ಆಹಾರದ ಬಗ್ಗೆ ದೂರಿತ್ತು ವಜಾಗೊಂಡಿದ್ದ ಸೈನಿಕನ ಮಗ ಸಾವು
ಚಂಡೀಗಢ, ಜನವರಿ 18: ಸೇನೆಯಲ್ಲಿ ನೀಡಲಾಗುವ ಆಹಾರ ಕಳಪೆ ಮಟ್ಟದ್ದಾಗಿದೆ ಎಂದು ವಿಡಿಯೋ ಮಾಡಿ ಆರೋಪಿಸಿದ ಕಾರಣಕ್ಕೆ ಸೇವೆಯಿಂದ ವಜಾಗೊಂಡಿದ್ದ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರ ಮಗನ ಮೃತದೇಹ ಶುಕ್ರವಾರ ಆತನ ನಿವಾಸದಲ್ಲಿ ಪತ್ತೆಯಾಗಿದೆ.
ರೆವಾರಿ ಜಿಲ್ಲೆಯ ಶಾಂತಿ ವಿಹಾರದ ಮನೆಯಲ್ಲಿ ನೆಲೆಸಿದ್ದ 22 ವರ್ಷದ ರೋಹಿತ್ ತನಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಯೋಧನ ವಿರುದ್ಧ ಬಿಎಸ್ಎಫ್ ಕಿಡಿ
'ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕರೆ ಬಂದಿತ್ತು. ಘಟನಾ ಸ್ಥಳದಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡಿರುವುದು ಗಮನಕ್ಕೆ ಬಂದಿತು. ದೇಹವು ಹಾಸಿಗೆ ಮೇಲೆ ಬಿದ್ದಿತ್ತು. ಕೈಗಳಲ್ಲಿ ಪಿಸ್ತೂಲು ಇತ್ತು. ಆತನ ತಂದೆ ಕುಂಭ ಮೇಳದಲ್ಲಿ ಭಾಗವಹಿಸಲು ತೆರಳಿದ್ದಾರೆ. ಅವರಿಗೆ ಮಾಹಿತಿ ನೀಡಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2017ರಲ್ಲಿ ತೇಜ್ ಬಹದ್ದೂರ್ ಯಾದವ್, ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿನ ಭದ್ರತಾ ಪಡೆಗಳಿಗೆ ವಿತರಿಸಲಾಗುವ ಆಹಾರದ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ಸತ್ಯ ಹೇಳಿದ ಸೈನಿಕನ ತೇಜೋವಧೆಗೆ ಸಿದ್ಧವಾದ ಬಿಎಸ್ಎಫ್
ಈ ವಿಡಿಯೋ ಒಂದೆಡೆ ಸೇನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಲು ಕಾರಣವಾಗಿದ್ದರೆ, ತೇಜ್ ಬಹದ್ದೂರ್ ನಡೆದುಕೊಂಡ ರೀತಿ ಸಹ ಟೀಕೆಗೆ ಗುರಿಯಾಗಿತ್ತು.
Haryana: Rohit, 22-year-old son of Tej Bahadur Yadav (BSF constable who was dismissed from service after he had released a video last year on quality of food served to soldiers) found dead at his residence in Shanti Vihar, Rewari. pic.twitter.com/sVhY5ve6Ju
— ANI (@ANI) 17 January 2019
ಸತ್ಯ ಹೇಳಿದ್ದ ಯೋಧ ಪ್ಲಂಬರ್ ಆಗಿ ನಿಯೋಜನೆ!
ನಿಯಮಾವಳಿಗೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸುವ ವೇಳೆ ಎರಡು ಮೊಬೈಲ್ ಫೋನ್ಗಳನ್ನು ಕೊಂಡೊಯ್ದಿದ್ದು ಮತ್ತು ಕಠಿಣ ಸೂಚನೆಯ ಹೊರತಾಗಿಯೂ, ಸಮವಸ್ತ್ರದಲ್ಲಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು ತಪ್ಪು ಎಂದು ಪರಿಗಣಿಸಿದ್ದ ಸಮ್ಮರಿ ಸೆಕ್ಯುರಿಟಿ ಫೋರ್ಸ್ ಕೋರ್ಟ್, ಸೇನೆಯ ಆದೇಶಗಳನ್ನು ಕಡೆಗಣಿಸಿದ್ದಕ್ಕಾಗಿ ಸೇವೆಯಿಂದ ವಜಾಗೊಳಿಸಿತ್ತು.