ಬಿಜೆಪಿ ಮೈತ್ರಿಕೂಟದಲ್ಲಿ ಮಹಾ ಬಿರುಕು: ತೆಲುಗುದೇಶಂ ಹೊರಕ್ಕೆ?
Recommended Video
ಶಿವಸೇನೆಯ ನಂತರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಮತ್ತೊಂದು ಪ್ರಮುಖ ಸದಸ್ಯ ತೆಲುಗುದೇಶಂ ಪಾರ್ಟಿ ಕೂಟದಿಂದ ಹೊರಬರುವ ಸೂಚನೆಯನ್ನು ನೀಡಿದೆ. ಭಾನುವಾರ (ಫೆ 4) ನಡೆಯಲಿರುವ ಪಕ್ಷದ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಟಿಡಿಪಿ ಹೇಳಿದೆ.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಬಿಜೆಪಿ ಮೈತ್ರಿಕೂಟದ ಜೊತೆ ಗುರುತಿಸಿಕೊಂಡಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಮೈತ್ರಿ ಮುರಿದುಕೊಳ್ಳುವ ಬೆದರಿಕೆಯನ್ನೊಡ್ಡಿತ್ತು.
ಮೊನ್ನೆ ಮಂಡಿಸಲಾದ ಕೇಂದ್ರ ಆಯವ್ಯಯದಲ್ಲಿ ಆಂಧ್ರಪ್ರದೇಶ ಸರಕಾರ ಸಲ್ಲಿಸಿದ್ದ ಯಾವುದೇ ಪ್ರಸ್ತಾವನೆಗೆ ಕೇಂದ್ರ ಸರಕಾರ ಸೊಪ್ಪು ಹಾಕದೇ ಇದ್ದದ್ದು, ಮೇಲ್ನೋಟಕ್ಕೆ ತೆಲುಗುದೇಶಂ ಪಕ್ಷಕ್ಕಿರುವ ಸಿಟ್ಟು. ಟಿಡಿಪಿ ಎರಡು ಪ್ರಮುಖ ಪ್ರಸ್ತಾವನೆಯನ್ನು ವಿತ್ತಸಚಿವ ಜೇಟ್ಲಿಗೆ ಸಲ್ಲಿಸಿತ್ತು.
ಆದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿನಿಧಿಗಳು, ವೈಎಸ್ಆರ್ ಪಕ್ಷದ ಜಗನ್ಮೋಹನ್ ರೆಡ್ಡಿಯವರನ್ನು ಭೇಟಿಯಾಗಿದ್ದೂ, ಬಿಜೆಪಿ ಮೇಲೆ ಚಂದ್ರಬಾಬು ನಾಯ್ಡು ಅವರಿಗಿರುವ ಬೇಸರಕ್ಕೆ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಪ್ರತಿನಿಧಿಗಳು ಭೇಟಿಯಾದ ನಂತರ, ಬಿಜೆಪಿ ಸೇರಲು ನನಗೇನೂ ತಕರಾರಿಲ್ಲ ಎಂದು ಜಗನ್ ಹೇಳಿರುವುದರಿಂದ, ಬಿಜೆಪಿ-ಟಿಡಿಪಿ ನಡುವಿನ ವಿರಸ ಇನ್ನೊಂದು ಹಂತಕ್ಕೆ ಬಂದು ನಿಂತಿದೆ.
ಕೇಂದ್ರ ಬಜೆಟ್ ವಿರುದ್ದ ತೆಲುಗುದೇಶಂ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಬಹುತೇಕ ಟಿಡಿಪಿ ಸದಸ್ಯರು ಮೈತ್ರಿಕೂಟದಿಂದ ಹೊರಬರಲು ಒಲವು ತೋರಿದ್ದಾರೆಂದು ಆಂಧ್ರದ ಪತ್ರಿಕೆಗಳು ವರದಿ ಮಾಡಿವೆ. ಮುಂದೆ ಓದಿ
ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿ
ಅಖಂಡ ಆಂಧ್ರ ಇಬ್ಭಾಗವಾದ ನಂತರ, ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯೆಂದು ಘೋಷಿಸಲಾಗಿತ್ತು. ಕೇಂದ್ರ ಸರಕಾರದ ವಿಶೇಷ ಅನುದಾನದಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಹೊಸ ರಾಜಧಾನಿಯ ಕೆಲವು ಯೋಜನೆಗಳನ್ನು, ಕೇಂದ್ರದ ಅನುಮತಿಯಿಲ್ಲದೇ ಚಂದ್ರಬಾಬು ನಾಯ್ಡು ಸರಕಾರ ಕೈಗೆತ್ತಿಕೊಂಡಿದೆ ಎನ್ನುವ ಮಾತು ಕೇಳಿಬರುತ್ತಿತ್ತು.
ಚಂದ್ರಬಾಬು ನಾಯ್ಡು ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತ್ತು
2018ರ ಸಾಲಿನ ಬಜೆಟ್ ನಲ್ಲಿ ಪೋಲವರಂ ಯೋಜನೆ ಮತ್ತು ಅಮರಾವತಿ ನಿರ್ಮಾಣಕ್ಕಾಗಿ ಹೊಸ ಪ್ಯಾಕೇಜ್ ಘೋಷಿಸಬೇಕೆಂದು ಚಂದ್ರಬಾಬು ನಾಯ್ಡು ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಫೆಬ್ರವರಿ ಒಂದರಂದು ಮಂಡಿಸಲಾದ ಬಜೆಟಿನಲ್ಲಿ ಕೇಂದ್ರ ಈ ಬಗ್ಗೆ ಘೋಷಣೆ ಮಾಡಿರಲಿಲ್ಲ. ಇದು ಮೈತ್ರಿಯಲ್ಲಿನ ಅಪಸ್ವರಕ್ಕೆ ಮೇಲ್ನೋಟಕ್ಕೆ ಕಾಣುತ್ತಿರುವ ಕಾರಣ.
ಬಿಜೆಪಿ ಮೈತ್ರಿಕೂಟ ಸೇರಿಕೊಳ್ಳಲು ನನ್ನದೇನೂ ಅಭ್ಯಂತರವಿಲ್ಲ
ಪ್ರಜಾ ಸಂಕಲ್ಪ ಯಾತ್ರೆಯ ವೇಳೆ, ಬಿಜಿಪಿ ಮುಖಂಡರು ಜಗನ್ಮೋಹನ್ ರೆಡ್ಡಿಯವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ, ನಾನು ಬಿಜೆಪಿ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಆಂಧ್ರಪ್ರದೇಶದ ಅಭಿವೃದ್ದಿಗೆ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿದರೆ, 2019ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಸೇರಿಕೊಳ್ಳಲು ನನ್ನದೇನೂ ಅಭ್ಯಂತರವಿಲ್ಲ ಎಂದು ಜಗನ್ ಹೇಳಿರುವುದು, ಟಿಡಿಪಿ ಮುಖಂಡರ ಕಣ್ಣು ಕೆಂಪಗಾಗಿಸಿದೆ.
ಸದಸ್ಯ ಪಕ್ಷಗಳಿಗೆ ತೆಲುಗುದೇಶಂ ಬಹಿರಂಗ ಆಹ್ವಾನ
ಬಜೆಟ್ ಮಂಡಣೆಯಾದ ನಂತರ ಎನ್ಡಿಎ ಮೈತ್ರಿಕೂಟದಿಂದ ಹೊರಬನ್ನಿ ಎಂದು ಕೂಟದ ಇತರ ಸದಸ್ಯ ಪಕ್ಷಗಳಿಗೆ ತೆಲುಗುದೇಶಂ ಬಹಿರಂಗ ಆಹ್ವಾನ ನೀಡಿದೆ. ಸರಕಾರದಿಂದ ತೆಲುಗುದೇಶಂ ಸಚಿವರನ್ನು ವಾಪಸ್ ಕರೆಸಿಕೊಳ್ಳಿ ಎಂದು ಟಿಡಿಪಿ ಮುಖಂಡರು, ಚಂದ್ರಬಾಬು ನಾಯ್ಡುಗೆ ಮನವಿ ಮಾಡಿದ್ದಾರೆ. ಅಶೋಕ್ ಗಜಪತಿ ರಾಜು ಮತ್ತು ವೈ ಎಸ್ ಚೌಧುರಿ ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ.
ಏಕಾಂಗಿಯಾಗುವ ಭಯ ಟಿಡಿಪಿ ಮತ್ತು ಶಿವಸೇನೆಗೆ
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸಂಬಂಧ ತೀರಾ ಹಳಸಿದ್ದು ಮೈತ್ರಿಕೂಟದಿಂದ ಹೊರಬರುವುದಾಗಿ ಈಗಾಗಲೇ ಸೇನೆ ಎಚ್ಚರಿಕೆ ನೀಡಿದೆ. ಆದರೆ, ತೃತೀಯ ರಂಗ ಅಸ್ತಿತ್ವದಲ್ಲಿ ಇಲ್ಲದೇ ಇರುವುದರಿಂದ ಜೊತೆಗೆ ಯುಪಿಎ ಮೈತ್ರಿಕೂಟಕ್ಕೆ ಸೇರಲು ಪಕ್ಷದ ಸದಸ್ಯರು ಒಪ್ಪದೇ ಇರುವುದರಿಂದ, ಎನ್ಡಿಎ ಮೈತ್ರಿಕೂಟದಿಂದ ಹೊರಬಂದರೆ ಏಕಾಂಗಿಯಾಗುವ ಭಯ ಟಿಡಿಪಿ ಮತ್ತು ಶಿವಸೇನೆಗೆ ಕಾಡುತ್ತಿದೆ.