ಡಿಎಸ್ಪಿ ಹತ್ಯೆ ನಿಜಕ್ಕೂ ನಾಚಿಕೆಗೇಡು: ಮೆಹಬೂಬಾ ಮುಫ್ತಿ
ಶ್ರೀನಗರ (ಜಮ್ಮು-ಕಾಶ್ಮೀರ): ಶ್ರೀನಗರದಲ್ಲಿ ಡಿಎಸ್ಫಿ ಮೊಹಮ್ಮದ್ ಆಯೂಬ್ ಪಂಡಿತ್ ರನ್ನು ಜನರೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, 'ಇದೊಂದು ಹೀನಾತ ಹೀನ ಕೃತ್ ಎಂದಿದ್ದಾರೆ.
ಡಿಎಸ್ಪಿಯೊಬ್ಬರನ್ನು ಕೊಂದ ಜನರ ನಡೆಯನ್ನು 'ನಾಚಿಕೆಗೇಡು' ಎಂದು ವ್ಯಾಖ್ಯಾನಿಸಿದ ಮೆಹಬೂಬಾ ಮುಫ್ತಿ, ಭದ್ರತಾ ಪಡೆಯ ಸಹನೆಯನ್ನು ಪರೀಕ್ಷಿಸಬೇಡಿ ಎಂದಿದ್ದಾರೆ.
ಜಮ್ಮು ಕಾಶ್ಮೀರ: ಡಿಎಸ್ಪಿಯನ್ನು ಹತ್ಯೆಗೈದ ಜನ
'ಜನರ ಒಳಿತಿಗಾಗಿ ದುಡಿಯುವವರನ್ನು ಜನರೇ ಕೊಲ್ಲುವುದಕ್ಕಿಂತ ನೀಚ ಕೃತ್ಯ ಬೇರೆ ಇಲ್ಲ' ಎಂದಿರುವ ಅವರು,' ಜಮ್ಮು ಕಾಶ್ಮೀರದ ಪೊಲೀಸರು ತಮ್ಮದೇ ರಾಜ್ಯದ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಂಥವರೇ ಮೇಲೆಯೇ ಹಲ್ಲೆ ಮಾಡಿದರೆ ಅವರಾದರೂ ಎಷ್ಟು ದಿನ ಸುಮ್ಮನಿರುತ್ತಾರೆ' ಎಂದು ಪ್ರಶ್ನಿಸಿದ್ದಾರೆ.
ಈ ಮೂಲಕ ಇಂಥ ನಡೆಯನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ, ಸಹಿಸುವುದಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ.
ನಿನ್ನೆ (ಜೂನ್ 22) ರ ರಾತ್ರಿ, ಮಸೀದಿಯೊಂದರ ಬಳಿ ಫೋಟೋ ಕ್ಲಿಕ್ಕಿಸುತ್ತಿದ್ದ ಡಿಎಸ್ಪಿ ಆಯೂಬ್ ಪಂಡಿತ್, ತಮ್ಮನ್ನು ತಡೆಯಲು ಬಂದ ಜನರನ್ನು ಹೆದರಿಸುವುದಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದರಿಂದ ಉದ್ರಿಕ್ತರಾದ ಜನ ಡಿಎಸ್ಪಿಯನ್ನೇ ಹಿಡಿದು ಸಾಯಿಸಿದ್ದರು. ಈ ಹಿಂಸಾಚಾರದ ನಂತರ ಶ್ರೀನಗರದಲ್ಲಿ ಕರ್ಫ್ಯೂ ಸಹ ಜಾರಿಯಾಗಿತ್ತು.