'ದಲಿತ ಸಿಎಂ' ಏನು ಮೀಸಲಾತಿಯೆ? ನನ್ನನ್ನು ಹಾಗೆ ಕರೀಬೇಡಿ: ಖರ್ಗೆ
ಬೆಂಗಳೂರು, ಡಿಸೆಂಬರ್ 04: 'ದಲಿತ ಸಿಎಂ' ಎಂಬುದೇನು ಮೀಸಲಾತಿಯೇ, ಇಷ್ಟು ವರ್ಷ ಸಾಮಾಜಿಕ ಜೀವನದಲ್ಲಿ ಸೇವೆ ಮಾಡಿದ್ದರೂ ನನ್ನನ್ನು ದಲಿತ ಸಿಎಂ ಎಂದು ಗುರುತಿಸುವುದು ಸರಿಯಲ್ಲ, ನನ್ನನ್ನು ಹಾಗೇ ಕರಿಯಬೇಡಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾಕೆ ದಲಿರ ದಲಿತ ಅಂತಾ ಹೇಳೋದು ? ಒಬ್ಬ ಕಾಂಗ್ರೆಸ್ ಮೆನ್ ಅಂತಾ ಹೇಳಿ ಸಾಕು, ನನ್ನನ್ನು ಒಂದು ಜಾತಿಗೆ ಮೀಸಲು ಮಾಡಬೇಡಿ' ಎಂದು ಮಾಧ್ಯಮದವರ ವಿರುದ್ಧ ಗರಂ ಆದರು.
ದಲಿತ ವರ್ಗಕ್ಕೆ ಸಿಎಂ ಪಟ್ಟ ಬೇಕೆಂಬ ಒತ್ತಾಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಖರ್ಗೆ ಅವರು ಗರಂ ಆಗಿ ಮೇಲಿನಂತೆ ಉತ್ತರ ನೀಡಿದರು. ಇಷ್ಟು ವರ್ಷ ರಾಜಕೀಯ ಜೀವನದ ನಂತರವೂ ತಮ್ಮನ್ನು 'ದಲಿತ ನಾಯಕ' ಎಂದು ಕರೆಯುವ ಬಗ್ಗೆ ಅವದು ಸಿಟ್ಟಾದರು.
ರಾಜ್ಯ ಉಪಚುನಾವಣೆ ಬಗ್ಗೆಯೂ ಮಾತನಾಡಿದ ಖರ್ಗೆ, 'ರಾಜ್ಯದಲ್ಲಿ ಜನರ ಒಲವು ಕಾಂಗ್ರೆಸ್ ಪಕ್ಷದ ಕಡೆಗೆ ಇದೆ. ನಾವು ಹೆಚ್ಚು ಸ್ಥಾನದಲ್ಲಿ ಗೆಲ್ಲುವುದು ನಿಶ್ಚಿತ, ಸರ್ಕಾರ ರಚನೆ ಕುರಿತು ಡಿಸೆಂಬರ್ 9 ರ ನಂತರ ಹೈಕಮಾಂಡ್ ತೀರ್ಮಾನ ಮಾಡಲಿದೆ' ಎಂದು ಹೇಳಿದರು.
ಇಂದು ಜಾಮೀನಿನ ಮೇಲೆ ಹೊರಬಂದ ಮಾಜಿ ಹಣಕಾಸು ಸಚಿವ ಚಿದಂಬರಂ ಕುರಿತು ಮಾತನಾಡಿದ ಖರ್ಗೆ, 'ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ತಡವಾಗಿಯಾದರೂ ಸೂಕ್ತ ತೀರ್ಪು ಹೊರಬಿದ್ದಿದೆ. ವಿಳಂಬದಿಂದಾಗಿ ಖರ್ಗೆ ಅವರು ಮೂರು ತಿಂಗಳು ಸೆರೆವಾಸ ಅನುಭವಿಸುವಂತಾಯಿತು' ಎಂದರು.
'ಚಿದಂಬರಂ ಒಬ್ಬ ಆರ್ಥಿಕ ತಜ್ಞ, ರಾಜಕೀಯ ಧುರೀಣ, ಕಾನೂನು ತಜ್ಞ ಆಗಿದ್ದಾರೆ. ಅವರಿಗೆ ಮಾನಸಿಕವಾಗಿ ಹಿಂಸೆ ಕೊಡೋ ಕೆಲಸ ನಡೆದಿದೆ. ಐಟಿ,ಇಡಿ ಇಂದ ಕಿರುಕುಳ ನೀಡಲಾಗ್ತಿದೆ' ಎಂದು ಖರ್ಗೆ ಆರೋಪ ಮಾಡಿದರು.
ಮತ್ತೆ ರಾಜ್ಯ ರಾಜಕಾರಣದತ್ತ ಮಾತು ಹೊರಳಿಸಿ, 'ಉಪಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಭವಿಷ್ಯದ ಬಗ್ಗೆ ಈಗಲೇ ಮಾತನಾಡುವುದಿಲ್ಲ. ಡಿಸೆಂಬರ್ 9 ರ ನಂತರ ಎಲ್ಲರಿಗೂ ಗೊತ್ತಾಗಲಿದೆ' ಎಂದರು. ಕುಮಾರಸ್ವಾಮಿ ಮಾಡಿದ ಟೀಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮೈತ್ರಿ ಸರ್ಕಾರ ಕೆಡವುದರಲ್ಲಿ ತಮ್ಮ ಪಾತ್ರವೂ ಇರುವುದಾಗಿ ಎಸ್.ಎಂ.ಕೃಷ್ಣ ಹೇಳಿರುವ ಬಗ್ಗೆ ಮಾತನಾಡಿದ ಖರ್ಗೆ, 'ಅವರು ಒಳ್ಳೆಯ ಕೆಲಸ ಮಾಡಿ ಬಿಜೆಪಿಗೆ ಹೋಗಿದ್ದಾರೆ, ಅವರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ, ಅವರು ಏನು ಮಾಡಿದ್ದಾರೆಂದು ಅವರಿಗೆ ಗೊತ್ತು, ಅವರು ಹಿರಿಯಯ ಅವರಿಗೆ ಒಳ್ಖೆಯದಾಗಲಿ' ಎಂದು ಮಾರ್ಮಿಕವಾಗಿ ಹೇಳಿದರು.