ರಾಹುಲ್ ಗಾಂಧಿ ಮೇಲೆ ವೈಯಕ್ತಿಕ ವಾಗ್ದಾಳಿ ಇಲ್ಲ: ಬದಲಾದ ಶಾ ವರಸೆ
ಅಂಬಿಕಾಪುರ (ಛತ್ತೀಸಗಡ), ಜೂನ್ 11: ಕಾಂಗ್ರೆಸ್ ಹಾಗೂ ರಾಹುಲ್ ಗಾಂದಿ ವಿರುದ್ಧ ಸದಾ ಟೀಕಾಪ್ರಹಾರ ಮತ್ತು ಆರೋಪಗಳನ್ನು ನಡೆಸುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ತಮ್ಮ ಮಾತಿನ ವರಸೆ ಬದಲಿಸಿದ್ದಾರೆ.
ಕಾಂಗ್ರೆಸ್ ಕುರಿತು ಅವರು ತುಸು ಮೆತ್ತಗಾದಂತೆ ತೋರಿಸುತ್ತಿದೆ. ರಾಹುಲ್ ಮತ್ತು ಅವರ ವಂಶಪಾರಂಪರ್ಯದ ಆಡಳಿತದ ವಿರುದ್ಧ ಅನೇಕ ಕಾರ್ಯಕ್ರಮಗಳಲ್ಲಿ ಹರಿಹಾಯ್ದಿದ್ದ ಅಮಿತ್ ಶಾ, ಅದರಲ್ಲಿ ಉದ್ದೇಶಪೂರ್ವಕವಾದ ವೈಯಕ್ತಿಕ ಗುರಿ ಇರಲಿಲ್ಲ ಎಂಬ ಸಮಜಾಯಿಷಿ ನೀಡಿದ್ದಾರೆ.
ಭಾರತ ಆರೆಸ್ಸೆಸ್, ಬಿಜೆಪಿ ಕೈಯಲ್ಲಿ ಜೀತದಾಳಾಗಿದೆ: ರಾಹುಲ್
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ಮಾಡುತ್ತಿದ್ದ ಅಮಿತ್ ಶಾ, ತಮ್ಮ ಮಾತುಗಳನ್ನು ರಾಹುಲ್ ಗಾಂಧಿ ವಿರುದ್ಧದ ವೈಯಕ್ತಿಕ ವಾಗ್ದಾಳಿ ಎಂದು ಪರಿಗಣಿಸಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಅಲ್ಲದೆ, 'ಕಾಂಗ್ರೆಸ್ ಮುಕ್ತ ಭಾರತ' ಎಂಬ ಘೋಷಣೆಯು ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆ ಮಾಡುವುದಲ್ಲ. ಆದರೆ, ದೇಶವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತಗೊಳಿಸುವುದಾಗಿದೆ ಎಂದು ವಿವರಣೆ ನೀಡಿದ್ದಾರೆ.
ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿ ಪಾಲಿಗೆ ಅದೃಷ್ಟ: ಅಮಿತ್ ಶಾ
ಎರಡು ದಿನಗಳ ಛತ್ತೀಸಗಡ ಪ್ರವಾಸದಲ್ಲಿರುವ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 'ಮಿಷನ್ 65' ಘೋಷಣೆ ಯಶಸ್ವಿಯಾಗಲಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಯಾರೂ ಅಪಾಯದಲ್ಲಿಲ್ಲ
ಇದನ್ನು ರಾಹುಲ್ ಗಾಂಧಿ ವಿರುದ್ಧದ ವೈಯಕ್ತಿಕ ದಾಳಿ ಎಂದು ಪರಿಗಣಿಸಬೇಡಿ. ಅವರು ಕೆಲವು ಜನರ ಮುಂದೆ ಕೆಲವು ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ್ದರು. ನಾನು ಅದಕ್ಕೆ ಉತ್ತರ ನೀಡಲು ಮಾತ್ರ ಪ್ರಯತ್ನಿಸಿದ್ದೆ.
ಪ್ರಜಾಪ್ರಭುತ್ವದಲ್ಲಿ ಯಾರೂ ಅಪಾಯದಲ್ಲಿಲ್ಲ. ನಮ್ಮ ಪಕ್ಷ ಉತ್ತಮ ಕೆಲಸಗಳನ್ನು ಮಾಡಿದೆ ಮತ್ತು ಅದನ್ನು ಎಷ್ಟು ಕಾಲ ಮುಂದುವರಿಸುತ್ತೇವೆಯೋ ಅಷ್ಟು ಸಮಯ ಜನರೂ ನಮ್ಮನ್ನು ಬೆಂಬಲಿಸುತ್ತಾರೆ.
ಲೆಕ್ಕ ಕೇಳಿದ್ದೇನೆ ಅಷ್ಟೇ
ಗಾಂಧಿ ಕುಟುಂಬದ ನಾಲ್ಕು ತಲೆಮಾರಿನ ಆದಾಯದ ಲೆಕ್ಕವನ್ನು ರಾಹುಲ್ ಗಾಂಧಿ ಅವರಿಗೆ ಕೇಳುತ್ತಿದ್ದೇನೆ. ಏಕೆಂದರೆ ಅವರು ಕಾಂಗ್ರೆಸ್ ಅಧ್ಯಕ್ಷ ಮತ್ತು ಅವರ ಕುಟುಂಬ ದೇಶವನ್ನು 55 ವರ್ಷ ಕಾಲ ಆಳಿದೆ. ನೀವು ಕಾಂಗ್ರೆಸ್ನ ಅಧ್ಯಕ್ಷರಾದಾಗ ಕಾಂಗ್ರೆಸ್ನ ಆಸ್ತಿ ವಿವರದ ಬಗ್ಗೆ ನೀವು ಉತ್ತರ ನೀಡಬೇಕು. ಬಿಜೆಪಿಯ ಅಧ್ಯಕ್ಷನಾಗಿ ನಾನು ಅದರ ಕುರಿತು ಉತ್ತರಿಸುತ್ತಿದ್ದೇನೆ. ಅದಕ್ಕೆ ಆಕ್ಷೇಪ ಇರಲು ಸಾಧ್ಯವಿಲ್ಲ.
ಕಾಂಗ್ರೆಸ್ ಮುಕ್ತ ಭಾರತವಲ್ಲ!
ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ನಾವು ಮಾತನಾಡಿದಾಗ ಅದು ಕಾಂಗ್ರೆಸ್ ಸಂಸ್ಕೃತಿಗೆ ಅಂತ್ಯ ಹಾಡುತ್ತೇವೆ ಎಂದರ್ಥವೇ ಹೊರತು, ವಿರೋಧ ಪಕ್ಷವನ್ನು ಮುಗಿಸುತ್ತೇವೆ ಎಂದಲ್ಲ. ವಿರೋಧಪಕ್ಷವಿಲ್ಲದೆ ಪ್ರಜಾಪ್ರಭುತ್ವ ಅಸಾಧ್ಯ. ಆದರ ಕಾಂಗ್ರೆಸ್ಅನ್ನು ಜೀವಂತವಾಗಿ ಇರಿಸುವುದು ನನ್ನ ಹೊಣೆಗಾರಿಕೆಯಲ್ಲ. ಅದು ರಾಹುಲ್ ಗಾಂಧಿ ಜವಾಬ್ದಾರಿ ಎಂದು ಪ್ರಶ್ನೆಯೊಂದಕ್ಕೆ ಅಮಿತ್ ಶಾ ಪ್ರತಿಕ್ರಿಯಿಸಿದರು.
ಮಧ್ಯಮ ವರ್ಗ ದೂರವಾಗುತ್ತಿಲ್ಲ
ಮಧ್ಯಮವರ್ಗದವರು ನಮ್ಮಿಂದ ದೂರವಾಗುತ್ತಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಾವು ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಇದು ದಾರಿ ತಪ್ಪಿಸುವ ಪ್ರಚಾರ. ಮಧ್ಯಮವರ್ಗದವರಿಗೆ ನಾವು ಸಾಕಷ್ಟು ಮಾಡಿದ್ದೇವೆ. ಮಧ್ಯಮವರ್ಗದವರಿಗೆಂದೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಮಾಜದ ಎಲ್ಲ ವರ್ಗದವರೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿಯೇ ನಾವು 14 ರಾಜ್ಯಗಳಲ್ಲಿ ಸರ್ಕಾರ ರಚಿಸಿದ್ದೇವೆ.
ಪೆಟ್ರೋಲ್ ಬೆಲೆಯ ಸಮಸ್ಯೆ ಬಗ್ಗೆ ಸರ್ಕಾರ ನಿರಂತರವಾಗಿ ಚಿಂತನೆ ನಡೆಸುತ್ತಿದೆ. ಕಳೆದ 12 ದಿನಗಳಲ್ಲಿ ಬೆಲೆಗಳಲ್ಲಿ ಇಳಿಕೆಯಾಗಿದೆ. ಸರ್ಕಾರವು ಅದರ ಮೇಲೆ ಕಣ್ಣಿಟ್ಟಿದೆ ಮತ್ತು ಈ ಬಗ್ಗೆ ಕಳವಳ ಹೊಂದಿದೆ.
ಸತ್ತ ಉಗ್ರರ ಲೆಕ್ಕವನ್ನೂ ನೀಡಲಿ
ಮೋದಿ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ಗಡಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೈನಿಕರು ಸತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ನಾಲ್ಕು ವರ್ಷಗಳಲ್ಲಿ ಕೊಲೆ ಮಾಡಲಾದ ಭಯೋತ್ಪಾದಕರ ಸಂಖ್ಯೆಯನ್ನೂ ಕಾಂಗ್ರೆಸ್ ನೀಡಲಿ.
ಈ ನಾಲ್ಕು ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉಗ್ರರು ಸತ್ತಿದ್ದಾರೆ. ಭಾರತದ ಗಡಿ ಈಗ ಸುರಕ್ಷಿತವಾಗಿದೆ ಎಂಬ ವಿಚಾರದಲ್ಲಿ ಜನರ ಮನಸ್ಸಿನಲ್ಲಿ ಯಾವ ಗೊಂದಲವೂ ಇಲ್ಲ.