ದೀಪಕ್ ಮಿಶ್ರಾ ಪದಚ್ಯುತಿ ಬಗ್ಗೆ ಚರ್ಚಿಸುತ್ತಿದ್ದೇವೆ: ಕಪಿಲ್ ಸಿಬಲ್
ನವದೆಹಲಿ, ಫೆಬ್ರವರಿ 2: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪದಚ್ಯುತಿ ಬಗ್ಗೆ ಉಳಿದ ಪಕ್ಷಗಳ ಜತೆ ಚರ್ಚಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
ನ್ಯಾ. ದೀಪಕ್ ಮಿಶ್ರಾ ಇಂಪೀಚ್ಮೆಂಟ್ (ಪದಚ್ಯುತಿ)ಯ ಪ್ರಸ್ತಾಪವನ್ನು ಸಿಪಿಐ(ಎಂ) ಇಟ್ಟಿತ್ತು. ಈ ಬಗ್ಗೆ ತಾನು ಇತರ ಪಕ್ಷಗಳ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
"ಪದಚ್ಯುತಿ ಬಗ್ಗೆ ಮಾತನಾಡುವುದಾದರೆ ಪ್ರಕರಣ ಗಂಭೀರವಾಗಿದೆ. ಎಡಪಕ್ಷಗಳ ನಾಯಕರು ನಮ್ಮ ಜತೆ ಮಾತುಕತೆ ನಡೆಸಿದ್ದಾರೆ. ನಾವು ಇತರರ ಜತೆ ಈ ಸಂಬಂಧ ಚರ್ಚೆ ನಡೆಸುತ್ತಿದ್ದೇವೆ. ಈ ರೀತಿಯ ನಿರ್ಧಾರಗಳನ್ನು ತುರ್ತಾಗಿ ತೆಗೆದುಕೊಳ್ಳಲಾಗುವುದಿಲ್ಲ," ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಗುರುವಾರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಕಾಗೋಷ್ಠಿಯಲ್ಲಿ ಸಿಬಲ್ ಮಾತುಗಳನ್ನಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್, ವಿವೇಕ್ ಟಂಕಾ, ರಣದೀಪ್ ಸುರ್ಜೇವಾಲಾ ಉಪಸ್ಥಿತರಿದ್ದರು.
ಕಳೆದ ತಿಂಗಳು ಸುಪ್ರೀಂ ಕೋರ್ಟ್ ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮುಖ್ಯನ್ಯಾಯಮೂರ್ತಿ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಅಸಮಧಾನ ಹೊರ ಹಾಕಿದ್ದರು. ನಿಧನರಾಗಿರುವ ಜಸ್ಟೀಸ್ ಎಚ್.ಬಿ ಲೋಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಅಸಮಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.