ನೇಣು ಕುಣಿಕೆಯಿಂದ ಯಾಕೂಬ್ ಗೆ ತಾತ್ಕಾಲಿಕ ರಿಲೀಫ್
ನವದೆಹಲಿ, ಜುಲೈ 28: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗೆ ನೇಣು ಕುಣಿಕೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಜುಲೈ 30ರಂದು ಗಲ್ಲುಶಿಕ್ಷೆ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದ್ದು, ಈಗ ತ್ರಿಸದಸ್ಯ ವಿಭಾಗೀಯ ನ್ಯಾಯಾಪೀಠಕ್ಕೆ ಪ್ರಕರಣ ವರ್ಗಾವಣೆಯಾಗಿದೆ. ತ್ರಿಸದಸ್ಯ ಪೀಠ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಮೆಮನ್ ಗಲ್ಲುಶಿಕ್ಷೆ ಸಾಧ್ಯವಿಲ್ಲ.
ಜುಲೈ 30ರಂದು ಗಲ್ಲು ಶಿಕ್ಷೆಗೇರಬೇಕಿದ್ದ ಯಾಕೂಬ್ ಮೆಮನ್, ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ ತಾತ್ಕಾಲಿಕ ತಡೆ ನೀಡಿದೆ. ಅರ್ಜಿ ವಿಚಾರಣೆಯನ್ನು ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. [ಮೆಮನ್ ಗಲ್ಲಿಗೇರಿಸಲು ಡೇಟ್ ಫಿಕ್ಸ್]
ಗಲ್ಲಿಗೇರಿಸಲು ಎರಡು ದಿನ ಬಾಕಿ ಇರುವಾಗ ಯಾಕೂಬ್ ಸಲ್ಲಿಸಿರುವ ಅರ್ಜಿ ಪುರಸ್ಕರಿಸಬೇಕೇ? ಈ ಪ್ರಕರಣದಲ್ಲಿ ಇನ್ನೂ ಅರ್ಜಿ ವಿಚಾರಣೆ ಅಗತ್ಯವಿದೆಯೇ? ಎಂಬ ಪ್ರಶ್ನೆಗಳಿಗೆ ಪರಿಹಾರ ಸಿಗದ ಕಾರಣ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ.[ಸುಪ್ರೀಂ ಮೊರೆ ಹೋದ ಯಾಕೂಬ್]
ಮುಖ್ಯ ನ್ಯಾಯಮೂರ್ತಿಗಳ ಅಧಿಕಾರ: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರು ಈ ವಿಷಯದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ. ಹೊಸದಾಗಿ ತ್ರಿಸದಸ್ಯ ರಚನೆ ಜವಾಬ್ದಾರಿ ಕೂಡಾ ನ್ಯಾ. ದತ್ತು ಅವರ ಮೇಲಿದೆ.
ಈ ಹಿಂದೆ ಮೆಮನ್ ಸಲ್ಲಿಸಿದ್ದ ಕ್ಯೂರೇಟರ್ ಅರ್ಜಿಯನ್ನು ತಿರಸ್ಕರಿಸಿದ್ದ ತ್ರಿಸದಸ್ಯ ನ್ಯಾಯಪೀಠದಲ್ಲಿ ನ್ಯಾ. ದತ್ತು ಅವರು ಇದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇದಾದ ಬಳಿಕೆ ಮಹಾರಾಷ್ಟ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟಿಗೆ ಮತ್ತೊಮ್ಮೆ ಮೆಮನ್ ಮನವಿ ಸಲ್ಲಿಸಿದ್ದರು.
ಮತ್ತೆ ಅರ್ಜಿ ಸಲ್ಲಿಸಿದ್ದು ಏಕೆ?: ಕ್ಯೂರೇಟರ್ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. 1996 ಸ್ಕಿಜೋಫ್ರೆನಿಯಾ ಕಾಯಿಲೆಯಿಂದ ಬಳಲುತ್ತಿದ್ದೇನೆ. 20 ವರ್ಷಗಳಿಂದ ಜೈಲುವಾಸ ಅನುಭವಿಸಿದ್ದೇನೆ. ನನಗೆ ನೀಡಿರುವ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ, ಗಲ್ಲು ಹಾಗೂ ಜೀವಾವಧಿ ಎರಡನ್ನು ಹೇಗೆ ಅನುಭವಿಸಲಿ ಎಂದು ಪ್ರಶ್ನಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)