ಬುಲೆಟ್ ರೈಲು ಯಾಕೆ ಬೇಕು? ರೈಲ್ವೆ ಸಚಿವರ ಉತ್ತರ
ಭಾರತಕ್ಕೆ ಬುಲೆಟ್ ರೈಲಿನ ಅಗತ್ಯವಿದೆಯಾ? ಜಪಾನ್ ಜೊತೆ ಸೇರಿಕೊಂಡು ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಬರಲಿರುವ ಬುಲೆಟ್ ರೈಲಿನ ಸಾಧ್ಯತೆ ಬಾಧ್ಯತೆಗಳೇನು? ಸುರಕ್ಷತೆಯ ಮಟ್ಟ ಎಷ್ಟಿರುತ್ತದೆ? ಇದರಿಂದ ಎಷ್ಟು ಲಾಭವಾಗುತ್ತದೆ, ಎಷ್ಟು ನಷ್ಟವಾಗುತ್ತದೆ?
ಕೋರಾ ಸಾಮಾಜಿಕ ತಾಣದಲ್ಲಿ ಕೇಳಲಾಗಿರುವ ಇತ್ಯಾದಿ ಪ್ರಶ್ನೆಗಳಿಗೆ ಕೇಂದ್ರ ರೈಲು ಸಚಿವ ಪಿಯೂಶ್ ಗೋಯಲ್ ಅವರು, ಇನ್ಫೋಗ್ರಾಫಿಕ್ಸ್ ಗಳ ಸಮೇತ ಸವಿವರವಾಗಿ ಉತ್ತರ ನೀಡಿದ್ದಾರೆ. ಅವರ ಉತ್ತರದ ಸಾರಾಂಶ ಕೆಳಗಿನಂತಿದೆ, ಓದಿರಿ.
ಪ್ರಯಾಣಿಕರ ಸುರಕ್ಷತೆಗೆ ರೈಲು ಇಲಾಖೆಯ ಹೊಸ ತಂತ್ರ
ಹಲವಾರು ಬದಲಾವಣೆಗಳನ್ನು ಕಾಣುತ್ತಿರುವ ಭಾರತದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ. ಭಾರತದಲ್ಲಿ ರೈಲು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಹೈಸ್ಪೀಡ್ ರೈಲಾದ ಬುಲೆಟ್ ಟ್ರೈನನ್ನು ನಿರ್ಮಿಸುವುದು ಆ ಬದಲಾವಣೆಗಳಲ್ಲಿ ಒಂದಾಗಿವೆ.
ಸುರಕ್ಷತೆ, ವೇಗ ಮತ್ತು ಸೇವೆಯ ಪ್ಯಾಕೇಜ್ ನೊಂದಿಗೆ, ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಬರಲಿರುವ ಬುಲೆಟ್ ರೈಲು ಎನ್ಡಿಎ ಸರಕಾರದ ಕನಸಿನ ಕೂಸು. ಇದು ಸಾಕಾರವಾದರೆ ಭಾರತೀಯ ರೈಲು ಜಾಗತಿಕ ಮಟ್ಟದಲ್ಲಿ ಕೂಡ ಅಗ್ರಗಣ್ಯ ಎನ್ನಿಸಿಕೊಳ್ಳಲಿದೆ.
ಮುಂಬೈ ಮಾದರಿಯಲ್ಲಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು: ಪಿಯೂಷ್ ಗೋಯಲ್
ಹೊಸ ತಂತ್ರಜ್ಞಾನ ಬಂದಾಗ ಅಡೆತಡೆಗಳಿರುವುದು ಸಾಮಾನ್ಯ. ಹಿಂದೆ 1968ರಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ಆರಂಭವಾದಾಗ ಕೂಡ ಸಲ್ಲದ ಮಾತುಗಳು ಬಂದಿದ್ದವು. ಆದರೆ, ಇತಿಹಾಸದ ಪುಟಗಳನ್ನು ಮೆಲುಕು ಹಾಕಿದರೆ ಈ ತಂತ್ರಜ್ಞಾನಗಳಿಂದ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ.
ಮೊಬೈಲ್ ಫೋನ್ ಬಂದಾಗ ಕೂಡ ಕರೆಯೊಂದಕ್ಕೆ 16 ರುಪಾಯಿ ಯಾರು ಕೊಡ್ತಾರೆ ಎಂದು ಹಲವರು ಅದನ್ನು ತಿರಸ್ಕರಿಸಿದ್ದರು. ಆದರೆ, ಇಂದೇನಾಗಿದೆ? ಭಾರತದಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲಿದೆ, ಭಾರತ ಎರಡನೇ ಅತೀದೊಡ್ಡ ಮಾರುಕಟ್ಟೆಯಾಗಿದೆ. ಇಂಥದೇ ಕ್ರಾಂತಿ ಬುಲೆಟ್ ರೈಲಿನಲ್ಲಿಯೂ ಆಗಲಿದೆ.
ಕಡಿಮೆ ವ್ಯಯದ ಯೋಜನೆ ಬುಲೆಟ್ ರೈಲು
ಜಪಾನ್ ಸರಕಾರ ಭಾರತಕ್ಕೆ ಬುಲೆಟ್ ರೈಲು ನಿರ್ಮಿಸಲು 88 ಸಾವಿರ ಕೋಟಿ ರುಪಾಯಿ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಿದೆ. ಶೇ.0.1 ಬಡ್ಡಿದರದಲ್ಲಿ 50 ವರ್ಷಗಳ ಕಾಲ ಸಾಲ ಮರುಪಾವತಿ ಮಾಡಬೇಕಾಗಿದೆ. ಇದು ಭಾರತಕ್ಕೆ ಹೊರೆಯಾಗಲಾರದು ಮತ್ತು ಸಾಲ ಮರುಪಾವತಿ ಸಾಲ ಕೊಟ್ಟ 15 ವರ್ಷಗಳ ನಂತರ ಆರಂಭವಾಗಲಿದೆ. ತಂತ್ರಜ್ಞಾನ ಜಪಾನ್ ದಾದರೂ ಇದು ಮೇಕ್ ಇನ್ ಇಂಡಿಯಾ ಪ್ರಾಡಕ್ಟ್
ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗ
ಅತ್ಯಾಧುನಿಕ ತಂತ್ರಜ್ಞಾನದ ವಿನಿಮಯದ ಕುರಿತಂತೆ ಭಾರತ ಮತ್ತು ಜಪಾನ್ ನಡುವೆ ಹಲವಾರು ಮಾತುಕತೆಗಳಾಗಿವೆ. 50 ವರ್ಷ ಹಳೆಯದಾದ ಶಿಂಕನ್ಸೆನ್ ತಂತ್ರಜ್ಞಾನದ ಬಳಕೆಯಿಂದ ರೈಲು ತಡವಾಗುವುದಿಲ್ಲ, ಅಪಘಾತಗಳಾಗುವುದಿಲ್ಲ, ಸುರಕ್ಷತೆಯ ಗುಣಮಟ್ಟವನ್ನು ಕಾಪಾಡಲಾಗುವುದು. ಅಪಘಾತ ಮುನ್ಸೂಚನೆ ಮತ್ತು ತಡೆಗಟ್ಟುವ ತಂತ್ರಜ್ಞಾನವೂ ಇದರಲ್ಲಿ ಇರಲಿದೆ. 7ರಿಂದ 8 ಗಂಟೆ ತಗಲುತ್ತಿದ್ದ ಸಮಯ ಬುಲೆಟ್ ರೈಲಿನಿಂದ 2 ಗಂಟೆಗೆ ಇಳಿಯಲಿದೆ.
ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ಸೋಪಾನ
ಬುಲೆಟ್ ರೈಲಿನಿಂದ ಭಾರತದ ಅಭಿವೃದ್ಧಿ ಕೂಡ ಅಷ್ಟೇ ವೇಗದಲ್ಲಿ ಮುಂದೆ ಸಾಗಲಿದೆ. ಭಾರತದಲ್ಲೇ ನಿರ್ಮಾಣವಾಗುತ್ತಿರುವುದರಿಂದ ಭಾರತದ ಜನತೆಗೆ ಉದ್ಯೋಗ ಸಿಗಲಿದೆ. ನಿರ್ಮಾಣ ಸಮಯದಲ್ಲಿಯೇ 20 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಮಹಾರಾಷ್ಟ್ರದಲ್ಲಿ 4 ಮತ್ತು ಗುಜರಾತ್ ನಲ್ಲಿ 8 ಸ್ಟೇಷನ್ ಗಳು ಆರ್ಥಿಕ ಪವರ್ ಹೌಸ್ ಆಗಿ ಬದಲಾಗಲಿವೆ.
ಬುಲೆಟ್ ಟ್ರೈನ್ ಭಾರತದ ಗೇಮ್ ಚೇಂಜರ್
2022ರೊಳಗೆ ನಿರ್ಮಾಣವಾಗಲಿರುವ ಬುಲೆಟ್ ಟ್ರೈನ್ ಭಾರತದ ಅಭಿವೃದ್ಧಿಯ ನಕ್ಷೆಯನ್ನೇ ಬದಲಿಸಲಿದೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ. ಬರೋಡಾದಲ್ಲಿ ತರಬೇತಿ ಕೇಂದ್ರದಲ್ಲಿ 4 ಸಾವಿರ ಉದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ತಂತ್ರಜ್ಞಾನ ಅರಿಯಲು ಭಾರತದ 300 ಯುವ ಅಧಿಕಾರಿಗಳನ್ನು ಜಪಾನ್ ಗೆ ಕಳುಹಿಸಲಾಗುತ್ತಿದೆ.
ಬುಲೆಟ್ ರೈಲಲ್ಲಿರುವ ಇನ್ನಿತರ ಫೀಚರ್ ಗಳು
ಸ್ವಚ್ಛ ಭಾರತ ಅಭಿಯಾನದ ಮುಖಾಂತರ ಕೇವಲ 7 ನಿಮಿಷದಲ್ಲಿ ರೈಲನ್ನು ಸ್ವಚ್ಛ ಮಾಡಲಾಗುವುದು. ಇದು ಉಗುಳುವ ಇಂಗಾಲದ ಡೈಆಕ್ಸೈಡ್ ಕೂಡ ವಿಮಾನದ 1/4ರಷ್ಟು ಮತ್ತು ಕಾರಿನ 1/3ಕ್ಕಿಂತ ಕಡಿಮೆ ಇರಲಿದ್ದು, ಪರಿಸರ ಸ್ನೇಹಿಯಾಗಿರಲಿದೆ. ಬುಲೆಟ್ ರೈಲು ಪ್ರಯಾಣಿಕರ ಅನುಕೂಲಕ್ಕೆ ಮಾತ್ರವಲ್ಲ ಅಭಿವೃದ್ಧಿಯ ದೃಷ್ಟಿಯಿಂದಲೂ ಭಾರತಕ್ಕೆ ಬೇಕೇಬೇಕು.