"ಪ್ರಳಯ ಆಗೋದಾದ್ರೆ... ಮನೇಲಿರೋ ಉಪ್ಪಿನಕಾಯಿ ಖಾಲಿ ಮಾಡ್ತೀನಿ!"
ಕೊನೆಗೂ ಸೆಪ್ಟೆಂಬರ್ 23 ಕಳೀತು! ಈ ಪ್ರಳಯ ಅಂತ ವರ್ಷಕ್ಕೊಂದ್ಸಾರಿಯಾದರೂ ಗುಲ್ಲೆಬ್ಬಿಸುತ್ತ ಜನರ ನಿದ್ದೆ ಕೆಡಿಸುವ ಸಂಖ್ಯಾಶಾಸ್ತ್ರಜ್ಞರಿಗೆ, ಜ್ಯೋತಿಷಿಗಳಿಗೆ ಮತ್ತೊಮ್ಮೆ ಮುಖಭಂಗವಾಯ್ತು.
ಸೆ.23 ರಂದು ಪ್ರಳಯವಾಗುತ್ತೆ ಎಂದಿದ್ದ ಡೇವಿಡ್ ಮೇಡೆ ಎಂಬ ಕ್ರಿಶ್ಚಿಯನ್ ಸಂಖ್ಯಾಶಾಸ್ತ್ರಜ್ಞ, ಪ್ರಳಯದ ದಿನಾಂಕವನ್ನು ಪೋಸ್ಟ್ ಪೋನ್ ಮಾಡಿದ್ದಾರಂತೆ! ಪ್ರಳಯ ಆಗುತ್ತೆ ಅಂತ ಎಷ್ಟು ಜನ ತಲೆಕೆಡಿಸಿಕೊಂಡರೋ, ಬಿಟ್ಟರೋ! ಆದರೆ ಸಾಮಾಜಿಕ ಜಾಲತಾಣಗಳಲ್ಲಂತೂ ಈ ಪ್ರಳಯ ಒಳ್ಳೇ ಹಾಟ್ ಟಾಪಿಕ್ ಆಗಿ ಟ್ರೆಂಡಿಂಗ್ ಆಗಿತ್ತು!
ಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ
ಕೆಲವರು ಪ್ರಳಯದ ಸುದ್ದಿ ಹಬ್ಬಿರುವುದೇ ಗೊತ್ತಿಲ್ಲ ಎಂಬಷ್ಟು ನಿರ್ಲಿಪ್ತವಾಗಿದ್ದರೆ ಮತ್ತಷ್ಟು ಜನ ಪ್ರಳಯವನ್ನಿಟ್ಟುಕೊಂಡು ಬಾಯ್ತುಂಬ ನಗುವಷ್ಟು ಚರ್ಚೆ ಮಾಡಿದ್ದಂತೂ ಸತ್ಯ. ಅದಕ್ಕೊಂದು ಉದಾಹರಣೆ ಲೇಖಕಿ ಅನಿತಾ ನರೇಶ್ ಮಂಚಿ ಅವರ ಫೇಸ್ ಬುಕ್ ಪೋಸ್ಟ್!
ಸೆ.23 ಜಗತ್ತಿನ ಅಂತ್ಯವಂತೆ! ವಿಶ್ವವನ್ನೇ ತಲ್ಲಣಿಸಿದ ಆ 10 ವದಂತಿಗಳು
"ಸೆ.23 ಕ್ಕೆ ಪ್ರಳಯವಾಗುತ್ತೆ ಅಂತಾದ್ರೆ ಅದರ ಮುನ್ನಾದಿನ ನೀವು ಏನೆಲ್ಲ ಆಡ್ತೀರಾ" ಎಂದು ಅನಿತಾ ನರೇಶ್ ಮಂಚಿಯವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಕೇಳಿದ್ದಕ್ಕೆ ಸಾಕಷ್ಟು ಹಾಸ್ಯಭರಿತ ಉತ್ತರಗಳು ಬಂದಿವೆ. ಒಟ್ಟಿನಲ್ಲಿ ಹೀಗೆ ಸುಖಾಸುಮ್ಮನೆ ಪ್ರಳಯ ಪ್ರಳಯ ಅಂತ ಗುಲ್ಲೆಬ್ಬಿಸುವವರಿಗೆ, ಇಂಥವಕ್ಕೆಲ್ಲ ನಾವು ಜಗ್ಗೋದಿಲ್ಲ ಎಂಬ ಸಂದೇಶವನ್ನು ಕಮೆಂಟ್ ಗಳ ಮೂಲಕ ಹಲವರು ವ್ಯಕ್ತಪಡಿಸಿದ್ದಾರೆ.
"ಯಾರೋ ಏನೋ ಗುಲ್ಲೆಬ್ಬಿಸುತ್ತಾರೆ ಅಂತ ನಾವು ನಮ್ಮ ದಿನನಿತ್ಯದ ಕಾಯಕ ಬಿಡೋಕಾಗುತ್ತಾ" ಎಂಬರ್ಥದಲ್ಲಿ ಕೆಲವರು ಉತ್ತರಿಸಿದ್ದರೆ, ಮತ್ತಷ್ಟು ಜನ, ಪ್ರಳಯವಾದರೆ ತಮ್ಮ ಕೊನೆಯಾಸೆಯನ್ನು ಹೇಗೆ ಈಡೇರಿಸಿಕೊಳ್ಳುತ್ತೇವೆ ಎಂದು ಹಾಸ್ಯಾತ್ಮಕವಾಗಿ ವಿವರಿಸಿದ್ದಾರೆ.
ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ
ಅವುಗಳಲ್ಲಿ ಕೆಲವು ಆಯ್ದ ಕಮೆಂಟ್ ಗಳು ನಿಮಗಾಗಿ ಇಲ್ಲಿವೆ.
ಉಪ್ಪಿನಕಾಯಿ ಖಾಲಿಮಾಡ್ತೀನಿ!
ಮನೆಯಲ್ಲಿ ಉಳಿದಿರೋ ಉಪ್ಪಿನಕಾಯಿ, ಹಸಿಮೆಣಸಿನಕಾಯಿ ಖಾಲಿ ಮಾಡ್ತೀನಿ. ಆಮೇಲೆ ಬೇಕಾದ್ರೆ ಪ್ರಳಯ ಆಗಲಿ ಅಂತ ಮಾಲಿನಿ ಗುರುಪ್ರಸನ್ನ ಅವರು ಕಮೆಂಟ್ ಮಾಡಿದ್ದಾರೆ!
ಸಣ್ಮೆಣಸಿನ ತಂಬುಳಿ ಊಟಮಾಡ್ತೀನಿ!
ಸೆ.23 ರಂದು ಪ್ರಳಯ ಆಗೋದು ನಿಜವಾದ್ರೆ 'ನಾನಂತೂ ಸಣ್ಮೆಸಿನ ತಂಬಳಿ ಊಟಮಾಡಿ ನೆಮ್ಮದಿಯಾಗಿ ನಿದ್ರೆ ಮಾಡ್ತೀನಿ' ಅಂತ ಪ್ರಿಯಾ ಭಟ್ ಎಂಬುವವರು ಕಮೆಂಟ್ ಮಾಡಿ, ತಮ್ಮ ಸಣ್ಮೆಣಸಿನ ತಂಬುಳಿಯ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಅಮೂಲ್ಯ ಧನಕನಕಾದಿಗಳನ್ನು ನನಗೆ ಕೊಡಿ!
"ನಾವು ಆರಾಮಾಗಿದೀವಿ ಪ್ರಳಯದ ನಂತರ ಸ್ವರ್ಗ ಕ್ಕೆ ಹೋಗಲಿಚ್ಛಿಸುವವರು ನಿಮ್ಮ ಅಮೂಲ್ಯ ಧನಕನಕಾದಿಗಳನ್ನು ಗಂಟು ಕಟ್ಟಿ ನನಗೆ ಕೊಟ್ಟು ತೆರಳಬೇಕಾಗಿ ಕಳಕಳಿಯ ವಿನಂತಿ" ಅಂತ ಅಜಯ್ ಶಾಸ್ತ್ರಿ ಅವರು ಕಮೆಂಟ್ ಮಾಡಿದ್ದಾರೆ!
ದೋಸೆ ಹಿಟ್ಟು ಮಾಡೋಕೆ ಅಕ್ಕಿ ನೆನೆಸಿಟ್ಟೆ!
"ಇದಕ್ಕಿಂತ ದೊಡ್ಡ ಪ್ರಳಯ ನೋಡಿ ಆಗಿದೆ ಅಂತ ಬಟ್ಟೆ ಎಲ್ಲಾ ಒಗೆದು ಹಾಕಿ , ನಾಳೆಗೆ ದೋಸೆ ಮಾಡ್ಲಿಕ್ಕೆ ಅಕ್ಕಿ ನೆನೆಸಿಟ್ಟೆ" ಎಂದು ಕಮೆಂಟ್ ಮಾಡಿರುವ ಲಾಸ್ಯಾ ಕೆ.ಎಸ್. ಎನ್ನುವವರು ಪ್ರಳಯ ಎಂಬ ಸುಳ್ಳು ವದಂತಿಗಳಿಗೆಲ್ಲ ನಾವು ಕ್ಯಾರೇ ಅನ್ನೋಲ್ಲ ಎಂದಿದ್ದಾರೆ!
ಎಕ್ಸ್ ಕ್ಲೂಸಿವ್ ಪ್ರಸಾರ ನಮ್ಮ ಚಾನೆಲ್ ನಲ್ಲಿ ಮಾತ್ರ!
"ಇನ್ನೇನ್ ಪ್ರಳಯ ಆಗ್ತಾ ಇದೆ. ಜನ ಗಾಬರಿಯಿಂದ ಓಡಾಡೋದನ್ನ ನೀವು ಗಮನಿಸಬಹುದು. ಎಲ್ಲೋ ಒಂದ್ಕಡೆ ಕನ್ನಡ ನ್ಯೂಸ್ಗಳ ಭಾರ ತಡೆಯದೆ ಪ್ರಳಯ ಆಗ್ತಾ ಇರಬಹು, ಪ್ರಳಯದಲ್ಲಿ ಜನ ಸಾಯೋದರ ಎಕ್ಸ್ಕ್ಲ್ಯೂಸಿವ್ ಪ್ರಸಾರ ನಮ ಚಾನೆಲ್ಲಿನಲ್ಲಿ ಮಾತ್ರ. ಪ್ರಳಯದಲ್ಲಿ ಸತ್ತವರು ಮತ್ತೆ ಟಿವಿ ಜ್ಯೋತಿಷ್ಯಕಾರರಾಗಿ ಹುಟ್ಟಿ ಬರ್ತಾರಾ ಅನ್ನೋದನ್ನ ಕರ್ಮಕಾಂಡ ಜ್ಯೋತಿಷಿಗಳ ಹತ್ರ ನೇರವಾಗಿ ಸ್ಟುಡಿಯೋದಲ್ಲಿ ಚರ್ಚಿಸ್ತಾ ... ಚಿಪ್ಸ್ ತಿಂದು ಕಾಫಿ ಕುಡೀತೀನಿ ಅಂತ ಪಲ್ಲವಿ ರಾವ್ ಅವರು ಟಿ ವಿ ಚಾನೆಲ್ ಗಳಿಗೆ ಪರೋಕ್ಷವಾಗಿ ಬಿಸಿಮುಟ್ಟಿಸಿದ್ದಾರೆ.