ದುಬಾರಿ ಗಿಡ ಹಾಳು ಮಾಡಿದ ಕತ್ತೆಗಳಿಗೆ 4 ದಿನ ಜೈಲು
ಲಖನೌ, ನವೆಂಬರ್ 27: ಉತ್ತರಪ್ರದೇಶದ ಉರೈ ಜಿಲ್ಲಾ ಕಾರಾಗೃಹದಿಂದ ಕತ್ತೆಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು ಭಾರೀ ಸುದ್ದಿಯಾಗಿದೆ. ಅವುಗಳು ಮಾಡಿದ ತಪ್ಪಿಗೆ ನಾಲ್ಕು ದಿನ ಜೈಲಿನಲ್ಲಿ ಇರಿಸಿ, ಆ ನಂತರ ಬಿಡುಗಡೆ ಮಾಡಿದ್ದಾರೆ ಇಲ್ಲಿನ ಪೊಲೀಸರು. ಅಷ್ಟಕ್ಕೂ ಬಾಯಿಲ್ಲದ ಜೀವಗಳು ಅವು ಮಾಡಿದ ತಪ್ಪೇನು ಅಂತ ನೀವು ಕೇಳಬಹುದು. ಅಲ್ಲೇ ಇರುವುದು ಸುದ್ದಿಯ ತಿರುಳು.
ಆನೆ ಜತೆಗೆ ಬಾಹುಬಲಿ ಸ್ಟಂಟ್, ಬೆನ್ನ ಮೂಳೆಗೆ ತಂದಿತು ಕುತ್ತು
ಜೈಲಿನೊಳಗೆ ಬೆಳೆಸೋಣ ಅಂದುಕೊಂಡು ತುಂಬ ದುಬಾರಿಯ ಹಾಗೂ ಉತ್ತಮ ದರ್ಜೆಯ ಸಸ್ಯಗಳನ್ನು ಪೊಲೀಸ್ ಅಧಿಕಾರಿಗಳು ತಂದಿರಿಸಿದ್ದಾರೆ. ಆದರೆ ಅಂಥ ಸಸ್ಯಗಳನ್ನು ಇವು ಹಾಳು ಮಾಡಿವೆ. ಅವುಗಳ ಮಾಲೀಕರಿಗೆ ಕೂಡ ಈ ಬಗ್ಗೆ ಹೇಳಿ, ಸ್ವಲ್ಪ ಗಮನಕ್ಕೆ ತಗೊಳ್ಳಿ ಅಂತಲೂ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಆ ಬಗ್ಗೆ ಏನೂ ಮುಂಜಾಗ್ರತೆ ತೆಗೆದುಕೊಳ್ಳಲಿಲ್ಲ ಅಂದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಈ ಇಡೀ ಘಟನೆ ಬಗ್ಗೆ ಉರೈ ಜಿಲ್ಲಾ ಕಾರಾಗೃಹದ ಹೆಡ್ ಕಾನ್ ಸ್ಟೇಬಲ್ ವಿವರ ನೀಡಿದ್ದು, ನಮ್ಮ ಹಿರಿಯ ಅಧಿಕಾರಿಗಳು ಜೈಲಿನೊಳಗೆ ನೆಡಬೇಕು ಅಂದುಕೊಂಡಿದ್ದ ಕೆಲವು ದುಬಾರಿ ಸಸ್ಯಗಳನ್ನು ಈ ಕತ್ತೆಗಳು ಹಾಳು ಮಾಡಿದ್ದವು. ಅವುಗಳ ಮಾಲೀಕರಿಗೆ ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಉಪಯೋಗ ಆಗಲಿಲ್ಲ. ಆದ್ದರಿಂದ ಅವುಗಳನ್ನು ಬಂಧಿಸಿ, ಜೈಲಿಗೆ ಹಾಕಿದ್ದೆವು ಎಂದಿದ್ದಾರೆ.