ಸರಕಾರವು ತಾಜ್ ಮಹಲ್ ನಾಶ ಮಾಡಲು ಬಯಸಿದೆಯಾ: ಸುಪ್ರೀಂ ತರಾಟೆ
ನವದೆಹಲಿ, ಆಗಸ್ಟ್ 18: ತಾಜ್ ಮಹಲ್ ನ ನಾಶ ಮಾಡುವುದೇ ನಿಮ್ಮ ಉದ್ದೇಶವಾ ಎಂದು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ಉತ್ತರಪ್ರದೇಶದ ಮಥುರಾದಿಂದ ದೆಹಲಿವರೆಗೆ ಹೆಚ್ಚುವರಿಯಾಗಿ ರೈಲ್ವೆ ಹಳಿ ಜೋಡಿಸಲು ನಾನೂರು ಮರಗಳನ್ನು ಕಡಿಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಹೀಗೆ ಪ್ರತಿಕ್ರಿಯಿಸಿದೆ.
ತಾಜ್ ಮಹಲ್ ಮೂಲದಲ್ಲಿ ಶಿವ ದೇವಾಲಯವೇ?: ಮತ್ತೆ ಎದ್ದಿತು ಪ್ರಶ್ನೆ
ಇದು (ತಾಜ್ ಮಹಲ್) ಜಗದ್ವಿಖ್ಯಾತ ಸ್ಮಾರಕ. ನೀವು (ಸರಕಾರ) ಅದನ್ನು ನಾಶ ಮಾಡಲು ಬಯಸಿದ್ದೀರಾ? ಇತ್ತೀಚಿನ ತಾಜ್ ಮಹಲ್ ಚಿತ್ರಗಳನ್ನು ನೋಡಿದ್ದೀರಾ? ಇಂಟರ್ ನೆಟ್ ನಲ್ಲಿ ನೋಡಿ ಎಂದು ನ್ಯಾಯಮೂರ್ತಿ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠವು ಹೇಳಿದೆ.
ನಿಮಗೆ ಬೇಕಿದ್ದರೆ ಅಫಿಡವಿಟ್ ಅಥವಾ ಅರ್ಜಿ ಸಲ್ಲಿಸಿ. ಮತ್ತು ಅದರಲ್ಲಿ ಭಾರತ ಸರಕಾರ ತಾಜ್ ಮಹಲ್ ಅನ್ನು ನಾಶ ಮಾಡಲು ಬಯಸುತ್ತದೆ ಎಂಬುದನ್ನು ಉಲ್ಲೇಖಿಸಿ ಎಂದು ಪೀಠವು ಹೇಳಿದೆ.
ಪರಿಸರತಜ್ಞ ಎಂ.ಸಿ.ಮೆಹ್ತಾ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಮೆಹ್ತಾ ಅವರು ಐತಿಹಾಸಿಕ ತಾಜ್ ಮಹಲ್ ನ ಸುತ್ತ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನಿಗಾ ವಹಿಸಿದ್ದಾರೆ. ಇದನ್ನು ಮೊಘಲ್ ದೊರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿಸಿದ್ದು, ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ತಾಜ್ ಮಹಲ್ ಸೇರಿದೆ.