ಏಕಪಕ್ಷೀಯ ಬದಲಾವಣೆ ಮಾಡಿದ್ದಲ್ಲಿ ಹುಷಾರ್: ಚೀನಾಗೆ ಎಚ್ಚರಿಕೆ ಸಂದೇಶ
ನವದೆಹಲಿ, ಸಪ್ಟೆಂಬರ್.25: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ನಿಷ್ಕ್ರಿಯಗೊಳಿಸದ ಹೊರತೂ ಶಾಂತಿ ಮಾತುಕತೆಗೆ ಅರ್ಥವೇ ಇರುವುದಿಲ್ಲ ಎಂದು ಚೀನಾಗೆ ಭಾರತೀಯ ವಿದೇಶಾಂಗ ಸಚಿವಾಲಯವು ಎಚ್ಚರಿಕೆ ನೀಡಿದೆ.
ಉಭಯ ರಾಷ್ಟ್ರಗಳ ಕಾರ್ಪ್ ಕಮಾಂಡರ್ ಹಂತದ 6ನೇ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಏಕಪಕ್ಷೀಯ ಬದಲಾವಣೆಗಳು ಆಗುತ್ತಿದ್ದರೆ ಶಾಂತಿ ಮಾತುಕತೆ ನಡೆಸುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂದು ಭಾರತ ಪ್ರಶ್ನಿಸಿದೆ.
ಪ್ಯಾಂಗಾಂಗ್ ಸರೋವರದಿಂದ ಹಿಂದೆ ಸರಿಯಲ್ಲ ಎಂದ ಚೀನಾ!
ಆಗಸ್ಟ್.31ರಂದು ಭಾರತ-ಚೀನಾ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದೆ. ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಿಲಿಟರಿ ಹಂತದ ಸಭೆಗಳನ್ನು ನಡೆಸಲಾಗುತ್ತಿದೆ.
ಗಡಿಯಲ್ಲಿ ಏಕಪಕ್ಷೀಯ ಬದಲಾವಣೆಯ ಮಾರ್ಗ
ಭಾರತ ಮತ್ತು ಚೀನಾ ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕಿದ್ದಲ್ಲಿ ಏಕಪಕ್ಷೀಯ ಬದಲಾವಣೆಯ ಪ್ರಯತ್ನವನ್ನು ಮೊದಲು ಬಿಡಬೇಕು ಎಂದು ಚೀನಾಗೆ ಭಾರತವು ಎಚ್ಚರಿಕೆ ನೀಡಿದೆ. ತದನಂತರ ಎಲ್ಲಾ ಸಂಘರ್ಷಿತ ಪ್ರದೇಶಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಪುನಃಸ್ಥಾಪನೆಗೆ ಎರಡೂ ಕಡೆಗಳಿಂದ ಕಮಾಂಡರ್ ಹಂತದ ಸಭೆಗಳಲ್ಲಿ ಚರ್ಚೆ ಮುಂದುವರಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ಮರುನಿಯೋಜನೆ
ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಪುನರ್ ಸ್ಥಾಪನೆಗೆ ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಸೇನಾ ಪ್ರಕ್ರಿಯೆ ನಿಷ್ಕ್ರಿಯಗೊಳಿಸಬೇಕಿದೆ ಎಂದು ಭಾರತವು ಒತ್ತಿ ಹೇಳಿದೆ. ಗಡಿಯಲ್ಲಿ ಸೇನಾ ನಿಷ್ಕ್ರಿಯಗೊಳಿಸುವುದು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಎರಡೂ ಕಡೆಗಳಲ್ಲಿ ಮರುಸ್ಥಾಪನೆ ಮಾಡಿರುವ ಶಿಬಿರಗಳಿಂದ ಮೊದಲೇ ನಿಗದಿಗೊಳಿಸಿದ್ದ ಸೇನಾ ಶಿಬಿರಗಳಿಗೆ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಿದೆ ಎಂದು ಭಾರತೀಯ ಸಚಿವಾಲಯವು ತಿಳಿಸಿದೆ.
6ನೇ ಹಂತದ ಸೇನಾ ಸಭೆ ನಂತರ ಚೀನಾಗೆ ಎಚ್ಚರಿಕೆ
ಕಳೆದ ಸಪ್ಟೆಂಬರ್.21ರಂದು ನಡೆದ ಭಾರತ-ಚೀನಾ ಕಾರ್ಪ್ ಕಮಾಂಡರ್ ಹಂತದ ಸಭೆ ಬಳಿಕ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳೆ "ಗಡಿಯಲ್ಲಿ ಪರಿಸ್ಥಿತಿಯ ಏಕಪಕ್ಷೀಯ ಬದಲಾವಣೆಯಿಂದ ದೂರವಿರಿ. ಮತ್ತು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವಂತ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಭಾರತವು ಎಚ್ಚರಿಕೆ ಸಂದೇಶವನ್ನು ನೀಡಿತ್ತು.
6ನೇ ಕಾರ್ಪ್ ಕಮಾಂಡರ್ ಸಭೆ ಪ್ರಮುಖಾಂಶಗಳು
1. ಮಾಲ್ಡೋ ಪ್ರದೇಶದಲ್ಲಿ ನಡೆದ ಕಾರ್ಪ್ ಕಮಾಂಡರ್ ಸಭೆಯಲ್ಲಿ ಚೀನಾ ತನ್ನ ಹಠವನ್ನು ಮುಂದುವರಿಸಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಬಳಿಯಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳುವುದಕ್ಕೆ ನಿರಾಕರಿಸಿದೆ ಎನ್ನಲಾಗುತ್ತಿದೆ.
2. ಏಪ್ರಿಲ್-2020ಕ್ಕೂ ಮೊದಲು ಗಡಿಯಲ್ಲಿದ್ದ ಸ್ಥಿತಿಯನ್ನೇ ಯಥಾವತ್ತಾಗಿ ಕಾಯ್ದುಕೊಳ್ಳುವ ಬಗ್ಗೆ ಭಾರತವು ಪ್ರಸ್ತಾಪಿಸಿತು. ಅದರ ಪ್ರಕಾರ 2020ರ ಏಪ್ರಿಲ್ ಗೂ ಮೊದಲು ಚೀನಾದ ಸೈನಿಕರು ಗಡಿಯ ಯಾವ ಪ್ರದೇಶದಲ್ಲಿದ್ದರೋ ಅದೇ ಪ್ರದೇಶಕ್ಕೆ ವಾಪಸ್ ತೆರಳುವುದು ಭಾರತದ ವಾದವಾಗಿತ್ತು.
3. ಭಾರತದ ನಿಯೋಗದಲ್ಲಿ ಲೆಫ್ಟಿನೆಂಟ್ ಗವರ್ನರ್ ಪಿಜಿಕೆ ಮೆನನ್ ಕೂಡಾ ಭಾಗಿಯಾಗಿದ್ದರು. ಏಕೆಂದರೆ ಆಕ್ಟೋಬರ್ ತಿಂಗಳಿನಲ್ಲಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನಿವೃತ್ತರಾಗಲಿದ್ದು, ಅವರಿಂದ ಮೆನನ್ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ.
4. ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವಿನ್ ಶ್ರೀವಾಸ್ತವ್, ಮೇಜರ್ ಜನರಲ್ ಅಭಿಜಿತ್ ಬಾಪತ್ ಮತ್ತು ಮೇಜರ್ ಜನರಲ್ ಪದಮ್ ಶೆಖಾವತ್ ರನ್ನೊಳಗೊಂಡ ನಿಯೋಗವು ಕೂಡಾ ಸಭೆಯಲ್ಲಿ ಭಾಗಿಯಾಗಿತ್ತು.