗಳ ಮರುಪ್ರಸಾರಕ್ಕೆ ದೂರದರ್ಶನ ಸಿದ್ಧವಾಗಿದೆ. ಈ ಕುರಿತಂತೆ ಆದೇಶ ಹೊರಬಿದ್ದಿದ್ದು, ಜನಪ್ರಿಯ ಧಾರಾವಾಹಿಗಳಾದ ಮಾಲ್ಗುಡಿ ಡೇಸ್, ಹಮ್ ಲೋಗ್, ಬುನಿಯಾದ್, ಸರ್ಕಸ್, ವಾಗ್ಲೇ ಕಿ ದುನಿಯಾ ಧಾರಾವಾಹಿಗಳು ಪುನಃ ಬಿತ್ತರವಾಗಲಿವೆ.
ಇವುಗಳಲ್ಲಿ ಮಾಲ್ಗುಡಿ ಡೇಸ್ ಧಾರಾವಾಹಿಯು ಜನಮನ್ನಣೆಯ ಜತೆಗೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಧಾರಾವಾಹಿಯೂ ಆಗಿದೆ. ಕನ್ನಡ ಚಿತ್ರರಂಗದ ಎಂದೂ ಮರೆಯಲಾಗದ ನಟ, ನಿರ್ದೇಶಕ ಶಂಕರ್ ನಾಗ್ ಈ ಧಾರವಾಹಿಯನ್ನು ನಿರ್ದೇಶಿಸಿದ್ದರು.
ಈಗಿನ ನೂರೆಂಟು ಸುದ್ದಿವಾಹಿನಿಗಳು, ನೂರೆಂಟು ಮನರಂಜನೆ ವಾಹಿನಿಗಳು, ದೈನಂದಿನ ಧಾರಾವಾಹಿಗಳ ಭರಾಟೆ, ತಲೆಬುಡವಿಲ್ಲದ ಉದ್ದೇಶ ರಹಿತ ಕಾರ್ಯಕ್ರಮಗಳ ಅಬ್ಬರದಲ್ಲಿ ಅಪ್ಪಟ ಮನರಂಜನೆ ಎಂಬ ಪದ ಅರ್ಥ ಕಳೆದುಕೊಂಡಿದೆ ಎಂದಿಸದಿರದು.
ಇಂದಿನ ತಲೆ ಚಿಟ್ಟು ಹಿಡಿಸುವ ಟಿವಿ ಕಾರ್ಯಕ್ರಮಗಳನ್ನು ನೋಡಿದರೆ 90 ದಶಕದಲ್ಲಿ ಇಡೀ ದೇಶಕ್ಕೊಂದೇ ವಾಹಿನಿಯಾಗಿದ್ದ ದೂರದರ್ಶನ ಬಿತ್ತರಿಸುತ್ತಿದ್ದ ಕಾರ್ಯಕ್ರಮಗಳು ಅದೆಷ್ಟು ಮನರಂಜನೀಯವಾಗಿದ್ದವು ಎನ್ನಿಸದಿರದು. ಆಗಿನ ಕಾರ್ಯಕ್ರಮಗಳನ್ನು ನೋಡಿದವರು ನೀವಾಗಿದ್ದರೆ ಖಂಡಿತವಾಗಿಯೂ ಈ ಮಾತನ್ನು ಅಲ್ಲಗಳೆಯಲಾರಿರಿ.
ಮಾಲ್ಗುಡಿ ಡೇಸ್ ಸೊಗಸು
ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡದ ಜನಪ್ರಿಯ ನಿರ್ದೇಶಕ, ನಟ ಶಂಕರ್ ನಾಗ್ ನಿರ್ದೇಶಿಸಿದ್ದರು. 36 ಕಂತುಗಳಲ್ಲಿ ಪ್ರಸಾರವಾದ ಧಾರಾವಾಹಿಯಿದು. ಜನಪ್ರಿಯ ಲೇಖಕ ಆರ್.ಕೆ. ನಾರಾಯಣ್ ಅವರ ಪುಟ್ಟ ಕಥೆಗಳನ್ನಾಧರಿಸಿ ತಗೆಯಲಾಗಿದ್ದ ಈ ಧಾರಾವಾಹಿ ಸಾಕಷ್ಟು ಖ್ಯಾತಿ ಪಡೆಯಿತು. 'ಸ್ವಾಮಿ ಆ್ಯಂಡ್ ಹಿಸ್ ಫ್ರೆಂಡ್ಸ್' ಅದರ ಅತ್ಯಂತ ಜನಪ್ರಿಯ ಕಥೆ. ಇದರಲ್ಲಿ ವಿಷ್ಣುವರ್ಧನ್, ಅನಂತನಾಗ್, ದಿವಂಗತ ಹಾಸ್ಯ ನಟ ಕಾಶಿ, ಮಾಸ್ಟರ್ ಮಂಜುನಾಥ್ ಸೇರಿದಂತೆ ಕನ್ನಡದ ಹಲವಾರು ನಟರು, ತಂತ್ರಜ್ಞರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದು, ಹಿಂದಿ, ಮರಾಠಿ ಹಾಗೂ ಕನ್ನಡ ಕಲಾವಿದರ ಸಂಗಮ.
ಹಮ್ ಲೋಗ್ ಜಾದೂ
80 ದಶಕದ ಭಾರತೀಯ ಮಧ್ಯಮ ವರ್ಗದ ತುಡಿತ, ಆಶೋತ್ತರಗಳು, ಅವುಗಳನ್ನು ಈಡೇರಿಸುವಲ್ಲಿ ಆ ವರ್ಗದ ಜನರು ಪಡುತ್ತಿದ್ದ ಪಡಿಪಾಟಲುಗಳನ್ನೇ ಕಥಾವಸ್ತುವಾಗಿರಿಸಿಕೊಂಡಿದ್ದ ಹಮ್ ಲೋಗ್ ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 17 ತಿಂಗಳುಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು.
ಸಿಪ್ಪಿ ನಿರ್ದೇಶನದ ಸ್ಪರ್ಶ
ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ರಮೇಶ್ ಸಿಪ್ಪಿ, ಜ್ಯೋತಿ ಎಂಬುವರೊಂದಿಗೆ ಸೇರಿ ನಿರ್ದೇಶಿಸಿದ್ದ ಧಾರಾವಾಹಿ 'ಬುನಿಯಾದ್'. ಹಿಂದಿಯ ಖ್ಯಾತ ಪೋಷಕ ನಟ ಅಲೋಕ್ ನಾಥ್ ಮುಂತಾದವರು ನಟಿಸಿದ್ದರು. 1947ರಲ್ಲಿ ನಡೆದ ಭಾರತ ವಿಭಜನೆಯ ಕಾಲಘಟ್ಟದ ಕಥೆಯನ್ನು ಈ ಧಾರಾವಾಹಿ ಆಧರಿಸಿದೆ.
ಮನರಂಜನೆ ನಡುವೆ ಸತ್ಯಗಳ ಸಮ್ಮಿಳಿತ
ಭಾರತೀಯ ವ್ಯಂಗ್ಯ ಚಿತ್ರಕಲಾ ರಂಗದಲ್ಲಿ ದಂತಕತೆ ಎನಿಸಿದ್ದ ಆರ್.ಕೆ. ಲಕ್ಷಣ್ ಅವರು ಚಿತ್ರಕತೆ ಬರೆದ ಧಾರಾವಾಹಿ 'ವಾಗ್ಲೇ ಕಿ ದುನಿಯಾ'. ಶ್ರೀನಿವಾಸ ವಾಗ್ಲೆ ಎಂಬ ಮಧ್ಯಮ ವರ್ಗದ ಸೇಲ್ಸ್ ಮ್ಯಾನ್ ವೃತ್ತಿಯ ವ್ಯಕ್ತಿ ಇದರ ಮುಖ್ಯ ಪಾತ್ರ. ಅತ್ಯಂತ ಮನರಂಜನಾತ್ಮಕವಾಗಿ ಮೂಡಿಬಂದ ಧಾರಾವಾಹಿಯಿದು. ಇದರ ಒಂದು ಎಪಿಸೋಡ್ ನಲ್ಲಿ ಖ್ಯಾತ ನಟ ಶಾರೂಖ್ ಖಾನ್ ಅಭಿನಯಿಸಿದ್ದರು. ಆದರೆ, ಆಗಿನ್ನೂ ಅವರು ಚಿತ್ರರಂಗಕ್ಕೆ ಪರಿಚಿತಗೊಂಡಿರಲಿಲ್ಲ.
ಚಿತ್ರರಂಗಕ್ಕೆ ಏಣಿಯಾದ ಕಥಾ ಸರಣಿ
ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅವರು, ಬಾಲಿವುಡ್ ಗೆ ಕಾಲಿಡುವುದಕ್ಕೂ ಮುನ್ನ ನಟಿಸಿದ್ದ ಧಾರಾವಾಹಿಯಿದು. ಅಜೀಜ್ ಮಿರ್ಜಾ, ಕುಂದನ್ ಶಾ ಎಂಬುವರು ನಿರ್ದೇಶಿಸಿದ್ದರು. ಶಾರೂಖ್ ಖಾನ್ ಅವರು ಮಲೆಯಾಳಿ ಮೂಲದ ಸರ್ಕಸ್ ಕಂಪನಿಯ ಮಾಲೀಕನಾದ ಶೇಖರನ್ ಎಂಬ ಪಾತ್ರದಲ್ಲಿ ಮಿಂಚಿದ್ದರು.