'ಕಾಪಿ ಪೇಸ್ಟ್ ಮಾಡಬೇಡಿ': ಡಿಕೆಶಿ ಪ್ರಕರಣದಲ್ಲಿ ಇ.ಡಿಗೆ ಸುಪ್ರೀಂಕೋರ್ಟ್ ತರಾಟೆ
ನವದೆಹಲಿ, ನವೆಂಬರ್ 16: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಅಲ್ಲಿ ಮುಖಭಂಗ ಅನುಭವಿಸಿದೆ.
ಇ.ಡಿ. ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಅದು ಎತ್ತಿಹಿಡಿದಿತ್ತು. ಅದೇ ಹಳೆಯ ವಾದವನ್ನೇ ಇಲ್ಲಿ ಮತ್ತೆ ಅರಹುತ್ತಿದ್ದೀರಿ ಎಂದು ಸುಪ್ರೀಂಕೋರ್ಟ್, ಇಡಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
ಡಿಕೆಶಿಗೆ ಬಿಗ್ ರಿಲೀಫ್: ಸುಪ್ರೀಂ ನಲ್ಲಿ ED ಮೇಲ್ಮನವಿ ಅರ್ಜಿ ವಜಾ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ನೀಡುವಾಗ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅಂಶಗಳನ್ನು ಪರಿಗಣಿಸಲಾಗಿಲ್ಲ ಎಂದು ಆಕ್ಷೇಪಿಸಿದ್ದ ಜಾರಿ ನಿರ್ದೇಶನಾಲಯ, ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದರಿಂದಾಗಿ ಮತ್ತೆ ಬಂಧನ ಭೀತಿ ಎದುರಿಸುತ್ತಿದ್ದ ಡಿಕೆಶಿ ಅವರಿಗೆ ಮತ್ತೆ ನಿರಾಳತೆ ಸಿಕ್ಕಿತ್ತು.
ದೆಹಲಿ ಹೈಕೋರ್ಟ್ ತೀರ್ಪು ಮಾನ್ಯ
ನ್ಯಾಯಮೂರ್ತಿಗಳಾದ ಆರ್ಎಫ್ ನಾರಿಮನ್ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ, ದೆಹಲಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯುವುದರ ಜತೆಗೆ, ಮತ್ತೊಂದು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪ್ರಕರಣದ ವಾದಗಳನ್ನೇ ಬದಲಿಸದೆ ಕಾಪಿ ಪೇಸ್ಟ್ ಮಾಡುತ್ತಿದ್ದೀರಿ ಎಂದು ಜಾರಿ ನಿರ್ದೇಶನಾಲಯದ ವಿರುದ್ಧ ಕಿಡಿಕಾರಿತು.
ಐಟಿಗೆ ನೋಟಿಸ್ ಜಾರಿ
ಇದರ ಜತೆಗೆ ಆದಾಯ ತೆರಿಗೆ ಇಲಾಖೆಯು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ವಜಾಗೊಳಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿರುವ ಅರ್ಜಿಯಲ್ಲಿ ಪರಿಶೀಲಿಸಿದ ಸುಪ್ರೀಂಕೋರ್ಟ್ ಪೀಠ, ಆ ಸಂಬಂಧ ಆದಾಯ ತೆರಿಗೆ ಇಲಾಖೆಗೆ ನೋಟಿಸ್ ಜಾರಿಮಾಡಿತು.
ಡಿಕೆ ಶಿವಕುಮಾರ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಕಾಪಿ ಪೇಸ್ಟ್ ಮಾಡಲಾಗಿದೆ
'ಈ ಅರ್ಜಿಯು ಪಿ. ಚಿದಂಬರಂ ಅವರ ವಿರುದ್ಧದ ಅರ್ಜಿಯನ್ನೇ ಕಟ್, ಕಾಪಿ ಮತ್ತು ಪೇಸ್ಟ್ ಮಾಡಿರುವಂತೆ ಕಾಣಿಸುತ್ತಿದೆ. ಈ ಅರ್ಜಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಹಣಕಾಸು ಸಚಿವ ಹಾಗೂ ಮಾಜಿ ಗೃಹ ಸಚಿವ ಎಂದು ಉಲ್ಲೇಖಿಸಲಾಗಿದೆ' ಎಂದು ಇ.ಡಿ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಪೀಠ ಛೇಡಿಸಿತು. 'ಇದು ಒಬ್ಬ ನಾಗರಿಕನನ್ನು ನಡೆಸಿಕೊಳ್ಳುವ ರೀತಿಯಲ್ಲ' ಎಂದು ನ್ಯಾ. ನಾರಿಮನ್ ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣ ಗಂಭೀರವಾಗಿದೆ
ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇ.ಡಿ., 'ಈ ಪ್ರಕರಣದ ಗಂಭೀರತೆಯು ತೀವ್ರವಾಗಿದೆ. ಜತೆಗೆ ಆರೋಪಿಯು ದೇಶದ ಹಣಕಾಸು ಸಚಿವಾಲಯ ಮತ್ತು ಗೃಹ ಸಚಿವಾಯದಂತಹ ಉನ್ನತ ಹುದ್ದೆಯಲ್ಲಿದ್ದರು. ಹೀಗಾಗಿ ಅವರು ತಮ್ಮ ವಿರುದ್ಧ ತನಿಖೆಯನ್ನು ಎಲ್ಲ ರೀತಿಯಲ್ಲಿಯೂ ತಡೆಯುವ ಪ್ರಭಾವ ಹೊಂದಿದ್ದಾರೆ. ಅವರ ಹಾಜರಾತಿಯೇ ಸಾಕ್ಷ್ಯಗಳ ಮೇಲೆ ಭಾರಿ ಪರಿಣಾಮ ಬೀರಬಲ್ಲದು. ಅವರಿಗೆ ಜಾಮೀನು ಸಿಕ್ಕರೆ ದೇಶ ತೊರೆಯುವ ಸಾಧ್ಯತೆಯೂ ಇದೆ' ಎಂದು ಹೇಳಿತ್ತು.
ಡಿಕೆ ಶಿವಕುಮಾರ್ಗೆ ಮತ್ತೆ ಸಂಕಷ್ಟ: ಶುಕ್ರವಾರ ಇ.ಡಿ ಮೇಲ್ಮನವಿ ವಿಚಾರಣೆ
ಚಿದಂಬರಂ ಅರ್ಜಿಯಲ್ಲೂ ಪ್ರಸ್ತಾಪ
ಐಎನ್ಎಕ್ಸ್ ಮೀಡಿಯಾ ಕೇಸ್ನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾಡಿದ್ದ ವಾದವನ್ನೇ, ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಮೇಲ್ಮನವಿಯ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಡಿಕೆ ಶಿವಕುಮಾರ್ ಪರ ಹಾಜರಾಗಿದ್ದ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಮುಕುಲ್ ರೋಹಟಗಿ, ಹಳೆಯ ವಾದವನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ ಎಂದು ಗುರುತಿಸಿದರು. ಚಿದಂಬರಂ ಅವರಿಗೆ ಜಾಮೀನು ನಿರಾಕರಣೆಯಾಗಿದ್ದು, ಅವರು ಜೈಲಿನಲ್ಲಿಯೇ ಇರುವಂತಾಗಿದೆ.
ರದ್ದುಗೊಂಡ ಸೆಕ್ಷನ್ ಪ್ರಸ್ತಾಪ
ನ್ಯಾ. ನಾರಿಮನ್ ಅವರು ಇ.ಡಿಯ ಮತ್ತೊಂದು ಪ್ರಮಾದವನ್ನು ತೋರಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇ.ಡಿಯ ಅರ್ಜಿಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿನ ಹಳೆಯ ಅತ್ಯಂತ ಕಠಿಣ ಸೆಕ್ಷನ್ 45 (1) ಉಲ್ಲೇಖ ಮಾಡಿರುವುದನ್ನು ತೋರಿಸಿದರು. ಈ ಸೆಕ್ಷನ್ ಅಸಾಂವಿಧಾನಿಕ ಎಂದು 2017ರಲ್ಲಿ ತೆಗೆದುಹಾಕಲಾಗಿತ್ತು. ಈ ಸೆಕ್ಷನ್ ಜಾಮೀನು ಮಂಜೂರು ಮಾಡುವ ಅವಕಾಶಗಳನ್ನು ಕಠಿಣಗೊಳಿಸುತ್ತದೆ. 'ನಮ್ಮ ತೀರ್ಪಿನ ಜತೆ ಆಟವಾಡಬಾರದು. ನಮ್ಮ ತೀರ್ಪು ದೃಢವಾಗಿರುತ್ತದೆ ಎಂಬುದನ್ನು ನಿಮ್ಮ ಸರ್ಕಾರಕ್ಕೆ ತಿಳಿಸಿ. ಶಬರಿಮಲೆ ತೀರ್ಪಿನಲ್ಲಿ ನಮ್ಮ ಭಿನ್ನಾಭಿಪ್ರಾಯಗಳನ್ನು ದಯವಿಟ್ಟು ಓದಿ' ಎಂದು ನಾರಿಮನ್ ಇ.ಡಿ ಪರ ವಕೀಲರಿಗೆ ಹೇಳಿದರು.