ಸ್ಪೈಸ್ಜೆಟ್ನ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷ: ಕಾರಣ ಕೇಳಿ ನೋಟಿಸ್ ಕೊಟ್ಟ ಡಿಜಿಸಿಎ
ನವದೆಹಲಿ, ಜುಲೈ 06: ಸ್ಪೈಸ್ಜೆಟ್ ವಿಮಾನಗಳಲ್ಲಿ ನಿರಂತರವಾಗಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಕಳದೆ 18 ದಿನಗಳಲ್ಲಿ 8 ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಘಟನೆಗಳ ಕುರಿತು ಕಾರಣ ಕೇಳಿ ನೋಟಿಸ್ ನೀಡಿದೆ.
ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮಂಗಳವಾರ ಒಂದೇ ದಿನ ಎರಡು ಸ್ಪೈಸ್ ಜೆಟ್ ವಿಮಾನಗಳು ತುರ್ತು ಭೂಸ್ಪರ್ಷ ಮಾಡಿದ್ದವು. ಚೀನಾಕ್ಕೆ ಹೋಗುತ್ತಿದ್ದ ಸ್ಪೈಸ್ಜೆಟ್ ಸರಕು ವಿಮಾನದ ಹವಾಮಾನ ರಾಡಾರ್ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಿತ್ತು.
ದೆಹಲಿ-ದುಬೈ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್
ಇನ್ನೊಂದು ಪ್ರಕರಣದಲ್ಲಿ ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ಜೆಟ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಎಡಗಡೆಯ ಟ್ಯಾಂಕ್ನಲ್ಲಿ ಏಕಾಏಕಿ ಇಂಧನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಶ್ಪರ್ಶ ಮಾಡಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಬೇರೆ ವಿಮಾನದ ಮೂಲಕ ದುಬೈಗೆ ಕಳುಹಿಸಲಾಗಿದೆ..
ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದರ ಕುರಿತು ನೋಟಿಸ್ನಲ್ಲಿ ಪ್ರಶ್ನೆ ಮಾಡಲಾಗಿದೆ. "ಹಲವಾರು ಸಂದರ್ಭಗಳಲ್ಲಿ, ವಿಮಾನವು ತನ್ನ ಮೂಲ ನಿಲ್ದಾಣಕ್ಕೆ ಹಿಂತಿರುಗಿದೆ ಅಥವಾ ಗಮ್ಯಸ್ಥಾನದಲ್ಲಿ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ತೆಗೆದುಕೊಳ್ಳದಿರುವುದರಿಂದ ತುರ್ತು ಭೂಸ್ಪರ್ಶಕ್ಕೆ ಕಾರಣವಾಗಿದೆ" ಎಂದು ಡಿಜಿಸಿಎ ಸೂಚನೆಯಲ್ಲಿ ತಿಳಿಸಿದೆ.
5000 ಅಡಿ ಎತ್ತರದಲ್ಲಿ ವಿಮಾನದೊಳಗೆ ಹೊಗೆ, ಪ್ರಯಾಣಿಕರು ಹೈರಾಣ
"ಕಳಪೆ ಆಂತರಿಕ ಸುರಕ್ಷತಾ ಮೇಲ್ವಿಚಾರಣೆ ಮತ್ತು ಅಸಮರ್ಪಕ ನಿರ್ವಹಣಾ ಕ್ರಮಗಳು ಸುರಕ್ಷತೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿವೆ" ಎಂದು ಡಿಜಿಸಿಎ ತಿಳಿಸಿದೆ.
ಸಮರ್ಪಕ ಸೇವೆ ನೀಡುವಲ್ಲಿ ವಿಫಲ
"ಸೆಪ್ಟೆಂಬರ್ 2021 ರಲ್ಲಿ ಡಿಜಿಸಿಎ ನಡೆಸಿದ ಹಣಕಾಸು ಮೌಲ್ಯಮಾಪನದ ವೇಳೆ ವಿಮಾನಯಾನ ಸಂಸ್ಥೆಯು ನಗದು ಮತ್ತು ಕ್ಯಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪೂರೈಕೆದಾರರು ಅಥವಾ ಅನುಮೋದಿತ ಮಾರಾಟಗಾರರಿಗೆ ನಿಯಮಿತವಾಗಿ ಪಾವತಿಸುತ್ತಿಲ್ಲ, ಇದು ಬಿಡಿಭಾಗಗಳ ಕೊರತೆಗೆ ಕಾರಣವಾಗುತ್ತದೆ" ಎಂದು ಅದು ಹೇಳಿದೆ. "ಸ್ಪೈಸ್ ಜೆಟ್ ಲಿಮಿಟೆಡ್ ಸುರಕ್ಷಿತ, ದಕ್ಷ ಮತ್ತು ವಿಶ್ವಾಸಾರ್ಹ ವಿಮಾನ ಸೇವೆಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಊಹಿಸಬಹುದು" ಎಂದು ಡಿಜಿಸಿಎ ಹೇಳಿದೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಡಿಜಿಸಿಎ ಸೂಚನೆಯ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ. "ಪ್ರಯಾಣಿಕರ ಸುರಕ್ಷತೆಯು ಅತಿಮುಖ್ಯವಾಗಿದೆ. ಸುರಕ್ಷತೆಗೆ ಅಡ್ಡಿಯಾಗುವ ಸಣ್ಣ ದೋಷವನ್ನು ಸಹ ಕೂಲಂಕಷವಾಗಿ ತನಿಖೆ ಮಾಡಲಾಗುತ್ತದೆ ಮತ್ತು ಸಮಸ್ಯೆಯನ್ನು ಸರಿಪಡಿಸಲಾಗುವುದು" ಎಂದು ಅವರು ಹೇಳಿದರು.
ತುರ್ತು ಭೂಸ್ಪರ್ಶ ಘಟನೆಗಳು
ಮೇ 4 ರಂದು ಆಯಿಲ್ ಫಿಲ್ಟರ್ ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಹಾರಾಟದ ವೇಳೆ ಒಂದು ಎಂಜಿನ್ ಸ್ಥಗಿತಗೊಂಡ ನಂತರ ಚೆನ್ನೈ-ದುರ್ಗಾಪುರ ವಿಮಾನ ಹಿಂದಿರುಗಿತು.
ಮೇ 28ರಂದು ಮುಂಬೈ-ಗೋರಖ್ಪುರ ವಿಮಾನವು 23,000 ಅಡಿಗಳಷ್ಟು ಎತ್ತರದಲ್ಲಿ ಹಾರಾಟದ ವೇಳೆ ವಿಂಡ್ಶೀಲ್ಡ್ ಬಿರುಕುಗೊಂಡ ನಂತರ ಬೇಸ್ಗೆ ಮರಳಿತು.
ಜೂನ್ 19 ರಂದು ಎತ್ತರದ ಏರಿಕೆಯೊಂದಿಗೆ ಕ್ಯಾಬಿನ್ ಒತ್ತಡ ಹೆಚ್ಚಾಗದ ಕಾರಣ ಜಬಲ್ಪುರಕ್ಕೆ ಹೊರಟ ವಿಮಾನ ದೆಹಲಿಗೆ ಮರಳಿತು.
ಜೂನ್ 19 ರಂದು ಪಾಟ್ನಾ-ದೆಹಲಿ ವಿಮಾನವು ಟೇಕ್ ಆಫ್ ಆದ ಕೆಲವೇ ದಿನಗಳಲ್ಲಿ ಹಕ್ಕಿಗೆ ಡಿಕ್ಕಿಹೊಡೆದ ಪರಿಣಾಮ ವಿಮಾನದ ಇಂಜಿನ್ಗೆ ಬೆಂಕಿ ತಗುಲಿ ತುರ್ತು ಭೂಸ್ಪರ್ಶ ಮಾಡಿತು.
ಜುಲೈ 2ರಂದು ಕ್ಯಾಬಿನ್ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಜಬಲ್ಪುರಕ್ಕೆ ಹೊರಟಿದ್ದ ವಿಮಾನ ದೆಹಲಿಗೆ ಮರಳಿತು.
ಜುಲೈ 5ರಂದು ವಿಮಾನದ ವಿಂಡ್ ಶೀಲ್ಡ್ ಬಿರುಕು ಬಿಟ್ಟ ನಂತರ ಕಾಂಡ್ಲಾ-ಮುಂಬೈ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಜುಲೈ 5ರಂದು ಇಂಧನ ಸೂಚಕವು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ದೆಹಲಿ-ದುಬೈ ವಿಮಾನವು ಕರಾಚಿಯಲ್ಲಿ ಭೂ ಸ್ಪರ್ಶ ಮಾಡಿತು.
ಜುಲೈ 5ರಂದು ಹವಾಮಾನ ರಾಡಾರ್ ವಿಫಲವಾದ ನಂತರ ಚೀನಾಕ್ಕೆ ಕಾರ್ಗೋ ವಿಮಾನವು ಕೋಲ್ಕತ್ತಾಗೆ ಹಿಂತಿರುಗಿತು.
ಕಳೆದ ವರ್ಷ 998 ಕೋಟಿ ರುಪಾಯಿ ನಷ್ಟ
ಕಳೆದ ಮೂರು ವರ್ಷಗಳಿಂದ ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಯು ನಷ್ಟ ಅನುಭವಿಸುತ್ತಿದೆ. ಅತ್ತ, ಡಿಜಿಸಿಎ ಸೇಫ್ಟಿ ಆಡಿಟ್ ನಡೆಸುತ್ತಿದೆ. ಇದರ ಬೆನ್ನಲ್ಲೇ ಸಾಲು ಸಾಲು ತಾಂತ್ರಿಕ ದೋಷಗಳು ಸ್ಪೈಸ್ಜೆಟ್ ವಿಮಾನ ಸಂಸ್ಥೆಯನ್ನು ಕಂಗೆಡಿಸಿವೆ. ಸ್ಪೈಸ್ಜೆಟ್ 2018-19ರಲ್ಲಿ 316 ಕೋಟಿ ರೂ., 2019-20ರಲ್ಲಿ 934 ಕೋಟಿ ರೂ. ಹಾಗೂ 2020-21ರಲ್ಲಿ 998 ಕೋಟಿ ರುಪಾಯಿ ನಷ್ಟ ಅನುಭವಿಸಿದೆ.
ಸ್ಪೈಸ್ಜೆಟ್ ವಿಮಾನ ಸೇವೆಗಳಲ್ಲಿ ವ್ಯತ್ಯಯ
ಸ್ಪೈಸ್ಜೆಟ್ ವಿಮಾನಗಳಲ್ಲಿ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ಕೆಲ ಸಮೀಕ್ಷೆಗಳಿಂದ ತಿಳಿದುಬಂದಿದೆ. ಮೇ ತಿಂಗಳಲ್ಲಿ ವಿಮಾನಗಳ ಹಾರಾಟ ರದ್ದುಗೊಳಿಸಿದ ವಿಮಾನಯಾನ ಸಂಸ್ಥೆಗಳಲ್ಲಿ ಸ್ಪೈಸ್ಜೆಟ್ ಮೊದಲಸ್ಥಾನ ಪಡೆದಿದೆ. ಎಂದು ಡಿಜಿಸಿಎ ವರದಿ ತಿಳಿಸಿದೆ.
ಲೋಕಲ್ಸರ್ಕಲ್ಸ್ ಎಂಬ ಖಾಸಗಿ ಸಂಸ್ಥೆಯು ವಿಮಾನದ ಸೇವೆಗಳ ಕುರಿತು ನಡೆದ ಸಮೀಕ್ಷೆಯಲ್ಲಿ, ಹೆಚ್ಚಿನ ಪ್ರಯಾಣಿಕರು ಸ್ಪೈಸ್ಜೆಟ್ ಸೇವೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ. ಸಮೀಕ್ಷೆ ನಡೆಸಿದ ಒಟ್ಟು ಪ್ರಯಾಣಿಕರಲ್ಲಿ ಶೇಕಡ 41ರಷ್ಟು ಪ್ರಯಾಣಿಕರು ವಿಮಾನಗಳ ವಿಳಂಬದ ಬಗ್ಗೆ ದೂರಿದ್ದಾರೆ. ಶೇಕಡ 28ರಷ್ಟು ಮಂದಿ ವಿಮಾನದಲ್ಲಿರುವ ಸೀಟು, ಇಂಟಿರಿಯರ್, ಮನರಂಜನಾತ್ಮಕ ಸಾಧನಗಳು ಉತ್ತಮವಾಗಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿಸಿದೆ.